ಬೆಂಗಳೂರು : ರಾಜ್ಯದಿಂದ ಹಜ್ ಯಾತ್ರೆಯು ಆಗಸ್ಟ್ 27 ರಂದು ಮಂಗಳೂರಿನಿಂದ ಹಾಗೂ ಸೆಪ್ಟೆಂಬರ್ 12 ರಂದು ಬೆಂಗಳೂರಿನಿಂದ ಆರಂಭವಾಗಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವ ಆರ್.ರೋಷನ್ ಬೇಗ್ ತಿಳಿಸಿದ್ದಾರೆ.
ಬೆಂಗಳೂರಿನಿಂದ ಆರಂಭವಾಗುವ ಹಜ್ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆಪ್ಟೆಂಬರ್ 12 ರಂದು ಚಾಲನೆ ನೀಡಲಿದ್ದಾರೆ. ರಾಜ್ಯದ ಯಾತ್ರಿಗಳು ಬೆಂಗಳೂರು, ಮಂಗಳೂರು, ಗೋವಾ ಹಾಗೂ ಹೈದರಾಬಾದ್ ವಿಮಾನನಿಲ್ದಾಣಗಳಿಂದ ಯಾತ್ರೆಗೆ ತೆರಳಲಿದ್ದಾರೆ. ಈ ಯಾತ್ರಿಗಳಿಗೆ ಪೂರ್ವಭಾವಿ ತರಬೇತಿ ಶಿಬಿರಗಳನ್ನು ರಾಜ್ಯದ ಹಲವೆಡೆ ಈಗಾಗಲೇ ನಡೆಸಿ, ಯಾತ್ರೆ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗದರ್ಶನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಯಾತ್ರಿಗಳನ್ನು ಕರೆದೊಯ್ಯುವ ವಿಮಾನಗಳ ವೇಳೆಯನ್ನು ರಾತ್ರಿ 12.30 ಗಂಟೆಗೆ ನಿಗದಿ ಪಡಿಸುವಂತೆ ಕೇಂದ್ರ ವಿಮಾನಯಾನ ಖಾತೆ ರಾಜ್ಯ ಸಚಿವ ಜಿ.ಎಂ. ಸಿದ್ದೇಶ್ವರ ಅವರಿಗೆ ಮನವಿ ಮಾಡಿದ್ದು, ಈ ಮನವಿಗೆ ಸಚಿವರು ಸ್ಪಂದಿಸುವರು ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಎಬೋಲಾ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸುವಂತೆ ಯಾತ್ರಿಗಳಿಗೆ ತರಬೇತಿ ಶಿಬಿರಗಳಲ್ಲಿ ಮಾರ್ಗದರ್ಶನ ನೀಡಲಾಗಿದೆ. ಅಲ್ಲದೆ, ಸೌದಿ ಅರೇಬಿಯಾದ ಸರ್ಕಾರವು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ. ಜೊತೆಗೆ ಭಾರತ ಸರ್ಕಾರವೂ ಈ ಯಾತ್ರಾ ಸ್ಥಳಗಳಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸಲಿದೆ ಎಂದು ತಿಳಿಸಿದರು.
ಮೊದಲ ಬಾರಿಗೆ ಮದೀನಾದಲ್ಲಿ ಯಾತ್ರಿಗಳಿಗೆ ಆಹಾರದ ವ್ಯವಸ್ಥೆಯನ್ನು ಮಾಡಲಾಗಿದ್ದು 15 ರಿಯಾಲ್ಗಳಿಗೆ ಮಧ್ಯಾಹ್ನ ಹಾಗೂ ರಾತ್ರಿಯ ಊಟ ಒದಗಿಸಲಾಗುವುದು. ಈ ಶುಲ್ಕವನ್ನು ಯಾತ್ರೆಯ ವೆಚ್ಚದಲ್ಲಿಯೇ ಸೇರ್ಪಡೆಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.
ಕೇಬಲ್ ಟಿವಿ ಜಾಲವನ್ನು ಸರ್ಕಾರವೇ ನಿರ್ವಹಿಸುವ ಬಗ್ಗೆ ತಮಿಳುನಾಡಿನಲ್ಲಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಇದೇ ತಿಂಗಳ 28 ರಂದು ಮುಖ್ಯಮಂತ್ರಿಗಳೊಂದಿಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅವರು ನುಡಿದರು.
ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಊಟ ಒದಗಿಸುವುದು ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ರಿಯಾಯಿತಿ ದರದಲ್ಲಿ ಊಟ ಒದಗಿಸಲು ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಇಸ್ಕಾನ್ ಸಂಸ್ಥೆಯವರು ಊಟ ಒದಗಿಸಲು ಸಮ್ಮತಿಸಿದ್ದು, ಸಬ್ಸಿಡಿ ಹಣವನ್ನು ಸರ್ಕಾರದಿಂದ ಒದಗಿಸುವ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಅವರು ತಿಳಿಸಿದರು.