ನವದೆಹಲಿ : ಮಾಜಿ ಸಚಿವ, ಅಕ್ರಮ ಗಣಿಗಾರಿಕೆಯ ಆರೋಪಿ ಜನಾರ್ದನ ರೆಡ್ಡಿ ಮತ್ತು ಅವರ ಪತ್ನಿ ಲಕ್ಷ್ಮಿ ಅರುಣಾ ಅವರಿಗೆ ಸೇರಿದ 37.86 ಕೋಟಿ ರೂಗಳನ್ನು ಅಕ್ರಮ ಹಣ ವರ್ಗವಣೆ ಕುರಿತ ವಿಶೇಷ ನ್ಯಾಯಲಯ ಮುಟ್ಟುಗೋಲು ಹಾಕಿಕೊಂಡಿದೆ.
ಮುಟ್ಟುಗೋಲು ಹಾಕಿಕೊಂಡ ಆಸ್ತಿಯಲ್ಲಿ 4 ಕೋಟಿ ರೂ. ಮೌಲ್ಯದ ಬೆಂಗಳೂರಿನ ಫ್ಲ್ಯಾಟ್, 14 ಲಕ್ಷ ರೂ. ಮೌಲ್ಯದ ಬಳ್ಳಾರಿಯಲ್ಲಿನ ಮನೆ ಮತ್ತು ಅಪಾರ ನಗದು, ನಿಶ್ಚಿತ ಠೇವಣಿ ಸೇರಿದೆ.
ಈ ಮೊದಲು ಈ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ವೇಳೆ ಜಫ್ತಿ ಮಾಡಿತ್ತು. 2012ರಲ್ಲೇ ರೆಡ್ದಿ ಹಾಗೂ ಅವರ ಪತ್ನಿಯ ವಿರುದ್ಧವೂ ಇ.ಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿತ್ತು.
ಬಳ್ಳಾರಿಯ ಹಾವಂಬಾವಿಯಲ್ಲಿರುವ ಅಸೋಸಿಯೇಟೆಡ್ ಮೈನಿಂಗ್ ಕಂಪನಿಗೆ ಸಂಬಂದಿಸಿದ ಹಣಕಾಸು ಅಕ್ರಮದ ತನಿಖೆ ವೇಳೆ ಪ್ರಕರಣ ದಾಖಲಿಸಲಾಗಿತ್ತು.
ಈಗ ಮುಟ್ಟುಗೋಲಾಗಿರುವ ಒಟ್ಟು ಆಸ್ತಿ ಮೌಲ್ಯ 37,88,66,108.70 ರೂ. ನ್ಯಾಯಾಲಯದ ಮುಂದೆ ಇಡಲಾದ ಎಫ್.ಐ.ಆರ್, ಚಾರ್ಜ್ ಶೀಟ್, ಸೇರಿದಂತೆ ಅನೇಕ ದಾಖಲೆಗಳನ್ನು ಪರಿಶೀಲಿಸಿದಾಗ ಮತ್ತು ವಾದ, ಪ್ರತಿವಾದಗಳನ್ನು ಆಲಿಸಿದಾಗ ಮೇಲ್ನೋಟಕ್ಕೆ ಜನಾರ್ದನ ರೆಡ್ಡಿ ದಂಪತಿಗಳು ಅಕ್ರಮವೆಸಗಿರುವುದು ಮನವರಿಕೆಯಾಗಿದೆ. ಹೀಗಾಗಿ ಆಸ್ತಿ ಮುಟ್ಟುಗೋಲುಹಾಕಿಕೊಳ್ಳಲಾಗುತ್ತಿದೆ ಎಂದು ಅಕ್ರಮ ಹಣ ವರ್ಗಾವಣೆ ನ್ಯಾಯಾಲಯದ ನ್ಯಾಯಾಧೀಶ ಕೆ.ರಾಮಮೂರ್ತಿ ತಿಳಿಸಿದ್ದಾರೆ.