ನವದೆಹಲಿ : ತಾನು ಎಸಗಿದ ಅಪರಾಧಕ್ಕೆ ಸಿಗಬಹುದಾದ ಗರಿಷ್ಠ ಶಿಕ್ಷೆಯ ಪೈಕಿ ಅರ್ಧದಷ್ಟನ್ನು ಜೈಲಿನಲ್ಲಿ ಕಳೆದಿರುವ ಎಲ್ಲಾ ವೀಚಾರಣಾಧೀನ ಕೈದಿಗಳನ್ನು ಬಿಡುಗಡೆಮಾಡುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ.
ಈ ನಿಟ್ಟಿನಲ್ಲಿ ಕೆಳಹಂತದ ನ್ಯಾಯಾಂಗ ಅಧಿಕಾರಿಗಳು ಅ.1ರಿಂದ ಪ್ರತಿ ಜೈಲಿಗೂ ಭೇಟಿ ನೀಡಿ, ಅರ್ಧದಷ್ಟು ಜೈಲು ಶಿಕ್ಷೆ ಅನುಭವಿಸಿದ ವಿಚಾರಣಾಧೀನ ಕೈದಿಗಳು ಕಂಡುಬಂದರೆ ಅವರನ್ನುಬಿಡುಗಡೆ ಮಾಡಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಅಲ್ಲದೇ ಎರಡುತಿಂಗಳಲ್ಲಿ ವಿಚಾರಣಾಧೀನ ಕೈದಿಗಳನ್ನು ಬಿಡುಗಡೆಮಾಡಬೇಕು ಎಂದು ಗಡುವು ನೀಡಿರುವ ಸುಪ್ರೀಂ ಕೋರ್ಟ್, ದೇಶದಲ್ಲಿನ ಒಟ್ಟಾರೆ ಕೈದಿಗಳ ಪೈಕಿ ಶೇ.60ರಷ್ಟು ಮಂದಿ ವಿಚಾರಣಾಧೀನ ಕೈದಿಗಳಾಗಿರುವುದಕ್ಕೆ ಕಳವಳ ವ್ಯಕ್ತಪಡಿಸಿದೆ.
ಜಾಮೀನು ಖಾತ್ರಿ ಅಥವಾ ಬಾಂಡ್ ಒದಗಿಸಲು ಸಾಧ್ಯವಾಗದೇ ಜೈಲಿನಲ್ಲಿಯೇ ಇದ್ದಂತಹ ಹಲವಾರು ಕೈದಿಗಳಿಗೆ ನ್ಯಾಯಾಲಯದ ಈ ಆದೇಶದಿಂದ ಬಿಡುಗಡೆ ದೊರೆಯುವಂತಾಗಿದೆ.