ಬೆಂಗಳೂರು : 'ಬೆಂಗಳೂರು' ನಗರದ ಹೊರವಲಯದಲ್ಲಿ ನಡೆದಿರುವ ಬಿಹಾರ ಮೂಲದ ಯುವತಿ ಮೇಲಿನ ಅತ್ಯಾಚಾರ ಪ್ರಕರಣದ ಬಗ್ಗೆ ರಾಮನಗರ ಎಸ್.ಪಿ ಅನುಪಮ್ ಅಗರ್ವಾಲ್ ಪ್ರತಿಕ್ರಿಯಿಸಿದ್ದು, ಆರೋಪಿಗಳ ವಿರುದ್ಧ ಸಿ.ಆರ್.ಪಿ.ಸಿ ಸೆಕ್ಷನ್ 376(ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಕರಣ ದಾಖಲಾಗಿರುವ ತಾವರೆಕೆರೆ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಅತ್ಯಾಚಾರದ ಪ್ರಮುಖ ಆರೋಪಿ ಅರುಣ್ ಗೌಡ ಕೆಎಂಎಫ್ ನ ಬೆಂಗಳೂರು ಘಟಕದ ನಿರ್ದೇಶಕರಲ್ಲಿ ಒಬ್ಬರಾದ ನರಸಿಂಹ ಮೂರ್ತಿ ಮಗ ಎಂದು ಹೇಳಿದ್ದಾರೆ.
ಬಂಧಿತ ಆರೋಪಿ ಪ್ರಭಾವಿ ವ್ಯಕ್ತಿಯ ಮಗ ಎಂಬ ಕಾರಣಕ್ಕೆ ಒತ್ತಡ ಬಂದಿಲ್ಲ, ಒಂದು ವೇಳೆ ಪ್ರಭಾವಿ ವ್ಯಕ್ತಿಗಳು ಕರೆ ಮಾಡಿ ಪ್ರಕರಣದ ತನಿಖೆಗೆ ಅಡ್ಡಿಪಡಿಸಿದರೂ ಯುವತಿ ನೀಡಿದ ದೂರು ದಾಖಿಲಿಸಿಕೊಳ್ಳುತ್ತಿದ್ದೆವು ಎಂದು ಹೇಳಿದ್ದಾರೆ.
ಆ.20ರ ತಡರಾತ್ರಿಯಲ್ಲಿ ಮೆಜೆಸ್ಟಿಕ್ ನಿಂದ ಜೆ.ಪಿ.ನಗರಕ್ಕೆ ತೆರಳಬೇಕಿದ್ದ ಬಿಹಾರ ಮೂಲದ ಯುವತಿ, ಬಸ್ ಮತ್ತು ಆಟೋಗಳಿಲ್ಲದ್ದರಿಂದ ಡ್ರಾಪ್ ಮಾಡುವಂತೆ ಕೋರಿದ್ದಳು. ಡ್ರಾಪ್ ಮಾಡುವುದಾಗಿ ಹೇಳಿ ಕಾರು ಹತ್ತಿಸಿಕೊಂಡಿದ್ದಾರೆ. ಬಳಿಕ ಆಕೆಯನ್ನು ತಾವರೆಕೆರೆ ಸಮೀಪದ ತಿಪ್ಪಗೊಂಡನಹಳ್ಳಿಯಲ್ಲಿರುವ ತೋಟದ ಮನೆಗೆ ಬಲವಂತವಾಗಿ ಕರೆದೊಯ್ದು ರಾತ್ರಿ ಇಡೀ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ.
ಕುಡಿದ ಅಮಲಿನಲ್ಲಿದ್ದ ದುಷ್ಕರ್ಮಿಗಳು ಮುಂಜಾನೆ ನಿದ್ದೆಗೆ ಜಾರುತ್ತಿದ್ದಂತೆಯೇ ಯುವತಿ ತೋಟದ ಮನೆಯಿಂದ ಹೊರಗೆ ಓಡಿಬಂದಿದ್ದಾಳೆ. ಬಳಿಕ ಕಾರು ಚಾಲಕನೋರ್ವ ಯುವತಿಯನ್ನು ರಕ್ಷಿಸಿದ್ದು ಆತನ ಸಹಾಯದೊಂದಿಗೆ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾಳೆ.