ಟೋಕಿಯೋ : ಭಾರತ ಎನ್.ಪಿ.ಟಿಗೆ ಸಹಿ ಹಾಕದೇ ಇರುವ ಬಗ್ಗೆ ಜಪಾನ್ ನಲ್ಲಿ ಸೆಕ್ರೆಡ್ ಹಾರ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಿದ್ದು ಭಾರತೀಯ ಸಮಾಜದ ಡಿ.ಎನ್.ಎ ನಲ್ಲಿ ಬೆರೆತಿರುವ ಅಹಿಂಸೆಯ ತತ್ವ ಯಾವುದೇ ಅಂತರರಾಷ್ಟ್ರೀಯ ಒಪ್ಪಂದಕ್ಕಿಂತಲೂ ಮೇರುಮಟ್ಟದ್ದಾಗಿದೆ ಎಂದು ಹೇಳಿದ್ದಾರೆ.
ಜಪಾನ್ ಪ್ರವಾಸದ 4ನೇ ದಿನದಂದು ಪ್ರಧಾನಿ ನರೇಂದ್ರ ಮೋದಿ ವಿಶ್ವವಿದ್ಯಾನಿಯಲ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು ಈ ಸಂದರ್ಭದಲ್ಲಿ ಅಣ್ವಸ್ತ್ರಗಳನ್ನು ಹೊಂದಿದ್ದರೂ (Nuclear Non-Proliferation Treaty) ಎನ್.ಪಿ.ಟಿಗೆ ಸಹಿ ಹಾಕದೇ ಇರುವ ಭಾರತದ ನಿರ್ಧಾರದ ಬಗ್ಗೆ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿರುವ ಮೋದಿ, ಭಾರತ, ಶಾಂತಿಗಾಗಿ ಜೀವಿಸಿದ್ದ ಬುದ್ಧ ನೆಲ, ಬುದ್ಧನ ತತ್ವ ಭಾರತದಲ್ಲಿ ಇಂದಿಗೂ ಪ್ರಚಲಿತವಾಗಿದೆ. ಭಾರತೀಯರಲ್ಲಿ ಬೆರೆತಿರುವ ಅಹಿಂಸಾ ತತ್ವ ಯಾವುದೇ ಅಂತರರಾಷ್ಟ್ರೀಯ ಒಪ್ಪಂದಕ್ಕಿಂತಲೂ ಉನ್ನತವಾದದ್ದು ಎಂದು ಮೋದಿ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದಂತೆ, ಕೆಲವು ಪ್ರಕ್ರಿಯೆಗಳಿರುತ್ತವೆ. ಆದರೆ ಅದಕ್ಕಿಂತಲೂ ಉನ್ನತವಾದದ್ದು ಸಮಾಜದೆಡೆಗಿನ ಬದ್ಧತೆ, ಎನ್.ಪಿ.ಟಿ ಒಪ್ಪಂದದಲ್ಲಿ ಕೆಲವು ದೋಷಗಳಿದ್ದ ಕಾರಣ ಭಾರತ ಸಹಿ ಹಾಕಿಲ್ಲ ಎಂದು ಮೋದಿ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.
ಇದೇ ವೇಳೆ ಸ್ವಾತಂತ್ರ್ಯ ಚಳುವಳಿಯ ಉದಾಹರಣೆ ನೀಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯ ಪಡೆಯಲು ಇಡೀ ದೇಶ ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ಅಹಿಂಸಾ ಮಾರ್ಗ ಅನುಸರಿಸಿತ್ತು. ಅಲ್ಲದೇ ವಸುದೈವ ಕುಟುಂಬಕಂ( ಇಡಿ ವಿಶ್ವ ಒಂದು ಕುಟುಂಬ) ಎಂಬ ಪರಿಕಲ್ಪನೆಯನ್ನು ಸಹಸ್ರ ವರ್ಷಗಳ ಹಿಂದೆಯೇ ಹೊಂದಿದ್ದ ಭಾರತ, ವಿಶ್ವದ ಯಾವುದೇ ದೇಶಕ್ಕೆ ಹಾನಿಯಾಗುವಂತಹ ವಿಷಯಗಳ ಬಗ್ಗೆ ಯೋಚಿಸಲು ಹೇಗೆ ಸಾಧ್ಯ ಎಂದಿ ಪ್ರಶ್ನಿಸಿದ್ದಾರೆ.
ಇದೇ ವೇಳೆ ಚೀನಾ ವಿಸ್ತರಣಾ ನೀತಿ ಹೊಂದಿದ್ದು ಏಷ್ಯಾದಲ್ಲಿ ಶಾಂತಿ ಮುಂದುವರೆಯಲು ಹೇಗೆ ಸಾಧ್ಯ ಎಂಬ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಿ, ಭಾರತ-ಜಪಾನ್ ಎರಡೂ ಪ್ರಜಾಪ್ರಭುತ್ವ ರಾಷ್ಟ್ರಗಳು. ಭಾರತ-ಜಪಾನ್ ಶಾಂತಿ ಬಗ್ಗೆ ಚಿಂತನೆ ನಡೆಸಿದರೆ ವಿಶ್ವಕ್ಕೆ ಪ್ರಜಾಪ್ರಭುತ್ವದ ಶಕ್ತಿ ಅರಿವಿಗೆ ಬರಲಿದೆ. ಬೇರೆಯವರ ಬಗ್ಗೆ ಚಿಂತಿಸುವ ಬದಲು ನಮ್ಮ ಅಭಿವೃದ್ಧಿ ಬಗ್ಗೆ ಚಿಂತಿಸಬೇಕೆಂದು ಮೋದಿ ಕಿವಿಮಾತು ಹೇಳಿದ್ದಾರೆ.