ಬೆಂಗಳೂರು : 2011ರ ಕೆಪಿಎಸ್ ಸಿ ನೇಮಕಾತಿ ರದ್ದು ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಮಾಜಿಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಭ್ಯರ್ಥಿಗಳ ಪರ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಕುಮಾರಸ್ವಾಮಿ, ರಾಜ್ಯ ಸರ್ಕಾರ ಕೆಪಿಎಸ್ ಸಿ ನೇಮಕಾತಿ ರದ್ದು ಮಾಡಿ ಪ್ರಾಮಾಣಿಕ, ಬಡ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದೆ. ಅಭ್ಯರ್ಥಿಗಳಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ಗುಡುಗಿದ್ದಾರೆ.
ರಾಜ್ಯ ಸರ್ಕಾರ ಅಭ್ಯರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ. ನಮಗೆ ಬೇರೆ ಕೆಲಸವಿಲ್ಲ ಎಂದು ಇಲ್ಲಿ ಬಂದುಹೋರಾಟ ನಡೆಸುತ್ತಿಲ್ಲ. ಅಥವಾ ಯಾವುದೇ ರಾಜಕೀಯ ಉದ್ದೇಶದಿಂದಲೂ ಹೋರಾಟ ನಡೆಸುತ್ತಿಲ್ಲ. ಸರ್ಕಾರ ಇಂತಹ ತಪ್ಪು ನಿರ್ಧಾರಗಳನ್ನು ಕೈಬಿಟ್ಟು ನ್ಯಾಯ ಒದಗಿಸಿಕೊಡಬೇಕು. ನಮ್ಮ ಹೋರಾಟವನ್ನು ಲಘುವಾಗಿ ಪರಿಗಣಿಸಬೇಡಿ. ರಾಜ್ಯದಲ್ಲಿನ ಪ್ರತಿ ಜನತೆಗೂ ನ್ಯಾಯ ಒದಗಿಸುವುದು ಸರ್ಕಾರದ ಧರ್ಮ. ಅಭ್ಯರ್ಥಿಗಳ ಕುಟುಂಬ ಹಿನ್ನಲೆಯನ್ನು ಪರಿಶೀಲಿಸಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅಭ್ಯರ್ಥಿಗಳು ತುಂಬಾ ಕಷ್ಟಪಟ್ಟು ಪರೀಕ್ಷೆ ಬರೆದಿದ್ದಾರೆ. ಅಭ್ಯರ್ಥಿಗಳಲ್ಲಿ ಹಲವು ಹೆಣ್ಣುಮಕ್ಕಳಿಗೆ ಪರೀಕ್ಷೆ ಬರೆಯುವ ವೇಳೆ ಅಬಾರ್ಷನ್ ಆದ ಘಟನೆಯೂ ನಡೆದಿದೆ ಎಂದು ಕಣ್ಣೀರಿಡುತ್ತಿದ್ದಾರೆ. ಸರ್ಕಾರಕ್ಕೆ ಸ್ವಲ್ಪವೂ ಮಾನವೀಯತೆಯೇ ಇಲ್ಲವೆ? ಭ್ರಷ್ಟಾಚಾರ ನಡೆಸಿದ ಅಭ್ಯರ್ಥಿಗಳ ಬಗ್ಗೆ ತನಿಖೆ ನಡೆಸಿ ಅವರನ್ನು ಶಿಕ್ಷಿಸಿ. ಯಾರೋ ಮಾಡಿದ ತಪ್ಪಿಗೆ ಇವರಿಗ್ಯಾಕೀ ಶಿಕ್ಷೆ ಎಂದು ಕಿಡಿಕಾರಿದ್ದಾರೆ.
ರಾಜಕೀಯ ದೃಷ್ಠಿಯಿಂದ ನಾವಿಲ್ಲಿ ಹೋರಾಟ ನಡೆಸುತ್ತಿಲ್ಲ. ಪಕ್ಷಾತೀತವಾಗಿ ಈ ಹೋರಾಟ ನಡೆಸುತ್ತಿದ್ದೇವೆ. ರಾಜ್ಯ ಸರ್ಕಾರ ಈರೀತಿ ಬೇಜವಾಬ್ದಾರಿಯುತವಾಗಿ ವರ್ತಿಸುವುದನ್ನು ನಿಲ್ಲಿಸಿ ತಕ್ಷಣ ನೇಮಕಾತಿ ರದ್ದು ಆದೇಶ ವಾಪಸ್ ಪಡೆದು, ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಕೆಪಿಎಸ್ ಸಿ ಅಭ್ಯರ್ಥಿಗಳ ಹೋರಾಟಕ್ಕೆ ಬೆಂಬಲ ನೀಡಿ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಕನ್ನಡಪರ ಸಂಘಟನೆಗಳು ಕೂಡ ಪ್ರತಿಭಟನೆಯಲ್ಲಿ ನಿರತವಾಗಿವೆ.