BW News Bureau : ದುಬೈ ನಿವಾಸಿ ಆರತಿ ಘಟಿಕಾರ್ ಅವರ ಚೊಚ್ಚಲ ಹನಿಗವನ ಸಂಕಲನ 'ಹನಿ ಹನಿ ಚಿತ್ತಾರ' ಪುಸ್ತಕದ ಬಿಡುಗಡೆಯ ಕಾರ್ಯಕ್ರಮ ಆ.10 ರಂದು ಬೆಂಗಳೂರಿನ ಬಿ.ಪಿ.ವಾಡಿಯ ರಸ್ತೆಯಲ್ಲಿರುವ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆಯಿತು.
ಹಾಸ್ಯ ಹಾಗೂ ಸಂಭ್ರಮದ ಹಬ್ಬದ ವಾತಾವರಣದಲ್ಲಿ ಖ್ಯಾತ ಕವಿ ಬಿ.ಆರ್.ಲಕ್ಷ್ಮಣ ರಾವ್ ರವರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಹಾಸ್ಯ ಸಾಹಿತಿಗಳಾದ ಶ್ರೀನಿವಾಸ ವೈದ್ಯ ರವರು ಪುಸ್ತಕವನ್ನು ಅನಾವರಣ ಮಾಡಿದರು.
ಕಾರ್ಯಕ್ರಮದ ಅಂಗವಾಗಿ ಮಾತನಾಡಿದ ಹಾಸ್ಯ ಬರಹಗಾರ ಬೇಲೂರು ರಾಮಮೂರ್ತಿ, ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆರತಿರವರ ಚೊಚ್ಚಲ ಹೆರಿಗೆಗೆ ಹೋಲಿಸುತ್ತ ಸಭಾಂಗಣವನ್ನು ನರ್ಸಿಂಗ್ ಹೋಮಿಗೂ ಹಾಗು ಶ್ರೀನಿವಾಸ ವೈದ್ಯರನ್ನು "ವೈದ್ಯ" ರೆಂದೂ, ರಾಮ (ರಾಮ ಮೂರ್ತಿ) ಯನ್ನೂ ಹಾಗೂ ( ಲಕ್ಷ್ಮಣರಾಯರನ್ನು ) ಸೂಲಗಿತ್ತಿಯರಿಗೆ ಹೋಲಿಸಿ ನಗೆ ಚಿಮ್ಮಿಸಿದರು. ಪ್ರಾಕಾಶ ಸಾಹಿತ್ಯ ಪ್ರಕಾಶನದಿಂದ ಹೊಸ ಲೇಖಕಿ ಗೆ ಕೊಟ್ಟ ಪ್ರೋತ್ಸಾಹವನ್ನು ಸ್ಮರಸಿ ಅವರು ಕೊಟ್ಟ ಸಲಹೆ ಸೂಚನೆಗಳನ್ನು ಹೊಸ ಪ್ರತಿಭೆಗಳನ್ನು ಗುರುತಿಸಿದ್ದನ್ನು ವಿವರಿಸಿದರು .
ದಿ. ಕೆ.ಎಸ್.ನರಸಿಂಹಸ್ವಾಮಿರವರ ಪುತ್ರಿ ವೀಣಾ ಹಾಗೂ ವೆಂಕಟೇಶ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಕಾರ್ಯಕ್ರಮಕ್ಕೆ ಮೆರಗು ತಂದು ಕೊಟ್ಟತ್ತು. ಅವರನ್ನು ವೇದಿಕೆಗೆ ಕರೆಸಿ ವಂದಿಸಿ ಆಶೀರ್ವಾದವನ್ನು ಪಡೆದುದ್ದು ನಿಜಕ್ಕೂ ವಿಶೇಷವಾದ ಹುರುಪಿಗೆ ಸಾಕ್ಷಿಯಾಯಿತು.
ನಂತರ ಮಾತನಾಡಿದ ಆರತಿ ಘಟಿಕಾರ್ ಕಾಲೇಜು ದಿನಗಳ ಸಾಹಿತ್ಯ ಚಟುವಟಿಕೆ, ಹಾಗು ಆಸಕ್ತಿಗಳನ್ನು ನೆನಪು ಮಾಡಿಕೊಂಡರು. ಆಗಲೇ ಕವನ ಹಾಗು ಹನಿಗವನಗಳನ್ನು ಬರೆಯಲು ಪ್ರಾರಂಭಿಸಿದ್ದು, ಮನೆಯಲ್ಲಿನ ಸಾಹಿತ್ಯದ ವಾತಾವರಣ, ಉತ್ತಮ ಲೇಖಕಿಯಾಗಿದ್ದ ಅವರ ತಾಯಿ ಸುಧಾ ಸರನೋಬತ್ ಅವರಿಂದ ಪಡೆದ ಪ್ರಾರಂಭಿಕ ಮಾರ್ಗದರ್ಶನವನ್ನು ಆರತಿ ಸ್ಮರಿಸಿದರು. ಅಲ್ಲದೇ ತಂದೆ ತಾಯಿಯರನ್ನು ವೇದಿಕೆಯಲ್ಲಿ ಕರೆಸಿ ಸನ್ಮಾನಿಸಿ ಅವರಿಗೆ ತಮ್ಮ ಪುಸ್ತಕವನ್ನು ಗೌರಪೂರ್ವಕವಾಗಿ ನೀಡಿದರು.
ಹಿರಿಯ ಕವಿಗಳ ಕಾವ್ಯಗಳೆ ಅವರ ಕಾವ್ಯ ಸ್ಪೂರ್ತಿಗೆ ಸರಕುಗಳು ಎಂದ ಆರತಿ ಘಟಿಕಾರ್ ಖ್ಯಾತ ಕವಿಗಳಾದ ಬಿ. ಆರ್. ಲಕ್ಷ್ಮಣ ರಾವ್ ಹಾಗು ಹನಿಗವನಗಳ ಚಕ್ರವರ್ತಿ ದುಂಡಿರಾಜ್ ಆವರ ವಾಮನರೂಪಿ ವಿಡಂಬನಾತ್ಮಕ ಅದ್ಭುತ ಹನಿಗವನಳಿಂದಲೆ ಹನಿಗವನ ರಚನೆಯಲ್ಲಿ ತಾವು ಅಪಾರವಾಗಿ ಪ್ರೇರಣೆ ಪಡೆದಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ಸಾಹಿತಿ ಗೋಪಾಲ್ ವಾಜಪಯೀ ರವರನ್ನು ಗೌರವಿಸಲಾಯಿತು.