Chikkpet : ದೇವಾಲಯಗಳನ್ನು ಸರ್ಕಾರ ಶಾಶ್ವತವಾಗಿ ಸ್ವಾಧೀನಪಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಡಾ.ಸುಬ್ರಹ್ಮಣ್ಯಂ ಸ್ವಾಮಿ ಹೇಳಿದ್ದಾರೆ.
ಸೆ.6ರಂದು ಬೆಂಗಳೂರಿನ ಆರ್.ವಿ ಕಾಲೇಜು ಸಭಾಂಗಣದಲ್ಲಿ ಹಿಂದೂ ಧರ್ಮ ಆಚಾರ್ಯ ಸಭಾ, ಜಿಜ್ನಾಸಾ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಹಿಂದೂ ದೇವಾಲಯಗಳು ಮತ್ತು ಸರ್ಕಾರಿ ನಿಯಂತ್ರಣ ವಿಚಾರ ಸಂಕಿರಣದಲ್ಲಿ ಮಾತನಾಡಿದ ಸುಬ್ರಹ್ಮಣ್ಯಂ ಸ್ವಾಮಿ, ಭಾರತದ ಸಂವಿಧಾನ ಪರಿಚ್ಛೇಧ 25-26ರ ಪ್ರಕಾರ ಸರ್ಕಾರ ಹಿಂದೂ ಧಾರ್ಮಿಕ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರಕ್ಕೆ ಅಧಿಕಾರವಿದೆ. ದೇವಾಲಯಗಳಲ್ಲಿ ಅವ್ಯವಹಾರ ನಡೆದಿದ್ದರೆ ವ್ಯವಸ್ಥೆಯನ್ನು ಸರಿಪಡಿಸಿದ ನಂತರ ಸಂಬಂದಪಟ್ಟ ಟ್ರಸ್ಟ್ ಗಳಿಗೆ ವಾಪಸ್ ಹಸ್ತಾಂತರಿಸಬೇಕೆಂದು ಸುಬ್ರಹ್ಮಣ್ಯಂ ಸ್ವಾಮಿ ತಿಳಿಸಿದ್ದಾರೆ.
ದೇವಾಲಯಗಳ ಜೊತೆಗೆ ಮಸೀದಿ, ಚರ್ಚ್ ಗಳನ್ನು ಸ್ವಾಧೀನಕ್ಕೆ ಪಡೆಯುವ ಅಧಿಕಾರ ಸರ್ಕಾರಕ್ಕಿದ್ದು ಈ ವಿಷಯದಲ್ಲಿ ಉಂಟಾಗಿರುವ ಅಸಮತೋಲನವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಶೀಘ್ರವೇ ಪರಿಹರಿಸಲಿದೆ ಎಂದಿರುವ ಬಿಜೆಪಿ ಮುಖಂಡ, ಎನ್.ಡಿ.ಎ ಸರ್ಕಾರ ಮಸೀದಿ, ಚರ್ಚ್ ಗಳನ್ನೂ ಸ್ವಾಧೀನಕ್ಕೆ ಪಡೆಯುವ ಸುಳಿವು ನೀಡಿದ್ದಾರೆ.
ಹಿಂದೂ ಧರ್ಮದ ಪುನರುತ್ಥಾನದ ಕೇಂದ್ರವಾಗಿರುವ ದೇವಾಲಯ, ಮಸೀದಿ, ಚರ್ಚ್ ಗಳಿಗಿಂತ ಭಿನ್ನ. ಅಮೆರಿಕಾದಲ್ಲಿ ಚರ್ಚ್ ಗಳನ್ನು ಕಟ್ಟಡಗಳನ್ನಾಗಿ ಮಾರ್ಪಾಡು ಮಾಡಿ ಮಾರಾಟ ಮಾಡುತ್ತಾರೆ. ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮಸೀದಿಗಳನ್ನು ಕೆಡವುತ್ತಾರೆ. ದೇವಾಲಯ ಒಮ್ಮೆ ನಿರ್ಮಾಣವಾದರೆ ಎಂದಿಗೂ ದೇವಾಲಯವಾಗಿಯೇ ಉಳಿಯುತ್ತದೆ. ಸೌದಿಯಲ್ಲಿ ಮಸೀದಿಗಳನ್ನು ಒಂದೆಡೆ ಒಡೆದು ಮತ್ತೊಂದೆಡೆ ನಿರ್ಮಿಸಬಹುದಾಗಿದೆ. ಅಂತೆಯೇ ಭಾರತದಲ್ಲಿ ಪ್ರಸಿದ್ಧ ದೇವಾಲಯಗಳ ಬಳಿ ನಿರ್ಮಾಣವಾಗಿರುವ ಮಸೀದಿಗಳನ್ನು ಒಡೆದು ಬೇರೆಡೆಗೆ ಸ್ಥಳಾಂತರಿಸುತ್ತೇವೆ. ಈ ಮೂಲಕ ಕಾಶೀ ವಿಶ್ವನಾಥ ದೇವಲಯ, ಮಥುರಾ, ಅಯೋಧ್ಯಾ ದೇವಾಲಯಗಳು ಗತ ವೈಭವವನ್ನು ಪುನಃ ಪಡೆಯಲಿದೆ ಎಂದು ಸುಬ್ರಹ್ಮಣ್ಯಂ ಸ್ವಾಮಿ ತಿಳಿಸಿದ್ದಾರೆ.
