ನವದೆಹಲಿ : ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಮಧ್ಯೆ ಪರಸ್ಪರ ಉತ್ತಮ ಗೌರವ ಭಾವನೆಯಿರಬೇಕು. ಸಂವಿಧಾನ, ಪ್ರತಿಯೊಂದು ಅಂಗಕ್ಕೂ ತನ್ನದೇ ಆದ ಸ್ವಾತಂತ್ರ್ಯ ನೀಡಿದೆ. ಒಂದು ಅಂಗ ಮತ್ತೊಂದರಲ್ಲಿ ಹಸ್ತಕ್ಷೇಪಮಾಡಬಾರದು ಎಂದು ಸಾರಿ ಹೇಳಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಆ.ಎಂ.ಲೋಧ ತಿಳಿಸಿದ್ದಾರೆ.
ದೇಶದ ಉನ್ನತ ನ್ಯಾಯಾಲಯಗಳ ನ್ಯಾಯಾಧೀಶರನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆಯನ್ನು ರದ್ದುಗೊಳಿಸಿ ನ್ಯಾಯಾಂಗ ನೇಮಕಾತಿ ಮಸೂದೆ ಅಂಗೀಕಾರವಾದ ಬೆನ್ನಲ್ಲೇ ಸಿಜೆ ಈ ಹೇಳಿಕೆ ನೀಡುವ ಮೂಲಕ ಸರ್ಕಾರದ ಕ್ರಮಕ್ಕೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿರುವ ಜನರು ಪರಸ್ಪರ ಗೌರವ ಭಾವನೆ ಇಟ್ಟುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಪರಸ್ಪರರು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಮತ್ತು ಇನ್ನೊಬ್ಬರ ಕೆಲಸದಲ್ಲಿ ಪ್ರಭಾವ ಬೀರದಂತೆ ಕೆಲಸ ಮಾಡುವ ಆಶಾಭಾವನೆಯಿದೆ ಎಂದು ತಿಳಿಸಿದ್ದಾರೆ.