ನವದೆಹಲಿ : ಒಂದೆಡೆ ದೇಶಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಗೋಹತ್ಯೆ ನಡೆಯುತ್ತಿದ್ದರೆ ದೇಸಿ ಗೋತಳಿ ಅಭಿವೃದ್ಧಿಗೆ ರಾಷ್ಟ್ರೀಯ ಗೋಕುಲ್ ಮಿಷನ್ ಘೋಷಿಸಿರುವ ಕೇಂದ್ರ ಸರ್ಕಾರ ಒಂದು ಹೆಜ್ಜೆಮುಂದಿರಿಸಿದ್ದು ದೇಸಿ ಗೋತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ 2 ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಇದಕ್ಕೆ ರಾಷ್ಟ್ರೀಯ ಕಾಮಧೇನು ತಳಿ ಅಭಿವೃದ್ಧಿ ಕೇಂದ್ರ ಎಂದು ಹೆಸರಿಡಲಾಗಿದೆ.
ದೇಸಿ ಗೋ ತಳಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಾಲು ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡುತ್ತಿರುವ ರೈತರು ಹೈಬ್ರೀಡ್ ತಳಿಗಳತ್ತ ಮುಖ ಮಾಡುತ್ತಿದ್ದಾರೆ. ದೇಸಿ ಗೋ ಅಳಿಗಳ ಸಂಖ್ಯೆ ಶೇ.9ರಷ್ಟು ಕುಸಿತವಾಗಿದ್ದರೆ ಹೈಬ್ರೀಡ್ ತಳಿಗಳ ಸಂಖ್ಯೆ ಶೇ.20ರಷ್ಟು ಹೆಚ್ಚಾಗಿದೆ ಎಂದು 2012 ಜಾನುವಾರು ಗಣತಿಯಲ್ಲಿ ತಿಳಿದುಬಂದಿದೆ. ಹೀಗಾಗಿ ದೇಸಿ ಗೋ ತಳಿಗಳ ಸಂತತಿ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮುಂದಾಗಿದೆ.
50 ಕೋಟಿ ರೂ ವೆಚ್ಚದಲ್ಲಿ 2 ತಳಿ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ತಲಾ ಒಂದು ಕೇಂದ್ರ ಆರಂಭಿಸಲಾಗುವುದೆಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಹೇಳಿದ್ದಾರೆ. ಈ ಕೇಂದ್ರಗಳ ಸಹಾಯದಿಂದ ವಿಜ್ನಾನಿಗಳು ದೇಸಿ ತಳಿಗಳೇ ಹೈನುಗಾರಿಕೆಗೂ ಸೂಕ್ತವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಲಿದ್ದಾರೆ.