ಪುಣೆ : ಖ್ಯಾತ ಯೋಗಗುರು ಬಿ.ಕೆ.ಎಸ್ ಅಯ್ಯಂಗಾರ್ ಆ.20ರಂದು ನಿಧನರಾಗಿದ್ದಾರೆ. ಕಳೆದೊಂದು ವರ್ಷಗಳಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಪುಣೆಯ ಪ್ರಯಾಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಯಾಲಿಸಿಸ್ ನಡೆಸಿದರೂ ಅಯ್ಯಂಗಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. ಕಳೆದ ಒಂದು ವಾರದಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 3.15ಕ್ಕೆ ನಿಧನರಾಗಿದ್ದಾರೆ.
ಕೋಲಾರ ಜಿಲ್ಲೆ ಬೆಳ್ಳೂರು ಗ್ರಾಮದವಾರದಲ್ಲಿ 1918 ಡಿ.14ರಂದು ಜನಿಸಿದ್ದ ಬಿ.ಕೆ.ಎಸ್ ಅಯ್ಯಂಗಾರ್ ಅವರು ಯೋಗ ಶಿಕ್ಷಣ ಕುರಿತು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಅಗಲಿದ ಗಣ್ಯರು, ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ, ಪುದ್ಮಭೂಷಣ, ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಯೋಗದ ಪಿತಾಮಹ ಎಂದೇ ಖ್ಯಾತರಾಗಿದ್ದ ತಿರುಮಲೈ ಕೃಷ್ಣಮಾಚಾರ್ಯ ಅವರ ಶಿಷ್ಯಂದರಲ್ಲಿ ಅಯ್ಯಂಗಾರ್ ಕೂಡ ಒಬ್ಬರಾಗಿದ್ದಾರೆ.
ಭಾರತೀಯ ಪುರಾತನ ಶಾಸ್ತ್ರಗಳಲ್ಲಿ ಒಂದಾದ ಯೋಗ ಶಿಕ್ಷಣಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ತಂದುಕೊಡುವಲ್ಲಿ ಅಯ್ಯಂಗಾರ್ ಅವರ ಕೊಡುಗೆ ಅನ್ಯನ್ಯವಾದದ್ದು. ಹಲವು ಕ್ರೀಡಾಪಟುಗಳಿಗೆ ಬಿ.ಕೆ.ಎಸ್ ಅಯ್ಯಂಗಾರ್ ಗುರುಗಳಾಗಿದ್ದರು. ಅಂತಾರಾಷ್ಟ್ರೀಯ ಪ್ರಶಸ್ತಿಗಳೂ ಈ ಮಹಾನ್ ಯೋಗಗುರುವನ್ನು ಅರಸಿಕೊಂಡು ಬಂದಿವೆ.
ಲೈಟ್ ಆನ್ ಯೋಗ, ಲೈಟ್ ಆನ್ ಪ್ರಾಣಾಯಾಮ ಮತ್ತು ಲೈಟ್ ಆನ್ ದಿ ಯೋಗ ಸೂತ್ರಾಸ್ ಆಫ್ ಪತಂಜಲಿ, ಅಯ್ಯಂಗಾರ್ ಅವರು ರಚಿಸಿರುವ ಯೋಗಾಭ್ಯಾಸ ಕುರಿತ ಪುಸ್ತಕಗಳಲ್ಲಿ ಪ್ರಮುಖವಾಗಿವೆ.
ದೇಶಕಂಡ ಮಹಾನ್ ಯೋಗ ಸಾಧಕ ಗುರು ಕನ್ನಡಿಗ ಬಿ.ಕೆ.ಎಸ್. ಅಯ್ಯಂಗಾರ್ ನಿಧನಕ್ಕೆ ನಾಡು ಕಂಬನಿ ಮಿಡಿದಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಬಿ.ಕೆ.ಎಸ್ ಅಯ್ಯಂಗಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.