ಬೆಂಗಳೂರು : ದೇಶಾದ್ಯಂತವಿರುವ ಆರ್.ಟಿ.ಒ ಕಛೇರಿಗಳನ್ನು ಮುಚ್ಚಲು ಕೇಂದ್ರ ಸರ್ಕಾರ ಮುಂದಾಗಿದೆ. ಆರ್.ಟಿ.ಒ ಕಛೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳುವ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಸಾರಿಗೆ ಕಛೇರಿಗಳಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಅಧಿಕಾರಿಗಳ ವ್ಯಾಪ್ತಿಯನ್ನು ಮೊಟಕುಗೊಳಿಸಿ ವಾಹನ ಚಲಾವಣೆ ಪರವಾನಗಿ ವಿತರಣೆಗೆ ಶೀಘ್ರದಲ್ಲಿಯೇ ಹೊಸ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ.
ಮೋಟಾರು ವಾಹನ ಕಾಯ್ದೆಗೆ ಸಮಗ್ರ ಬದಲಾವಣೆ ತರುವುದು, ಅಂದರೆ ಸಧ್ಯ ಇರುವ ವ್ಯವಸ್ಥೆಯನ್ನು ಬದಲಾಯಿಸಿ ಡ್ರೈವಿಂಗ್ ಲೈಸೆನ್ಸ್ ಪಡೆಯುವ ನಿಯಮಾವಳಿಗಳನ್ನು ಸರಳೀಕರಿಸಿ ಜನರಿಗೆ ಹೆಚ್ಚಿನ ಅನೂಕೂಲ ಒದಗಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಕೇಂದ್ರ ಸಾರಿಗೆ ಇಲಾಖೆ ಮೂಲಗಳ ಪ್ರಕಾರ ಈಗಿರುವ ಆರ್.ಟಿ.ಒ ಅಧಿಕಾರಿಗಳ ವ್ಯಾಪ್ತಿ ಮತ್ತು ಪದವಿಗಳ ಕುರಿತಂತೆ ಹೊಸ ರೀತಿಯ ವ್ಯಾಖ್ಯಾನ ನೀಡಲು ಇಲಾಖೆ ಮುಂದಾಗಿದೆ. ಹೀಗಾಗಿ ಅಧಿಕಾರಿಗಳಿಗೆ ಈಗಿರುವ ಕೆಲ ಅಧಿಕಾರಗಳನ್ನು ಮೊಟಕುಗೊಳಿಸಲಾಗುವುದು. ಇಲಾಖೆಯಲ್ಲಿ ಹೆಚ್ಚು ತಂತ್ರಜ್ನಾನ ಅಳವಡಿಕೆ ಮೂಲಕ ಮಾನವ ಶಕ್ತಿ ಹಸ್ತಕ್ಷೇಪ ಕಡಿಮೆ ಮಾಡಲು ಚಿಂತನೆ ನಡೆಸಲಾಗಿದೆ.