ಹೈದರಾಬಾದ್ : 'ಬಕ್ರಿದ್' ಅಂಗವಾಗಿ ಗೋಹತ್ಯೆ ನಡೆಸಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೈದರಾಬಾದ್ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಮುಸ್ಲಿಮ್ ಬಾಂಧವರ ಬಕ್ರಿದ್ ಆಚರಣೆ ಹಿನ್ನೆಲೆಯಲ್ಲಿ ಎಮ್ಮೆ ಮತ್ತು ಕರುಗಳನ್ನು ಮಾರಾಟ ಮಾಡುವುದು 1977ರ ಆಂಧ್ರಪ್ರದೇಶ ಗೋಹತ್ಯಾ ನಿಷೇಧ, ಪ್ರಾಣಿ ಸಂರಕ್ಷಣಾ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧ. ಈ ಹಿನ್ನೆಲೆಯಲ್ಲಿ ಗೋವು ಹಾಗೂ ಕರುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ಸುತ್ತೋಲೆ ಹೊರಡಿಸಿದೆ.
ಪೊಲೀಸ್ ಇಲಾಖೆ ಹೊರಡಿಸುವ ಆದೇಶವನ್ನು ಉಲ್ಲಂಘಿಸಿ ಗೋವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವುದು ಕಂಡುಬಂದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಇದೇ ವೇಳೆ ಕಸಾಯಿಖಾನೆಗಳನ್ನು ನಿರ್ವಹಿಸುತ್ತಿರುವವರೊಂದಿಗೆ ಸಭೆ ನಡೆಸಿರುವ ಆಂಧ್ರಪ್ರದೇಶ ಪೊಲೀಸ್ ಅಧಿಕಾರಿಗಳು, ಕಸಾಯಿಖಾನೆ ಆವರಣಗಳಲ್ಲಿ ಹೋರಿಗಳನ್ನು ಮಾತ್ರ ಮಾರಾಟ ಮಾಡಬಹುದು ಎಂದು ಸೂಚನೆ ನೀಡಿದ್ದಾರೆ.
ಬಕ್ರಿದ್ ಆಚರಣೆ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು, ಗೋಲ್ಕೊಂಡ, ಲ್ಯಾಂಗರ್-ಹೌಸ್, ನಾಂಪಲ್ಲಿ ಮತ್ತು ಮುಶೀರಾಬಾದ್ ಪ್ರದೇಶಗಳಲ್ಲಿರುವ ಕಸಾಯಿಖಾನೆಗಳನ್ನು ನಿರ್ವಹಣೆ ಮಾಡುವವರೊಂದಿಗೆ ಸಭೆ ನಡೆಸಿದ್ದಾರೆ. ಸಭೆಯ ವೇಳೆ ಗೋವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.