ನವದೆಹಲಿ : 'ಟಿಬೇಟ್' ಸಮಸ್ಯೆ ಭಾರತದ ಸಮಸ್ಯೆ ಕೂಡ ಆಗಿದೆ ಎಂದು ಟಿಬೇಟ್ ಧರ್ಮ ಗುರು ದಲೈಲಾಮ ಹೇಳಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ನಡೆದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ದಲೈಲಾಮ, ಟಿಬೇಟ್ ಸಮಸ್ಯೆ ಭಾರತದ ಸಮಸ್ಯೆ ಕೂಡ ಆಗಿದ್ದು, ಸೌಹಾರ್ದಯುತ ಮಾತುಕತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
'ಚೀನಾ ಅಧ್ಯಕ್ಷರ ಭಾರತ ಪ್ರವಾಸ ಸ್ವಾಗತಾರ್ಹವಾಗಿದೆ. ಉಭಯ ದೇಶಗಳು ಒಂದಾದರೆ ಏಷ್ಯಾ ಖಂಡಕ್ಕೆ ಉತ್ತಮವಾಗಲಿದೆ. ಎರಡೂ ದೇಶಗಳ ಬಾಂಧವ್ಯ ವೃದ್ಧಿಯಿಂದ ಸಮರ್ಥ ಆರ್ಥಿಕತೆ ನಿರ್ಮಾಣವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಚೀನಾ ಸರ್ಕಾರ, ಭಾರತ ದೇಶವನ್ನು ನೋಡಿ ಕಲಿಯಲಿ. ನಾವು ಪ್ರಸಕ್ತ ಸಮಸ್ಯೆಯನ್ನು ಶೀಘ್ರ ಬಗೆಹರಿಸಿಕೊಳ್ಳಬೇಕಿದೆ. ಆದರೆ ಅದು ಒತ್ತಡ ಅಥವಾ ಬಲ ಪ್ರಯೋಗದಿಂದ ನಡೆಯಬಾರದು. ಪರಸ್ಪರ ಅಪಾರ ನಂಬಿಕೆ ಮತ್ತು ಆದರಗಳಿಂದ ಮಾತ್ರ ಸಮಸ್ಯೆ ಪರಿಹಾರ ಸಾಧ್ಯ ಎಂದು ದಲೈಲಾಮ ಹೇಳಿದ್ದಾರೆ.
ಚೀನಾ ಅಧ್ಯಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ಒಂದೆಡೆ ಟಿಬೆಟ್ ಸ್ವಾಯತತ್ತೆಗಾಗಿ ಆಗ್ರಹಿಸಿ ಟಿಬೆಟಿಯನ್ನರು ಹೈದ್ರಬಾದ್ ಹೌಸ್ ಹೊರವಲಯದಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ದಲೈಲಾಮ ನೀಡಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.