ನವದೆಹಲಿ : 'ರಾಮಸೇತು' ಒಡೆಯುವ ಈ ಹಿಂದಿನ ಯುಪಿಎ ಸರ್ಕಾರದ ನಿರ್ಧಾರಕ್ಕೆ ಎನ್.ಡಿ.ಎ ಸರ್ಕಾರ ತಿಲಾಂಜಲಿ ನೀಡಲು ಮುಂದಾಗಿದೆ. ರಾಮಸೇತುವನ್ನು ರಕ್ಷಿಸುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಂಸತ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸಚಿವರು ಆ.14ರ ಸಂಸತ್ ಕಲಾಪದಲ್ಲಿ ರಾಮಸೇತು ಬಗ್ಗೆ ಎನ್.ಡಿ.ಎ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರಾದರೂ ಈ ವಿಷಯದ ಬಗ್ಗೆ ವಿವರಣಾತ್ಮಕವಾಗಿ ಹೇಳಿಕೆ ನೀಡಲಿಲ್ಲ. ಆದರೆ ರಾಮಸೇತು ಒಡೆಯುವ ಪ್ರಸ್ತಾವನೆ ಹಿಂಪಡೆದು, ರಾಮಸೇತು ಒಡೆಯುವ ಮೂಲಕ ಜಾರಿಯಾಗಬೇಕಿದ್ದ ಸೇತುಸಮುದ್ರಂ ಯೋಜನೆಗೆ ಪರ್ಯಾಯವಾದ 4 ಮಾರ್ಗಗಳನ್ನು ಸಂಸತ್ ನಲ್ಲಿ ಚರ್ಚಿಸಲಾಗುವುದು ಎಂದು ಗಡ್ಕರಿ ಭರವಸೆ ನೀಡಿದ್ದಾರೆ. ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಸೆಪ್ಟೆಂಬರ್ ನಲ್ಲಿ ರಾಮಸೇತು ಇರುವ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ದಕ್ಷಿಣ ಭಾರತದ ರಾಮೇಶ್ವರಂ ಬಳಿಯಿರುವ ಪಂಬನ್ ದ್ವೀಪದಿಂದ ಶ್ರೀಲಂಕಾದ ಉತ್ತರ ಕರಾವಳಿ ತೀರದ ಮನ್ನಾರ್ ದ್ವೀಪದವರೆಗೆ ರಾಮಸೇತುವೆ ಹರಡಿಕೊಂಡಿದೆ. ಪುರಾತನ ಇತಿಹಾಸ ತಜ್ಞರರು, ಹಿಂದಿನ ಕಾಲದಲ್ಲಿ ಭಾರತದಿಂದ ಲಂಕಾಗೆ ತೆರಳಲು ರಾಮಸೇತುವೆ ಭೂಮಾರ್ಗವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೆದ್ದರಿ ರಸ್ತೆ ನಿರ್ಮಾಣಕ್ಕಾಗಿ ಭರಿಸಲಾಗುವ ವೆಚ್ಚ ಸಂಪೂರ್ಣವಾಗಿ ಸಂಗ್ರಹವಾಗಿರುವ ರಸ್ತೆಗಳಲ್ಲಿ ಇನ್ನು ಮುಂದೆ ತೆರಿಗೆ ವಿಧಿಸುವುದಿಲ್ಲ ಎಂದು ಇದೇ ವೇಳೆ ನಿತಿನ್ ಗಡ್ಕರಿ ತಿಳಿಸಿದ್ದಾರೆ.