ಬೆಂಗಳೂರು : ಕೆಪಿಸಿಸಿ ಕಚೇರಿಗೆ ಬಂದು ಕಾರ್ಯಕರ್ತರ ಅಹವಾಲು ಸ್ವೀಕರಿಸದ ಸಚಿವರಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲ ದಿನಗಳಲ್ಲೇ ಎಲ್ಲಾ ಸಚಿವರು ಪ್ರತಿ ತಿಂಗಳು ಕೆಪಿಸಿಸಿ ಕಛೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಸ್ವೀಕರಿಸುವಂತೆ ಎಐಸಿಸಿ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಪರಮೇಶ್ವರ್ ಕೂಡ ಈ ಬಗ್ಗೆ ಸಚಿವರಿಗೆ ಗಂಭೀರವಾಗಿ ತಿಳಿಸಿದ್ದರು.
ಆರಂಭದಲ್ಲಿ ಎಲ್ಲಾ ಸಚಿವರು ಕೆಪಿಸಿಸಿ ಕಛೇರಿಗೆ ಭೇಟಿ ನೀಡಿದ್ದರು. ಆದರೆ ಕೆಲ ದಿನಗಳ ನಂತರ ಅನೇಕ ಸಚಿವರು ಕೆಪಿಸಿಸಿಯತ್ತ ತಲೆಹಾಕಿಲ್ಲ, ಇದು ಪರಮೇಶ್ವರ್ ಅಸಮಾಧಾನಕ್ಕೆ ಕಾರಣವಾಗಿದೆ.
ಈ ನಿಟ್ಟಿನಲ್ಲಿ ಪರಮೇಶ್ವರ್ ಕೆಪಿಸಿಸಿ ಕಛೇರಿಗೆ ಭೇಟಿ ನೀಡದ ಸಚಿವರಿಗೆ ಕಾರಣ ಕೇಳಿ ಪತ್ರ ಬರೆದಿದ್ದಾರೆ. ಕೆಪಿಸಿಸಿ ಕಛೇರಿಗೆ ಭೆಟಿ ನೀಡದ ಸಚಿವರ ಪಟ್ಟಿಯಲ್ಲಿ ಘಟಾನುಘಟಿ ಸಚಿವರುಗಳ ಹೆಸರೇ ಇರುವುದು ವಿಶೇಷ. ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ, ಸಹಕಾರ ಸಚಿವ ಮಹದೇವ್ ಪ್ರಸಾದ್, ವಸತಿ ಸಚಿವ ಅಂಬರೀಷ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ, ರಮಾನಾಥ್ ರೈ, ಅಭಯ ಚಂದ್ರ ಜೈನ್ ಸೇರಿದಂತೆ ಸಂಪುಟದ ಹಲವರ ಹೆಸರಿದೆ.
ಕೆಪಿಸಿಸಿ ಕಛೇರಿಗೆ ಭೇಟಿ ನೀಡದ ಬಗ್ಗೆ ರಾಜ್ಯ ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಅಲ್ಲದೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಕೂಡ ಅಸಮಾಧಾನ ವ್ಯಕ್ತಪಡಿಸಿ, ಸಭೆಯಲ್ಲೇ ಹಾಜರಿ ಪುಸ್ತಕ ಕೇಳಿದ್ದರು. ಅಲ್ಲದೇ ಕೆಪಿಸಿಸಿ ಕಛೇರಿಗೆ ಬಾರದಿರುವ ಬಗ್ಗೆ ಸ್ಪಷ್ಟನೆ ಕೇಳುವಂತೆ ಪರಮೇಶ್ವರ್ ರಿಗೆ ಸೂಚಿಸಲಾಗಿತ್ತು. ಈ ಹಿನ್ನಲೆಯಲ್ಲಿ ಪರಮೇಶ್ವರ್ ಪತ್ರ ಬರೆದಿದ್ದಾರೆ.