ತುಮಕೂರು : ಹೇಮಾವತಿ ನಾಲೆ ಪದೇ ಪದೇ ಒಡೆಯಲು ಕಾರಣವಾಗಿರುವವರ ವಿರುದ್ಧ ಸಿಓಡಿ ತನಿಖೆಗೆ ವಹಿಸುವಂತೆ ಬಿಜೆಪಿ ಆಗ್ರಹಿಸಿದೆ.
2012-13, 2013-14 ಮತ್ತು 2014-15ರಲ್ಲಿ ಸತತವಾಗಿ ಕಳೆದ ಮೂರು ವರ್ಷಗಳಿಂದ ತುಮಕೂರಿಗೆ ನೀರು ಹರಿಸುವ ಹೇಮಾವತಿ ನಾಲೆಯು 72ಕಿ.ಮೀ ವ್ಯಾಪ್ತಿಯೊಳಗೆ ನಾಲೆ ಒಡೆದು ಹೋಗುತ್ತಿದ್ದು, ಪ್ರತಿ ವರ್ಷ ನೀರು ಹರಿಸುವ ಆರಂಭದಲ್ಲಿ ಈ ರೀತಿ ಆಗುತ್ತಿರುವುದು ನಿರಂತರವಾಗಿದೆ.
ನಾಲೆ ಒಡೆಯಲು ಕಾರಣವೇನೆಂಬುದು ಈ ವರೆಗೂ ಸ್ಪಷ್ಟವಾಗಿಲ್ಲ, ಆದರೆ ನಾಲೆ ಒಡೆಯಲು ಕೆಲವು ಶಕ್ತಿಗಳು ಕಾರಣವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಹೇಮಾವತಿ ನಾಲೆ ಒಡೆಯಲು ಕಾರಣವೇನು ಎಂಬ ಬಗ್ಗೆ ತಿಳಿಯಲು ಸಿಓಡಿ ತನಿಖೆಯಾಗಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಹಾಸನ ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಇದ್ದ ವೈಷಮ್ಯದಿಂದಾಗಿ ನಾಲೆ ಒಡೆಯಲು ರೈತರಿಗೆ ಪ್ರೇರಣೆ ಹಾಗೂ ಕುಮ್ಮಕ್ಕು ನೀಡಿರುವ ಬಗ್ಗೆ ಸಂಶಯವಿದೆ. ನಾಗಸಮುದ್ರ ಕೆರೆಗೆ ಪ್ರತೀ ವರ್ಷ ಕಾನೂನು ಬಾಹಿರವಾಗಿ ನೀರು ಹರಿಸುತ್ತಿರುವುದು ಈಗ ಸದರೀ ಕೆರೆಗೆ ನೀರು ಸ್ಥಗಿತಗೊಳಿಸಿರುವ ಹಿನ್ನಲೆಯಲ್ಲಿ ಈ ಕೆರೆಯ ಅಚ್ಚುಕಟ್ಟುದಾರರು ಕಾನೂನು ಬಾಹಿರವಾಗಿ ನೀರು ತುಂಬಿಸಲು ನಾಲೆ ಒಡೆದಿರುವ ಸಂಶಯವಿದೆ ಎಂದು ಬಿಜೆಪಿ ಆರೋಪಿಸಿದೆ.
ನಾಲೆ ಒಡೆಯುವ ಪಟ್ಟಭದ್ರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಬೇಕು. ಗೋರೂರು ಜಲಾಶಯದ ಮುಖ್ಯ ಇಂಜಿನಿಯರ್ ರವರು ಕಳೆದ ಮೂರು ವರ್ಷಗಳಿಂದ ಇದೇ ಸ್ಥಳದಲ್ಲಿ ಇದ್ದು ಇವರು ಇಲ್ಲಿನ ಮಾಹಿತಿಗಳನ್ನು ರಾಜಕೀಯ ಮುಖಂಡರಿಗೆ ತಲುಪಿಸುತ್ತಾರೆ ಎಂಬ ಗುಮಾನಿ ಇದ್ದು, ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.