ಹೈದ್ರಾಬಾದ್ : ಆ.19ರಂದು ತೆಲಂಗಾಣ ಸರ್ಕಾರ ಮನೆ ಮನೆ ಸಮೀಕ್ಷೆ ನಡೆಸಲಿದೆ. ಈ ಹಿನ್ನಲೆಯಲ್ಲಿ ಇಡೀ ರಾಜ್ಯದಲ್ಲಿ ಬಂದ್ ಸ್ಥಿತಿ ನಿರ್ಮಾಣವಾಗಲಿದೆ.
ರಾಜ್ಯ ಸರ್ಕಾರವೇ ಸಾರ್ವತ್ರಿಕ ರಜೆ ಘೋಷಿಸಿರುವ ಹಿನ್ನಲೆಯಲ್ಲಿ ಖಾಸಗಿ ಕಂಪನಿಗಳು ಕೂಡ ಮುಚ್ಚಲಿವೆ. ಮನೆ ಮನೆ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ.
ಸಮೀಕ್ಷೆ ವೇಳೆ ಮನೆಯಲ್ಲಿ ಇರದೇ ಹೋದಲ್ಲಿ ತಾವು ತೆಲಂಗಾಣದವರು ಎಂಬ ಮಾಹಿತಿ ಸರ್ಕಾರಕ್ಕೆ ಸಿಗುವುದಿಲ್ಲ ಹಾಗೂ ಮುಂದಿನ ದಿನಗಳಲ್ಲಿ ಸವಲತ್ತುಗಳಿಂದ ವಂಚಿತರಾಗಬೇಕಾಗುತ್ತದೆ ಎಂಬ ಕಾರಣಕ್ಕಾಗಿ ದೇಶಾದ್ಯಂತವಿರುವ ತೆಲಂಗಾಣ ಜನರು ತವರಿನತ್ತ ಧಾವಿಸುತ್ತಿದ್ದಾರೆ.
ಆ.19ರಂದು ಪೆಟ್ರೋಲ್ ಬಂಕ್, ಸಾರ್ವಜನಿಕ ಸೇವಾ ಕೇಂದ್ರಗಳು ಮುಚ್ಚಿರುತ್ತವೆ. ಆಟೋರೀಕ್ಷಾ, ಬಸ್ ಸಂಚಾರ ಕೂಡ ಸ್ಥಗಿತಗೊಳ್ಳಲಿದೆ. ಆಸ್ಪತ್ರೆಗಳಲ್ಲಿ ಕೂಡ ಕೇವಲ ತುರ್ತು ಪ್ರಕರಣಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ.
ಮನೆ ಮನೆ ಸಮೀಕ್ಷೆಗೆ ಯಾರಾದರೂ ಅಡ್ಡಿಪಡಿಸಿದರೆ ನಾನು ಹಿಟ್ಲರ್ ಅಥವಾ ಅವನಿಗಿಂತ ಕ್ರೂರನಾಗಬೇಕಾಗುತ್ತದೆ ಎಂದು ತೆಲಂಗಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಎಚ್ಚರಿಕೆ ನೀಡಿದ್ದಾರೆ.