ನವದೆಹಲಿ : 'ಕೇರಳ' ರಾಜ್ಯಪಾಲ ಸ್ಥಾನಕ್ಕೆ ಶೀಲಾ ದೀಕ್ಷಿತ್ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಶೀಲಾ ದೀಕ್ಷಿತ್ ಆ.26ರಂದು ಸ್ಪಷ್ಟಪಡಿಸಿದ್ದಾರೆ.
ರಾಜೀನಾಮೆ ನೀಡುವುದಕ್ಕೆ ಯಾವುದೇ ಒತ್ತಡ ಇರಲಿಲ್ಲ, ನಿನ್ನೆಯೇ ರಾಜೀನಾಮೆ ನೀಡಿದ್ದೇನೆ, ರಾಜೀನಾಮೆ ಅಂಗೀಕಾರವಾದ ಬಳಿಕ ಪ್ರತಿಕ್ರಿಯಿಸುತ್ತೇನೆ. ಈಗ ಯಾವ ವಿಷಯದ ಬಗ್ಗೆಯೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶೀಲಾ ದೀಕ್ಷಿತ್ ತಿಳಿಸಿದ್ದಾರೆ. ಅಲ್ಲದೇ ಸಕ್ರಿಯ ರಾಜಕಾರಣದಿಂದ ದೂರ ಉಳಿಯುವುದಾಗಿ ಶೀಲಾ ದೀಕ್ಷಿತ್ ಹೇಳಿದ್ದಾರೆ.
ಮಿಜೋರಾಂ ಗೆ ವರ್ಗಾವಣೆ ಮಾಡಿದ್ದನ್ನು ವಿರೋಧಿಸಿ ಮಹಾರಾಷ್ಟ್ರ ರಾಜ್ಯಪಾಲ ಶಂಕರ್ ನಾರಾಯಣನ್ ಅವರ ರಾಜೀನಾಮೆ ಬೆನ್ನಲ್ಲೇ, ಶೀಲಾ ದೀಕ್ಷಿತ್ ಅವರನ್ನೂ ಈಶಾನ್ಯ ರಾಜ್ಯಕ್ಕೆ ವರ್ಗಾವಣೆ ಮಾಡುವ ಬಗ್ಗೆ ವದಂತಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೊಂದಿಗೆ ಶೀಲಾ ದೀಕ್ಷಿತ್ ಚರ್ಚೆ ನಡೆಸಿದ್ದರು. ಉಭಯ ನಾಯಕರನ್ನು ಭೇಟಿ ಮಾಡಿದ ಬಳಿಕ ಶೀಲಾ ದೀಕ್ಷಿತ್ ರಾಜೀನಾಮೆ ನೀಡಿದ್ದಾರೆ. 5 ತಿಂಗಳ ಹಿಂದಷ್ಟೇ ಶೀಲಾ ದೀಕ್ಷಿತ್ ಕೇರಳ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಯುಪಿಎ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ರಾಜ್ಯಪಾಲರ ರಾಜೀನಾಮೆಗೆ ಒತ್ತಡ ಹೇರಲಾಗಿತ್ತು. ನೂತನ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಶೀಲಾ ದೀಕ್ಷಿತ್ ಸೇರಿದಂತೆ ಈ ವರೆಗೂ 7 ರಾಜ್ಯಪಾಲರು ರಾಜೀನಾಮೆ ನೀಡಿದ್ದಾರೆ.