ನವದೆಹಲಿ : ರಾಸಲೀಲೆ ಪ್ರಕರಣದ ಆರೋಪಿ ನಿತ್ಯಾನಂದನಿಗೆ ನ್ಯಾಯಾಮ್ಗ ವ್ಯವಸ್ಥೆ ಗೌರವಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಪುರುಷತ್ವ ಪರೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಪುರುಷತ್ವ ಪರೀಕ್ಷೆಗೆ ನೀವೇಕೆ ಹೆದರುತ್ತೀರಾ ಎಂದು ನಿತ್ಯಾನಂದನಿಗೆ ಪ್ರಶ್ನಿಸಿರುವ ನ್ಯಾಯಾಲಯ ಪುರುಷತ್ವ ಪರೀಕ್ಷೆ ಮೂಲಕ ಆರೋಪ ಮುಕ್ತರಾಗುವಂತೆ ತಿಳಿಸಿದೆ.
ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದನ ಪುರುಷತ್ವ ಪರೀಕ್ಷೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ನಿತ್ಯಾನಂದ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ. ಆ.20ರಂದು ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದು, ನಿತ್ಯಾನಂದ ಪರ ವಕೀಲರು, 2004ರಲ್ಲಾದ ಪ್ರಕರಣಕ್ಕೆ ಈಗೇಕೆ ಪುರುಷತ್ವ ಪರೀಕ್ಷೆ ನಡೆಸಬೇಕು? ಈಗಾಗಲೇ 2010ರಲ್ಲಿ ನಿತ್ಯಾನಂದನ ಪುರುಷತ್ವ ಪರೀಕ್ಷೆ ನಡೆಸಲಾಗಿದೆ. ಮತ್ತೆ ಪರೀಕ್ಷೆ ನಡೆಸುವುದೇಕೆ ಎಂದು ವಾದ ಮಂಡಿಸಿದ್ದಾರೆ.
ನಿತ್ಯಾನಂದ ಪುರುಷತ್ವ ಪರೀಕ್ಷೆ ನಡೆಸಲು ಹೆದತ್ತಿರುವುದೇಕೆ? ಪುರುಷತ್ವ ಪರೀಕ್ಷೆ ನಡೆಸದಿದ್ದರೆ ತನಿಖೆ ಬಿದ್ದುಹೋಗುತ್ತದೆ. ಯಾರೂ ಕೂಡ ಪರೀಕ್ಷೆಗೆ ತಡೆ ನೀಡಬಾರದು. ಪುರುಷತ್ವ ಪರೀಕ್ಷೆ ನಡೆಸಿಕೊಳ್ಳುವುದು ನಿಮ್ಮ ಕರ್ತವ್ಯ. ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸಬೇಕು ಎಂದು ನ್ಯಾ.ರಂಜಿತ್ ಪ್ರಕಾಶ್ ದೇಸಾಯಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದನ ಪರ ವಕೀಲರ ವಾದ ಪೂರ್ಣಗೊಂಡಿದ್ದು, ರಾಜ್ಯ ಸರ್ಕಾರದ ಪರ ವಕೀಲರು ಮಧ್ಯಾಹ್ನ 2 ಗಂಟೆ ಬಳಿಕ ವಾದ ಮಂಡಿಸಲಿದ್ದಾರೆ. ಉಭಯ ವಕೀಲರ ವಾದ-ವಿವಾದ ಆಲಿಸಿದ ಬಳಿಕ ಸುಪ್ರೀಂ ಕೋರ್ಟ್ ಆದೇಶ ಪ್ರಕಟಿಸಲಿದೆ.