ನೈತಿಕತೆ, ಸಾರ್ವಜನಿಕ ವ್ಯವಸ್ಥೆ, ಆರೋಗ್ಯವಂತ ಸಾಮಾಜಕ್ಕೆ ಧಕ್ಕೆಯುಂಟು ಮಾಡುವ ಧಾರ್ಮಿಕ ಕೇಂದ್ರಗಳನ್ನು ಮಾತ್ರ ಸರ್ಕಾರ ನಿಯಂತ್ರಿಸಬೇಕು. ಆದರೆ ಹಣಕಾಸು ದುರುಪಯೋಗವಾಗುವ ನೆಪವೊಡ್ಡಿ ಸರ್ಕಾರ, ದೇಶಾದ್ಯಂತ 4 ಲಕ್ಷ ದೇವಾಲಯಗಳನ್ನು ದಶಕಗಳಿಂದ ನಿಯಂತ್ರಿಸುತ್ತಿದೆ. ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕೆಂದು ಪಿ.ಐ.ಎಲ್ ಸಲ್ಲಿಸಿದರೆ ಸಂಬಂಧಿಸಿದ ಟ್ರಸ್ಟ್ ಗೆ ವಾಪಸ್ ನೀಡಲು ಕೋರ್ಟ್ ಸಮ್ಮತಿಸಬಹುದು ಆದರೆ ಅದಕ್ಕೆ ಸಂಬಂಧಪಟ್ಟ ಟ್ರಸ್ಟ್ ಗಳ ಬಗ್ಗೆಯೇ ಭಿನ್ನಾಭಿಪ್ರಾಯವಿರುವುದರಿಂದ ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿದ್ದನ್ನು ನೀಡುವುದಾದರೂ ಯಾರಿಗೆ ಎಂದು ಸ್ವಾಮಿ ಪ್ರಶ್ನಿಸಿದ್ದಾರೆ.
ಹಿಂದೂ ಧರ್ಮ ಆಚಾರ್ಯ ಸಭಾ ಸರ್ಕಾರದ ನಿಯಂತ್ರಣದಲ್ಲಿರುವ ದೇವಾಲಯಗಳನ್ನು ವಾಪಸ್ ಪಡೆಯುವ ಜವಾಬ್ದಾರಿ ವಹಿಸಿಕೊಳ್ಳಲಿ ಅಥವಾ ಸರ್ಕಾರವೇ ಧಾರ್ಮಿಕ ಪರಿಷತ್ ಸ್ಥಾಪಿಸಿ ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಂಡ ದೇವಾಲಯಗಳು ಒಂದೇ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ಸುಬ್ರಹ್ಮಣ್ಯಂ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಸರ್ಕಾರದ ಸ್ವಾಧೀನದಲ್ಲಿರುವ ಎಲ್ಲಾ ದೇವಾಲಯಗಳು ಬಿಜೆಪಿ ಸರ್ಕಾರದ ಪ್ರಸಕ್ತ ಅವಧಿಯಲ್ಲೇ ವಾಪಸ್ ದೊರೆಯಲಿವೆ ಎಂದು ಭರವಸೆ ನೀಡಿದ್ದಾರೆ.
ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಹಿಂದೂ ಧರ್ಮ ಆಚಾರ್ಯ ಸಭಾದ ಸ್ವಾಮಿ ದಯಾನಂದ ಸರಸ್ವತಿ, ನಮ್ಮ ದೇವಾಲಯಗಳನ್ನು ನಾವೇ ನಿಯಂತ್ರಿಸಲು ಸಾಧ್ಯವಾಗದೇ ಇರುವುದು ಹಿಂದೂ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಒಂದು ವೇಳೆ ಸರ್ಕಾರ ದೇವಾಲಯಗಳನ್ನು ನಿಯಂತ್ರಿಸುವುದಾದರೆ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕೆಂದು ಸ್ವಾಮಿ ದಯಾನಂದ ಸರಸ್ವತಿ ಆಗ್ರಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಪಾಲ, ನ್ಯಾ. ರಾಮಾಜೋಯಿಸ್, ಆದಿಚುಂಚನಗಿರಿ ಮಠಾಧೀಶರಾದ ಸ್ವಾಮಿ ನಿರ್ಮಲಾನಂದನಾಥ, ಟೆಂಪಲ್ ವರ್ಷಿಪರ್ಸ್ ಸೊಸೈಟಿಯ ಟಿ.ಆರ್ ರಮೇಶ್ ಭಾಗವಹಿಸಿದ್ದರು.