ನವದೆಹಲಿ : ತೀವ್ರ ಚರ್ಚೆಗೆ ಕಾರಣವಾಗಿದ್ದ ನ್ಯಾಯಾಂಗ ನೇಮಕ ಆಯೋಗ ವಿಧೇಯಕವನ್ನು ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ.
ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನೇಮಕ ಮಾಡುವ ಹೊಣೆಯನ್ನು ಕಳೆದ 23 ವರ್ಷಗಳಿಂದ ಕೊಲಿಜಿಯಂ (ನ್ಯಾಯಾಧೀಶರ ನೇಮಕ ಸಮಿತಿ) ನಿರ್ವಹಿಸಿಕೊಂಡು ಬಂದಿತ್ತು. ನ್ಯಾಯಾಧೀಶರ ನೇಮಕಕ್ಕೆ, ನ್ಯಾಯಾಂಗ ನೇಮಕ ಆಯೋಗ ರಚಿಸಲು ಉದ್ದೇಶಿಸಿರುವ ಕೇಂದ್ರ ಸರ್ಕಾರ, ಆ.13ರಂದು ಲೋಕಸಭೆಯಲ್ಲಿ ಮಂಡಿಸಿದ ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ ವಿಧೇಯಕ-2014ಕನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಗಿತ್ತು. ಆದರೆ ರಾಜ್ಯಸಭೆಯಲ್ಲಿಯೂ ವಿಧೇಯಕ ಅಂಗೀಕಾರವಾಗಬೇಕಿತ್ತು.
ವಿತ್ತ ಸಚಿವ ಅರುಣ್ ಜೇಟ್ಲಿ ಆ.14ರಂದು ರಾಜ್ಯಸಭೆಯಲ್ಲಿ ವಿಧೇಯಕವನ್ನು ಮಂಡಿಸಿದ್ದು, ಧ್ವನಿಮತದ ಮೂಲಕ ಮಸೂದೆ ಅಂಗೀಕರಿಸಲಾಯಿತು. ಲೋಕಸಭೆಯಲ್ಲಿ ಮಂಡಿಸಲಾದ ಈ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿತ್ತು. ಆದರೆ ಈಗ ರಾಜ್ಯಸಭೆಯಲ್ಲಿಯೂ ಅನುಮೋದನೆ ದೊರೆತಂತಾಗಿದೆ.
ಈವರೆಗೆ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಮೂರ್ತಿ ಅವರನ್ನೊಳಗೊಂಡ ನ್ಯಾಯಾಧೀಶರ ಪ್ರತ್ಯೇಕ ಸಮಿತಿಗಳು(ಕೊಲಿಜಿಯಂ) ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಗಳಿಗೆ ನ್ಯಾಯಾಧೀಶರನ್ನು ಆಯ್ಕೆ ಮಾಡುತ್ತಿತ್ತು. ಕೊಲಿಜಿಯಂ ಆಯ್ಕೆಮಾಡಿದ ಹೆಸರುಗಳನ್ನು ರಾಷ್ಟ್ರಪತಿಗಳು ಅಂಗೀಕರಿಸುತ್ತಿದ್ದರು.
ಆದರೆ ಇನ್ನುಮುಂದೆ ಸುಪ್ರೀಂ ಕೋರ್ಟ್ ಸಿಜೆ, ಇಬ್ಬರು ನ್ಯಾಯಾಧೀಶರು, ಇಬ್ಬರು ಗಣ್ಯರು ಹಾಗೂ ಕೇಂದ್ರ ಕಾನೂನು ಸಚಿವರನ್ನು ಒಳಗೊಂಡ ನ್ಯಾಯಾಂಗ ನೇಮಕ ಆಯೋಗ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳ ನ್ಯಾಯಾಧೀಶರನ್ನು ಆಯ್ಕೆಮಾಡಲಿದೆ. ಈ ಹೆಸರುಗಳನ್ನು ರಾಷ್ಟ್ರಪತಿಗಳು ಅಂಗೀಕರಿಸಬೇಕಿದೆ.