ನವದೆಹಲಿ : ಹತ್ತಾರು ಅಮಾಯಕ ಮಕ್ಕಳನ್ನು ಹತ್ಯೆಗೈದು ಭಕ್ಷಿಸಿದ್ದ ಉತ್ತರ ಪ್ರದೇಶದ ನಿಠಾರಿ ಗ್ರಾಮದ ನರಭಕ್ಷಕ ಸುರಿಂದರ್ ಕೋಲಿಯ ಗಲ್ಲು ಶಿಕ್ಷೆ ಜಾರಿಗೆ ಸುಪ್ರೀಂ ಕೋರ್ಟ್ ಒಂದು ವಾರದ ತಡೆ ನೀಡಿ, ಆದೆಶ ಹೊರಡಿಸಿದೆ.
ಮಧ್ಯರಾತ್ರಿ ತಡೆಯಾಜ್ನೆ ಜಾರಿಯಾಗಿರುವುದು ವಿಶೇಷ. ಇದರೊಂದಿಗೆ ಸೆ.8ರ ಬಳಿಕ ಉತ್ತರ ಪ್ರದೇಶದ ಮೇರಠ್ ಜೈಲಿನಲ್ಲಿ ಗಲ್ಲಿಗೇರಲು ಸಿದ್ಧವಾಗಿದ್ದ ಕೋಲಿಗೆ ತಾತ್ಕಾಲಿಕ ಜೀವದಾನ ಸಿಕ್ಕಿದೆ.
ಕೋಲಿಯನ್ನು ಯಾವುದೇ ಸಮಯದಲ್ಲಿ ಗಲ್ಲಿಗೇರಿಸುವ ಸಾಧ್ಯತೆ ಇದೆ. ಹೀಗಾಗಿ ತಕ್ಷಣವೇ ಆತನ ಶಿಕ್ಷೆ ಜಾರಿಗೆ ತಡೆ ನೀಡಬೇಕು ಎಂದು ಹಿರಿಯ ವಕೀಲರಾದ ಇಂದಿರಾ ಜೈಸಿಂಗ್, ಯುಗ್ ಚೌದರಿ ಭಾನುವಾರ ಮಧ್ಯರಾತ್ರಿ ಅರ್ಜಿ ಸಲ್ಲಿಸಿದ್ದರು.
ಗಲ್ಲುಶಿಕ್ಷೆಗೆ ಗುರಿಯಾದವರು ಸಲ್ಲಿಸಿದ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಬಹಿರಂಗವಾಗಿ ನಡೆಸಬೇಕು ಎಂಬ ಸೆ.2ರ 2014ರ ಸುಪ್ರೀಂ ಕೋರ್ಟ್ ನ ಮಹತ್ವದ ತೀರ್ಪಿನ ಆದೇಶವನ್ನು ಎತ್ತಿ ತೋರಿಸಲಾಗಿತ್ತು. ಈ ಹಿನ್ನಲೆಯಲ್ಲಿ ಮಧ್ಯರಾತ್ರಿ 1.40ರ ವೇಳೆಗೆ ಅರ್ಜಿಯ ತುರ್ತು ವಿಚಾರಣೆ ನಡೆಸಿದ ನ್ಯಾ.ಹೆಚ್.ಎಲ್.ದತ್ತು ಮತ್ತು ನ್ಯಾ.ಎ.ಆರ್.ದವೆ ಅವರ ನ್ಯಾಯಪೀಠ, ಕೋಲಿಗೆ ಗಲ್ಲುಶಿಕ್ಷೆ ಜಾರಿಗೆ ತಡೆ ನೀಡಿದೆ.