ನವದೆಹಲಿ : ಮೋದಿಯವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದ ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಟೀಗೆ ಆಹ್ವಾನಿಸುವ ಮೂಲಕ ಬಿಕ್ಕಟ್ಟು ನಿವಾರಣೆಮಾಡಲೆತ್ನಿಸಿದ್ದಾರೆ.
ಈ ಮೂಲಕ ತಮ್ಮ ವಿರುದ್ಧ ಮುನಿಸಿಕೊಂಡಿರುವ ಕಾಂಗ್ರೆಸ್ ಮುಖ್ಯಮಂತ್ರಿಗಳನ್ನು ಸಮಾಧಾನಪಡಿಸುವ ತಂತ್ರ ನಡೆಸಿದ್ದಾರೆ. ಆಹ್ವಾನವನ್ನು ಸ್ವೀಕರಿಸಿರುವ ಭೂಪಿಂದರ್ ಸಿಂಗ್ ಹೂಡಾ, ಪ್ರಧಾನಿ ನಿವಾಸದಲ್ಲಿ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇತ್ತೀಚೆಗಷ್ಟೇ ಸಾರ್ವಜನಿಕ ಸಮಾರಂಭವೊಂದರಲ್ಲಿ ಹೂಡಾ ಮಾತನಾಡುತ್ತಿದ್ದ ವೇಳೆ ಬಿಜೆಪಿ ಬೆಂಬಲಿಗರು ಮೋದಿ, ಮೋದಿ ಎಂದು ಘೋಷಣೆ ಕೂಗುತ್ತಿದ್ದರು. ಇದರಿಂದ ಮುಜುಗರಕ್ಕೊಳಗಾದ ಹರ್ಯಾಣ ಮುಖ್ಯಮಂತ್ರಿ ಹೂಡಾ, ಇನ್ನುಮುಂದೆ ತಾವು ಮೋದಿಯವರ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಕೂಡ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳನ್ನು ಬಹಿಷ್ಕರಿಸಿದ್ದರು. ಅಲ್ಲದೇ ಮೋದಿ ಜಾರ್ಖಂಡ್ ಗೆ ತೆರಳಿದಾಗ, ಅಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮಾತನಾಡುವಾಗ ಬಿಜೆಪಿ ಬೆಂಬಲಿಗರು ಅಡ್ಡಿಪಡಿಸಿದ್ದರು. ಇದು ಕಾಂಗ್ರೆಸ್ ಮುಖ್ಯಮಂತ್ರಿಗಳ ಕೋಪಕ್ಕೆ ಕಾರಣವಾಗಿತ್ತು.
ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖ್ಯಮಂತ್ರಿಯನ್ನು ಚಾಯ್ ಗೆ ಆಹ್ವಾನಿಸುವ ಮೂಲಕ ಮುನಿಸು ಶಮನಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.