ಹೈದರಾಬಾದ್ : 'ಆಂಧ್ರಪದೇಶ'ಕ್ಕೆ ನೂತನ ರಾಜಧಾನಿಯನ್ನು ಘೋಷಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ವಿಜಯವಾಡದ ಬಳಿ ನೂತನ ರಾಜಧಾನಿ ನಿರ್ಮಾಣಮಾಡಲಾಗುವುದು ಎಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸೆ.4ರಂದು ಆಂಧ್ರ ವಿಧಾನಸಭೆಯಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, ರಾಜ್ಯದ ಜನತೆ ಅಭಿವೃದ್ಧಿ ದೃಷ್ಠಿಯಿಂದ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ನೂತನ ರಾಜಧಾನಿ ನಿರ್ಮಾಣದ ಬಗ್ಗೆ 20 ಪುಟಗಳ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ವಿಜಯವಾಡದಲ್ಲಿ ರಾಜಧಾನಿ ನಿರ್ಮಾಣ ಮಾಡುವುದರೊಂದಿಗೆ ರಾಜ್ಯದಲ್ಲಿ 3 ಮೆಗಾ ಸಿಟಿ, 14 ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಲಾಗುತ್ತದೆ ಎಂದು ನಾಯ್ಡು ತಿಳಿಸಿದ್ದಾರೆ.
ವಿಜಯವಾಡ ಬಳಿ ರಾಜಧಾನಿ ನಿರ್ಮಾಣಕ್ಕೆ ಪ್ರತಿಪಕ್ಷ ನಾಯಕ ಜಗನ್ ಮೋಹನ್ ರೆಡ್ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಯಲಸೀಮ ಪ್ರದೇಶದಲ್ಲಿ ರಾಜಧಾನಿ ನಿರ್ಮಾಣ ಮಾಡಬೇಕೆಂದು ವೈ.ಎಸ್.ಆರ್ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ.
ಅಲ್ಲದೇ ನೂತನ ರಾಜಧಾನಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚನೆ ಮಾಡಿದ್ದ ಶಿವರಾಮಕೃಷ್ಣ ಸಮಿತಿ ನೀಡಿದ್ದ ವರದಿಯನ್ನು ಗಾಳಿಗೆ ತೂರಿ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ ಎಂದು ವೈ.ಎಸ್.ಆರ್ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯವಾಡ, ಗುಂಟೂರು ಭಾಗದಲ್ಲಿ ರಾಜಧಾನಿ ನಿರ್ಮಾಣ ಮಾಡುವುದು ಸೂಕ್ತವಲ್ಲ ಎಂದು ಶಿವರಾಮಕೃಷ್ಣ ಸಮಿತಿ ವರದಿ ನೀಡಿತ್ತು.
ವಿಜಯವಾಡದಲ್ಲೇ ಚಂದ್ರಬಾಬು ನಾಯ್ಡು ಅವರು ವಿಭಜಿತ ಆಂಧ್ರಪ್ರದೇಶದ ಪ್ರಥಮ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಲ್ಲೇ ರಾಜಧಾನಿ ನಿರ್ಮಾಣವಾಗುವ ಬಗ್ಗೆ ಸುಳಿವು ನೀಡಿದ್ದರು. ಸೆ.1ರಂದು ರಾಜಧಾನಿ ನಿರ್ಮಾಣದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು.
ಹೈದರಾಬಾದ್ 10 ವರ್ಷಗಳ ಕಾಲ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ಜಂಟಿ ರಾಜಧಾನಿಯಾಗಿ ಕಾರ್ಯನಿರ್ವಹಿಸಲಿದೆ ಈ ಅವಧಿಯಲ್ಲಿ ಆಂಧ್ರಪ್ರದೇಶಕ್ಕೆ ನೂತನ ರಾಜಧಾನಿಯನ್ನು ಅಭಿವೃದ್ಧಿಪಡಿಸಲಾಗುತ್ತದೆ.