ಸಿಕಾರ್ : ಆಧಾರ್ ಕಾರ್ಡ್ ನ್ಯೂನತೆಗಳ ಬಗ್ಗೆ ಈ ಹಿಂದೆ ಹಲವು ಆರೋಪಗಳನ್ನು ಕೇಳಿದ್ದೀವಿ, ಗುಜರಾತ್ ನಲ್ಲಿ ನಾಯಿಗೂ ಆಧಾರ್ ಕಾರ್ಡ್ ನೀಡಲಾಗಿತ್ತು. ಆದರೆ ಸಕಲ ಸೃಷ್ಠಿಗೂ ಆಧಾರವಾಗಿರುವ ದೇವರಿಗೇ ನಮ್ಮ ಘನ ಸರ್ಕಾರ ಆಧಾರ್ ಕಾರ್ಡ್ ನೀಡಿದೆ.
ಅಂದಹಾಗೆ ಆಧಾರ್ ಕಾರ್ಡ್ ಪಡೆದ ಆ ದೇವರು ಯಾರು ಅಂದ್ರೆ ಶ್ರೀರಾಮಚಂದ್ರನ ಪರಮಭಕ್ತ, ಪವನ ಪುತ್ರ ಹನುಮಂತ! ರಾಜಸ್ಥಾನದಲ್ಲಿ ಆಧಾರ್ ಕಾರ್ಡ್ ನೀಡುವವರು ಭಕ್ತಿಯ ಪರಾಕಾಷ್ಟೆ ಮೆರೆದಿದ್ದು ಚಿರಂಜೀವಿಗಳಲ್ಲಿ ಒಬ್ಬನಾದ ಹನುಮಂತನಿಗೂ ಆಧಾರ್ ಕಾರ್ಡ್ ವಿತರಿಸಿದ್ದಾರೆ.
2094705195411 ಹನುಮಂತನ ಆಧಾರ್ ಕಾರ್ಡ್ ನೋಂದಣಿ ಸಂಖ್ಯೆಯಾಗಿದ್ದು ಪವನ ದೇವರ ಪುತ್ರ ಎಂದು ನಮೂದಿಸಲಾಗಿದೆ. ವಿಷಯ ಇಷ್ಟಕ್ಕೇ ನಿಂತಿಲ್ಲ ಹನುಮಂತನಿಗೊಂದು ದೂರವಾಣಿ ಸಂಖ್ಯೆಯನ್ನೂ ನೀಡಿರುವ ಪುಣ್ಯಾತ್ಮರು ಆತನ ಬೆರಳಚ್ಚನ್ನೂ ಪಡೆದಿದ್ದಾರೆ. ಈ ಆಧಾರ್ ಕಾರ್ಡ್ ಬೆಂಗಳೂರಿನಿಂದ ದಂತರಾಮ್ ಘರ್ ಎಂಬ ಊರಿಗೆ ರವಾನೆಯಾಗಿತ್ತು ಎಂಬುದು ಮತ್ತೊಂದು ವಿಶೇಷ. ಆದರೆ ಆ ಊರಿನಲ್ಲಿ ಯಾರೂ ಆಧಾರ್ ಕಾರ್ಡ್ ಪಡೆದುಕೊಳ್ಳದ ಕಾರಣ ಅದು ಬೆಂಗಳೂರಿನ ಕೇಂದ್ರ ಅಂಚೆ ಕಚೇರಿಗೆ ಬಂದು ತಲುಪಿದೆ.
ಹನುಮಾನ್ ದೇವರ ಆಧಾರ್ ಕಾರ್ಡ್ ನೋಡಿ ಅವಕ್ಕಾಗಿದ್ದಾರೆ. ನಂತರ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕಾರ್ಡ್ ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾರೆ. ಅದರೆ, ಮೊಬೈಲ್ ಸ್ವಿಚ್ ಆಫ್ ಆಗಿದೆ. ತನಿಖೆ ಮುಂದುವರೆಸಿದಾಗ ವಿಕಾಸ್ ಎಂಬುವವರು ಈ ಕಾರ್ಡ್ ತಯಾರಿಸಿದ್ದು ಎಂದು ತಿಳಿದು ಬಂದಿದೆ.
ಈ ಹಿಂದೆ ಗುಜರಾತ್ ನಲ್ಲಿ ಸೋನು' ಹೆಸರಿನ ನಾಯಿಗೆ ಆಧಾರ್ ಕಾರ್ಡ್ ನೀಡಲಾಗಿತ್ತು. ನಾಯಿಯ ಹಸ್ತ, ಕಣ್ಣಿನ ಮಾದರಿ ಪಡೆಯಲಾಗಿತ್ತು. ನಾಯಿಗೆ ಆಧಾರ್ ಕಾರ್ಡ್ ನೀಡಿದ್ದ ಕಾರಣ ಸಿಬ್ಬಂಧಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು.