ನವದೆಹಲಿ : ಬಡತನ ನಿರ್ಮೂಲನೆ ಮಾಡಲು ಆರ್ಥಿಕ ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಬೇಕು, ಅಭಿವೃದ್ಧಿಗಾಗಿ ಬ್ಯಾಂಕ್ ಖಾತೆ ತೆರೆಯುವ ಮೂಲಕ ದೇಶದ ನಾಗರಿಕರನ್ನು ಆರ್ಥಿಕತೆಯೊಂದಿಗೆ ಜೊತೆಗೂಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹಣಕಾಸು ಸೇವೆಗಳು ಜನಸಾಮಾನ್ಯರ ಕೈಗೆಟುಕುವಂತೆ ಮಾಡುವ ಉದ್ದೇಶದಿಂದ ರೂಪಿಸಲಾಗಿರುವ ಜನ್-ಧನ್ ಯೋಜನೆಗೆ ಆ.28ರಂದು ನವದೆಹಲಿಯ ವಿಜ್ನಾನ ಭವನದಲ್ಲಿ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸುಖಸ್ಯ ಮೂಲಂ ಧರ್ಮ: ಧರ್ಮಸ್ಯ ಮೂಲಂ ಅರ್ಥ: ಅರ್ಥಸ್ಯ ಮೂಲಂ ರಾಜ್ಯಂ ಎಂಬಂತೆ ದೇಶ ಸುಭಿಕ್ಷವಾಗಿರಲು ಆರ್ಥಿಕತೆಯೇ ಮೂಲ. ಆರ್ಥಿಕತೆಯನ್ನು ಬಲಪಡಿಸಬೇಕಾದರೆ ದೇಶದ ಜನತೆಯನ್ನು ಆರ್ಥಿಕತೆಯೊಂದಿಗೆ ಬೆಸೆಯುವಂತೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
1969ರಲ್ಲಿ ಎಲ್ಲಾ ಬ್ಯಾಂಕ್ ಗಳು ರಾಷ್ಟ್ರೀಕೃತಗೊಂಡ ಸಂದರ್ಭದಲ್ಲಿ ದೇಶದ ಜನತೆ ಹಣಕಾಸು ಸೇವೆಗಳ ಬಗ್ಗೆ ಹಲವು ಕನಸು ಕಂಡಿದ್ದರು. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 68 ವರ್ಷಗಳೇ ಕಳೆದಿದ್ದರೂ ಶೇ.68ರಷ್ಟು ಜನರಿಗೆ ಬ್ಯಾಂಕ್ ನೊಂದಿಗೆ ಸಂಪರ್ಕವೇ ಇಲ್ಲ. ಬ್ಯಾಂಕ್ ಖಾತೆ ತೆರೆದು ದೇಶದ ಜನತೆಯನ್ನು ಆರ್ಥಿಕತೆಯೊಂದಿಗೆ ಜೋಡಿಸಿದರೆ ಆರ್ಥಿಕ ಅಭಿವೃದ್ಧಿಯಾಗಲಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಜನ್-ಧನ್ ಯೋಜನೆಯಡಿ ಒಂದೇ ದಿನದಲ್ಲಿ 1.5 ಕೋಟಿ ಜನರು ಬ್ಯಾಂಕ್ ಖಾತೆ ತೆರೆದಿದ್ದು, ಅಷ್ಟೇ ಪ್ರಮಾಣದ ಜನತೆ ಅಪಘಾತ ವಿಮೆಯನ್ನು ಮಾಡಿಸಿರುವುದರಿಂದ ಬ್ಯಾಂಕಿಂಗ್ ಹಾಗೂ ವಿಮಾ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ ಎಂದು ಮೋದಿ ಸರ್ಕಾರದ ಸಾಧನೆಯನ್ನು ಬಣ್ಣಿಸಿದ್ದಾರೆ.
ಜ.26ವರೆಗೆ ಜನ್-ಧನ್ ಯೋಜನೆಯಡಿ ಬ್ಯಾಂಕ್ ಖಾತೆ ತೆರೆಯುವವರಿಗೆ ಒಂದು ಲಕ್ಷ ರೂಪಾಯಿ ಅಪಘಾತ ವಿಮೆ ದೊರೆಯುವುದರ ಜೊತೆಗೇ 30 ಸಾವಿರ ರೂಪಾಯಿಗಳ ಜೀವ ವಿಮೆಯ ಕೊಡುಗೆಯನ್ನೂ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಜನ್-ಧನ್ ಯೋಜನೆ ಬದಲಾವಣೆಗೆ ಮೊದಲ ಹೆಜ್ಜೆಯಾಗಿದೆ. ಭಾರತೀಯರು ಉಳಿತಾಯಕ್ಕೆ ಮಹತ್ವ ನೀಡುವವರಾಗಿದ್ದಾರೆ. ಕೇಂದ್ರ ಸರ್ಕಾರದ ನೂತನ ಯೋಜನೆ ಪ್ರತಿಯೊಬ್ಬ ನಾಗರಿಕ ತಾನು ಗಳಿಸಿದ್ದನ್ನು ಉಳಿತಾಯ ಮಾಡಲು ಸಹಕಾರಿಯಾಗಲಿದೆ. ಜನ್-ಧನ್ ಯೋಜನೆ ಜಾರಿಯಾಗಿರುವುದು ಬಡವರ ಬದುಕಿನಲ್ಲಿ ಸೂರ್ಯೋದಯವಾದಂತಾಗಿದೆ. ಜನ್-ಧನ್ ಯೋಜನೆ ದೇಶದ ಆರ್ಥಿಕ ಬೆಳವಣಿಗೆಗೆ ಹೊಸ ಶಕ್ತಿ ನೀಡಿದೆ. ಈ ಯೋಜನೆ ಭ್ರಷ್ಟಾಚಾರ ತಡೆಗೂ ಉಪಯುಕ್ತವಾಗಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನ್ ಧನ್ ಯೋಜನೆಯಡಿ ಪ್ರತಿಯೊಬ್ಬ ನಾಗರಿಕನೂ ಡೆಬಿಟ್ ಕಾರ್ಡ್ ಪಡೆಯಲಿದ್ದಾನೆ.
ಅಪಘಾತವಾದರೆ ಖಾತೆದಾರನಿಗೆ ಒಂದು ಲಕ್ಷ ರೂಪಾಯಿ ಜಮೆಯಾಗಲಿದೆ. ಸುಮಾರು 7 ಕೋಟಿ ನಿವಾಸಿಗಳಿಗೆ ಮೊದಲ ಹಂತದಲ್ಲಿ ಬ್ಯಾಂಕ್ ಖಾತೆ ಲಭ್ಯವಾಗಲಿದೆ ನಂತರ ಹಂತ ಹಂತವಾಗಿ ಎಲ್ಲಾ ನಾಗರಿಕರಿಗೂ ಬ್ಯಾಂಕ್ ಖಾತೆ ಸಿಗಲಿದೆ.
ರಾಜ್ಯದಲ್ಲೂ ಚಾಲನೆ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯದಲ್ಲೂ ಚಾಲನೆ ದೊರೆತಿದ್ದು ಕೇಂದ್ರ ಸಚಿವ ಅನಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಗೆ ಚಾಲನೆ ನೀಡಿದರು. ಪ್ರಧಾನಿ ಮೋದಿ ಅವರ ಯೋಜನೆಗೆ ದೇಶದ 76ಕಡೆ ಏಕಕಾಲಕ್ಕೆ ಚಾಲನೆ ನೀಡಲಾಗಿದೆ.