BW News Bureau : 'ನಾಗಾಭರಣ - ಸಿನಿಮಾವರಣ' ಈ ಚಲನ ಚಿತ್ರೋತ್ಸವದ ಮೂಲಕ ಭಾರತೀಯ ವಿದ್ಯಾಭವನ ಅಂತಾರಾಷ್ಟ್ರೀಯ ಮನ್ನಣೆ ಹಾಗೂ ಜನಪ್ರಿಯತೆ ಪಡೆದ ಕನ್ನಡ ಚಲನಚಿತ್ರ, ಟಿ.ವಿ. ಧಾರಾವಾಹಿ ಹಾಗೂ ನಾಟಕಗಳ ನಿರ್ದೇಶಕರಾಗಿರುವ ಟಿ.ಎಸ್.ನಾಗಾಭರಣ ಅವರ 14 ಚಿತ್ರಗಳ ಪ್ರದರ್ಶನೋತ್ಸವ ಮತ್ತು ವಿಚಾರ ಮಂಥನವನ್ನು ಸೆಪ್ಟೆಂಬರ್ 14ರಿಂದ ಸೆಪ್ಟೆಂಬರ್ 20ರ ವರೆಗೆ ದೇವರಾಜ ಅರಸು ರಸ್ತೆ (ರೇಸ್ ಕೋರ್ಸ್ ರಸ್ತೆ) ಯಲ್ಲಿ ಬಸವೇಶ್ವರ ವೃತ್ತದ ಬಳಿ ಇರುವ ಭಾರತೀಯ ವಿದ್ಯಾಭವನದಲ್ಲಿ ಏರ್ಪಡಿಸಲಾಗಿದೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಈ ಚಿತ್ರಗಳ ಕುರಿತು ಲೇಖನ ಸ್ಪರ್ಧೆ ಏರ್ಪಡಿಸಿದ್ದು ಚಿತ್ರಗಳನ್ನು ವೀಕ್ಷಿಸಿ 2000 ಪದಗಳ ಮಿತಿಯೊಳಗೆ ಕನ್ನಡ ಅಥವಾ ಇಂಗ್ಲಿಷ್ನಲ್ಲಿ ಅನಿಸಿಕೆ, ವಿಮರ್ಶೆ, ಪ್ರತಿಕ್ರಿಯೆಯನ್ನು ಬರೆದು ಕಳುಹಿಸಿದರೆ ಅತ್ಯುತ್ತಮ ಬರಹಗಳನ್ನು ಆಯ್ಕೆಮಾಡಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು. ಚಿತ್ರ ಪ್ರದರ್ಶನ, ವಿಚಾರ ಮಂಥನ ಹಾಗೂ ಲೇಖನ ಸ್ಪರ್ಧೆ ಯಾವುದಕ್ಕೂ ಯಾವುದೇ ಶುಲ್ಕ ಇರುವುದಿಲ್ಲ.
’ನಾಗಾಭರಣ - ಸಿನಿಮಾವರಣ’ ಚಿತ್ರೋತ್ಸವದಲ್ಲಿ ಭಾನುವಾರ ಸೆ. 14, ಆಕಸ್ಮಿಕ, ಜನುಮದ ಜೋಡಿ ಮತ್ತು ಆಸ್ಫೋಟ, ಸೋಮವಾರ ಸೆ.15, ಗ್ರಹಣ ಮತ್ತು ಬ್ಯಾಂಕರ್ ಮಾರ್ಗಯ್ಯ, ಮಂಗಳವಾರ ಸೆ. 16, ಚಿನ್ನಾರಿ ಮುತ್ತಾ ಮತ್ತು ಕಂಸಾಳೆ ಕೈಸಾಳೆ, ಬುಧವಾರ ಸೆ. 17, ಕಲ್ಲರಳಿ ಹೂವಾಗಿ ಮತ್ತು ನಾಗಮಂಡಲ, ಗುರುವಾರ ಸೆ. 18, ಸಂತ ಶಿಶುನಾಳ ಶರೀಫ ಮತ್ತು ಮೈಸೂರು ಮಲ್ಲಿಗೆ, ಶುಕ್ರವಾರ ಸೆ. 19, ಸಿಂಗಾರವ್ವಾ ಮತ್ತು ವಸುಂಧರ ಹಾಗೂ ಶನಿವಾರ ಸೆ. 20 ಚಿಗುರಿದ ಕನಸು ಪ್ರದರ್ಶನಗೊಳ್ಳುವ ಚಿತ್ರಗಳಾಗಿವೆ.
ಸೆಪ್ಟೆಂಬರ್ 20ರಂದು ಶನಿವಾರ ನಡುದಿನದ ಬಳಿಕ 2-30 ರಿಂದ 4.೦೦ರ ವರೆಗೆ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಅಧ್ಯಕ್ಷತೆಯಲ್ಲಿ ನಾಗಾಭರಣ ಚಿತ್ರಗಳ ಮೌಲಿಕತೆ ಕುರಿತು ಚಲನಚಿತ್ರ ತಜ್ಞರು ಮತ್ತು ವಿಮರ್ಶಕರುಗಳಾದ ಎನ್.ಕೆ. ಪದ್ಮನಾಭ, ಎಚ್. ಗಿರೀಶ್ ರಾವ್ (ಜೋಗಿ) ಎನ್.ಎಸ್. ಶ್ರೀಧರಮೂರ್ತಿ ಮತ್ತು ಎನ್. ವಿದ್ಯಾಶಂಕರ್ ವಿಚಾರ ಮಂಥನ ನಡೆಸಲಿದ್ದಾರೆ. ಲೇಖನ ಸ್ಪರ್ಧೆಗೆ ವಿದ್ಯಾರ್ಥಿಗಳು ತಮ್ಮ ಬರಹಗಳನ್ನು ಸೆಪ್ಟೆಂಬರ್ 25 ರೊಳಗೆ ಸಲ್ಲಿಸಬೇಕು.