ಲಖ್ನೌ : 'ಲವ್ ಜಿಹಾದ್' ಪದ ಬಳಕೆಗೆ ನಿರ್ಬಂಧ ವಿಧಿಸಿ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ 10 ದಿನಗಳೊಳಗೆ ಉತ್ತರಿಸಲು ಅಲಹಾಬಾದ್ ನ್ಯಾಯಾಲಯ, ಉತ್ತರ ಪ್ರದೇಶ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.
ಲವ್ ಜಿಹಾದ್ ಹೆಸರಿನಲ್ಲಿ ಕೋಮುದ್ವೇಷ ಹಬ್ಬಿಸಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ಲವ್ ಜಿಹಾದ್ ಪದ ಬಳಕೆಗೆ ನಿರ್ಬಂಧ ಹೇರಲು ನಿರ್ದೇಶನ ನೀಡಬೇಕೆಂದು ಪಂಕಜ್ ತಿವಾರಿ ಎಂಬುವವರು ಅಲಹಾಬಾದ್ ಹೈಕೋರ್ಟ್ ಗೆ ಪಿ.ಐ.ಎಲ್ ಸಲ್ಲಿಸಿದ್ದರು. ಅಲ್ಲದೇ ಲವ್ ಜಿಹಾದ್ ಬಗ್ಗೆ ಹೇಳಿಕೆ ನೀಡುತ್ತಿರುವ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ, 10 ದಿನಗಳಲ್ಲಿ ಕೋರ್ಟ್ ಗೆ ಈ ಪ್ರಕರಣದ ಬಗ್ಗೆ ಉತ್ತರಿಸಬೇಕೆಂದು ಸರ್ಕಾರಕ್ಕೆ ಸೂಚನೆ ನೀಡಿದೆ.
ಇದೇ ವೇಳೆ, ಉತ್ತರ ಪ್ರದೇಶದಲ್ಲಿ ನಡೆಯಲಿರುವ ಲೋಕಸಭಾ, ವಿಧಾನಸಭಾ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸದಂತೆ ಕೇಂದ್ರ ಸಚಿವ ಕಲ್ ರಾಜ್ ಮಿಶ್ರಾ ಅವರಿಗೆ ನಿರ್ಭಂಧ ಹೇರಲು ನಿರ್ದೇಶಿಸಬೇಕು ಎಂದು ಪಿ.ಐ.ಎಲ್ ನಲ್ಲಿ ಕೋರ್ಟ್ ಗೆ ಮನವಿ ಮಾಡಲಾಗಿದೆ.
ಒಂದು ವೇಳೆ ಲವ್ ಜಿಹಾದ್ ನಿಲ್ಲದೇ ಇದ್ದಲ್ಲಿ ಜಿಹಾದಿಗಳಿಗೆ ಅರ್ಥವಾಗುವ ಭಾಷೆಯಲ್ಲೇ ಉತ್ತರಿಸುವುದಾಗಿ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಂಘಟನೆಗಳು ಯೋಗಿ ಆದಿತ್ಯನಾಥ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದವು.