ಪಾಟ್ನ : ಶತೃವಿನ ಶತೃ ಮಿತ್ರ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದ್ದು ಆರ್.ಜೆ.ಡಿ, ಜೆಡಿಯು, ಕಾಂಗ್ರೆಸ್ ಪಕ್ಷದ ಮೈತ್ರಿಗೆ ಬಿಹಾರದ ಮತದಾರ ಮನಸೋತಿದ್ದಾನೆ. ಬಿಹಾರದ 10 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಜೆಡಿಯು, ಆರ್.ಜೆ.ಡಿ, ಕಾಂಗ್ರೆಸ್ ಮೈತ್ರಿಕೂಟ 6 ಕ್ಷೇತ್ರಗಳನ್ನು ಪಡೆದಿದೆ. ಉಳಿದ 4 ಕ್ಷೇತ್ರಗಳು ಬಿಜೆಪಿ ಪಾಲಾಗಿವೆ.
ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ನಿತೀಶ್ ಕುಮಾರ್, ಒಡೆದು ಆಳುವವರನ್ನು ನಾವು ವಿರೋಧಿಸುತ್ತೇವೆ, ನಮ್ಮ ಮೈತ್ರಿಕೂಟಕ್ಕೆ ಮತ ನೀಡಿದ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ. ಮುಂದಿನ ರಾಜಕೀಯ ನಡೆ ಬಗ್ಗೆ ಶೀಘ್ರವೇ ನಿರ್ಧರಿಸುವುದಾಗಿ ನಿತೀಶ್ ಕುಮಾರ್ ಹೇಳಿದ್ದಾರೆ. ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲೂ ಪ್ರಸಾದ್ ಯಾದವ್ ಸಹ ಪ್ರತಿಕ್ರಿಯಿಸಿದ್ದು ಮೈತ್ರಿಕೂಟಕ್ಕೆ ಮತ ನೀಡಿದ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಉಪಚುನಾವಣೆ ಫಲಿತಾಂಶದಿಂದ ನರೇಂದ್ರ ಮೋದಿ ಬಿಹಾರವನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಹಾರ ರಾಜ್ಯ ಬಿಜೆಪಿಯೇತರ ಪಕ್ಷದ ಸರ್ಕಾರ ಆಯ್ಕೆ ಮಾಡಲಿದೆ ಎಂದು ಆರ್.ಜೆ.ಡಿ, ಜೆಡಿಯು ನಾಯಕರು ಹೇಳಿದ್ದಾರೆ.
ವಿಧಾನಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರ್.ಜೆ.ಡಿ, ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರು.