BW News Bureau : ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ, ರಾಜ್ಯ ಸರ್ಕಾರ ಅತ್ಯಾಚಾರಿಗಳ ಮೇಲೆ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸುವುದಾಗಿ ಹೇಳಿದ್ದರೂ ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ನಡೆದಿದೆ.
ಬಿಹಾರದ ಯುವತಿ ಮೇಲೆ ಬೆಂಗಳೂರಿನಲ್ಲಿ ಅತ್ಯಾಚಾರ ನಡೆಸಲಾಗಿದ್ದು ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಜಸ್ಟಿಕ್ ನಿಂದ ಡ್ರಾಪ್ ನೀಡುವ ನೆಪದಲ್ಲಿ ಪ್ರಭಾವಿ ವ್ಯಕ್ತಿಯೋರ್ವನ ಮಗ, ತನ್ನ ಸ್ನೇಹಿತರೊಂದಿಗೆ ಯುವತಿಯನ್ನು ಚಿಕ್ಕಮಾದನಹಳ್ಳಿಯಲ್ಲಿರುವ ರೆಸಾರ್ಟ್ ಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ.
ಕುಡಿದ ಅಮಲಿನಲ್ಲಿ ಮೂವರು ಪ್ರಭಾವಿ ವ್ಯಕ್ತಿಗಳ ಮಕ್ಕಳು ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಯುವತಿ, ಕಾಮುಕರಿಂದ ತಪ್ಪಿಸಿಕೊಳ್ಳಲು ರೆಸಾರ್ಟ್ ನಿಂದ ಓಡಿಬರುತ್ತಿದ್ದ ಸಂದರ್ಭದಲ್ಲಿ ಕಾರು ಚಾಲಕನೋರ್ವ ಆಕೆಯನ್ನು ರಕ್ಷಿಸಿ ತಾವರೆಕೆರೆ ಪೊಲೀಸ್ ಠಾಣೆಗೆ ಕರೆದುಕೊಂಡುಬಂದಿದ್ದಾನೆ. ಯುವತಿಯಿಂದ ದೂರು ದಾಖಲಿಸಿಕೊಂಡಿರುವ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಖಾಸಗಿ ಮಾಧ್ಯಮದ ವರದಿ ಪ್ರಕಾರ, ಅತ್ಯಾಚಾರ ನಡೆಸಿರುವವರೆಲ್ಲರೂ ಪ್ರಭಾವಿ ವ್ಯಕ್ತಿಗಳ ಮಕ್ಕಳೆಂದು ತಿಳಿದುಬಂದಿದೆ
ಸ್ಥಳಕ್ಕೆ ರಾಮನಗರ ಎಸ್.ಪಿ ಅನುಪಮ್ ಅಗರ್ವಾಲ್ ಅವರು ಭೇಟಿ ನೀಡಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಬುದ್ದಿಮಾಂದ್ಯ ಯುವತಿಯ ಮೇಲೆ ತಂದೆಯೇ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಬೆಂಗಳೂರಿನ ಓಕಳೀಪುರಂ ನಲ್ಲಿ ನಡೆದಿದೆ. ಆರೋಪಿ ಷಣ್ಮುಗನನ್ನು ಶ್ರೀರಾಮಪುರ ಪೊಲೀಸರು ಬಂಧಿಸಿದ್ದಾರೆ. ನೊಂದ ಯುವತಿಯ ತಾಯಿಯೇ ಪೊಲೀಸರಿಗೆ ದೂರು ನೀಡಿದ್ದಾರೆ.