ರಾಂಚಿ : ದೇಶ ಮುಂದುವರಿಯುವುದೆಂದರೆ ರಾಜ್ಯಗಳು ಮುಂದುವರಿಯುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಾರ್ಖಂಡ್ ನಲ್ಲಿ ವಿದ್ಯುತ್ ಗ್ರಿಡ್ ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಯಾವುದೇ ಭಾಗ ದುರ್ಬಲವಾಗಿರಬಾರದು, ಎಲ್ಲಾ ರಾಜ್ಯಗಳೂ ಅಭಿವೃದ್ಧಿ ಹೊಂದಬೇಕು, ಎಲ್ಲಾ ರಾಜ್ಯಗಳು ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿಯಾಗಲಿದೆ ಎಂದು ಹೇಳಿದ್ದಾರೆ.
ಗುಜರಾತ್ ನ್ನು ಮೀರಿಸಿ ಅಭಿವೃದ್ಧಿ ಸಾಧಿಸಬಲ್ಲ ಶಕ್ತಿ ಜಾರ್ಖಂಡ್ ರಾಜ್ಯಕ್ಕಿದ್ದು ರಾಜ್ಯದಲ್ಲಿನ ಸಂಪತ್ತು ದೇಶದ ಕತ್ತಲೆಯನ್ನು ಹೋಗಲಾಡಿಸಬಹುದಾಗಿದೆ. ಆದರೆ ಜಾರ್ಖಂಡ್ ರಾಜ್ಯ ಪೂರ್ಣಪ್ರಮಾಣ ಬಹುಮತದ ಸರ್ಕಾರದ ಕೊರತೆಯಿಂದ ಬಳಲುತ್ತಿದೆ. ಸುಸ್ಥಿರ ಸರ್ಕಾರ ಅಸ್ಥಿತ್ವಕ್ಕೆ ಬಂದರೆ ಜಾರ್ಖಂಡ್ ನ ಅಭಿವೃದ್ಧಿ ಗುಜರಾತ್ ರಾಜ್ಯವನ್ನೂ ಮೀರಿಸಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಅಭಿವೃದ್ಧಿ ವಿಷಯದಲ್ಲಿ ಮುಖ್ಯಮಂತ್ರಿಗಳು ಪದೇ ಪದೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಜಾರ್ಖಂಡ್ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬಹುಮತವಿರುವುದರಿಂದ ಯಾವುದೇ ವಿಷಯದಲ್ಲಿ ಶೀಘ್ರಗತಿಯ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿದೆ ಅಂತೆಯೇ ಜಾರ್ಖಂಡ್ ನ ಜನೆತೆ ಸಹ ತಮ್ಮ ರಾಜ್ಯದ ಅಭಿವೃದ್ಧಿಗಾಗಿ ಸುಭದ್ರ ಸರ್ಕಾರ ಆಯ್ಕೆ ಮಾಡಬೇಕು ಎಂದು ಪ್ರಧಾನಿ ಜಾರ್ಖಂಡ್ ಜನತೆಗೆ ಕರೆ ನೀಡಿದ್ದಾರೆ.
ನಮಗೆ ಡಿಜಿಟಲ್ ಇಂಡಿಯಾ ಬೇಕಾಗಿದೆ, ಸರ್ಕಾರ ಎಂಬುದು ದೆಹಲಿಯಲ್ಲಾಗಲೀ, ಜಾರ್ಖಂಡ್ ನಲ್ಲಾಗಲೀ ಇಲ್ಲ, ಡಿಜಿಟಲ್ ಪವರ್ ರೂಪದಲ್ಲಿ ಜನತೆಯ ಕೈಯ್ಯಲ್ಲಿಯೇ ಸರ್ಕಾರವಿದೆ. ಜಾರ್ಖಂಡ್ ನ ಅಭಿವೃದ್ಧಿಗಾಗಿ ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಮೋದಿ ಹೇಳಿದ್ದಾರೆ.