ಶ್ರೀನಗರ : 'ರಕ್ಷಣಾ ಸಚಿವ'ರ ಮಟ್ಟದಲ್ಲಿ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಬೇಕೆಂದು ಜಮ್ಮು-ಕಾಶ್ಮೀರದ ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬ ಮುಫ್ತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಆ.29ರಂದು ಜಮ್ಮು-ಕಾಶ್ಮೀರದಲ್ಲಿ ನಡೆದ ಮಾಧ್ಯಮ ಸಮ್ಮೇಳನವದಲ್ಲಿ ಭಾಗವಹಿಸಿ ಮಾತನಾಡಿದ ಮೆಹಬೂಬ ಮುಫ್ತಿ, ಪಾಕಿಸ್ತಾನ ಹಾಗೂ ಭಾರತದ ನಡುವಿನ ಸೌಹಾರ್ದಯುತ ಸ್ನೇಹವನ್ನು ಮುಂದುವರೆಸಲು ಭಾರತ ಸರ್ಕಾರ ರಕ್ಷಣಾ ಸಚಿವರ ಮಟ್ಟದಲ್ಲಿ ದ್ವಿಪಕ್ಷೀಯ ಮಾತುಕತೆ ಮುಂದಾಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಪಾಕಿಸ್ತಾನ ವಿಚಾರದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ತತ್ವವನ್ನು ಅನುಸರಿಸಬೇಕು, ವಾಜಪೇಯಿ ಅವರು ಲಾಹೋರ್ ಗೆ ಬಸ್ ಸೇವೆ ಪ್ರಾರಂಭಿಸಿ ಪಾಕ್ ನೊಂದಿಗೆ ಸೌಹಾರ್ದ ಸಂಬಂಧ ಮುಂದುವರೆಸಿದಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಹ ಪಾಕ್ ನೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ಆದರೆ ನರೇಂದ್ರ ಮೋದಿ ವಾಜಪೇಯಿ ಅವರ ಮಾರ್ಗದಲ್ಲಿ ನಡೆಯುತ್ತಿಲ್ಲ. ಇದರಿಂದ ತಮಗೆ ನೋವುಂಟಾಗಿದೆ ಎಂದು ಮುಫ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಮ್ಮು-ಕಾಶ್ಮೀರದಂತಹ ಸೂಕ್ಷ್ಮ ವಿಚಾರಗಳಲ್ಲಿ ನರೇಂದ್ರ ಮೋದಿ ಸರ್ಕಾರ ರಾಜಕೀಯ ಮಾಡಬಾರದು ಎಂದು ಕಾಶ್ಮೀರ ವಿಧಾನಸಭೆಯ ಪ್ರತಿಪಕ್ಷ ನಾಯಕಿ ಆಗ್ರಹಿಸಿದ್ದಾರೆ.