ನವದೆಹಲಿ : ದೇಶದ ಪ್ರತಿಯೊಬ್ಬ ನಾಗರಿಕನಿಗೂ ಬ್ಯಾಂಕ್ ಖಾತೆ ಒದಗಿಸುವ ಉದ್ದೇಶ ಹೊಂದಿರುವ ಜನ್-ಧನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಆ.28ರಂದು ಚಾಲನೆ ನೀಡಲಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯಂದು ಐತಿಹಾಸಿಕ ಭಾಷಣ ನಡೆಸಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬ ನಾಗರಿಕನಿಗೂ ಬ್ಯಾಂಕ್ ಖಾತೆ ಒದಗಿಸಿ ಕೊಡುವುದು ನಮ್ಮ ಸರ್ಕಾರದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಹೇಳಿದ್ದರು. ಪ್ರಧಾನಿ ಭರವಸೆಯಂತೆ ಜನ್-ಧನ್ ಯೋಜನೆ ಗುರುವಾರದಿಂದ ಪ್ರಾರಂಭವಾಗಲಿದೆ. ಈ ಯೋಜನೆ ಪ್ರಕಾರ ಬಡತನ ರೇಖೆಗಿಂತ ಕೆಳಗಿರುವ ನಾಗರಿಕನೂ ಬ್ಯಾಂಕ್ ಖಾತೆಯನ್ನು ಹೊಂದಲಿದ್ದಾನೆ.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಘೋಷ ವಾಕ್ಯದಂತೆ ಈ ಯೋಜನೆಯಲ್ಲಿ ಪ್ರತಿಯೊಬ್ಬ ನಾಗರಿಕನೂ ಡೆಬಿಟ್ ಕಾರ್ಡ್ ಪಡೆಯಲಿದ್ದಾನೆ. ಅಪಘಾತವಾದರೆ ಖಾತೆದಾರನಿಗೆ ಒಂದು ಲಕ್ಷ ರೂಪಾಯಿ ಜಮೆಯಾಗಲಿದೆ. ಈಗಾಗಲೇ ಇದಕ್ಕಾಗಿ ವಿಮಾ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಷ್ಟ್ರೀಯ ಆದ್ಯತೆ ಮೇಲೆ ಎಲ್ಲಾ ನಾಗರಿಕನಿಗೂ ಬ್ಯಾಂಕ್ ಖಾತೆ ಕೊಡಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ಇ-ಮೇಲ್ ಮೂಲಕ ಸೂಚನೆ ನೀಡಿದ್ದಾರೆ. ಸುಮಾರು 7 ಕೋಟಿ ನಿವಾಸಿಗಳಿಗೆ ಮೊದಲ ಹಂತದಲ್ಲಿ ಬ್ಯಾಂಕ್ ಖಾತೆ ಲಭ್ಯವಾಗಲಿದೆ ನಂತರ ಹಂತ ಹಂತವಾಗಿ ಎಲ್ಲಾ ನಾಗರಿಕರಿಗೂ ಬ್ಯಾಂಕ್ ಖಾತೆ ಸಿಗಲಿದೆ.