ಮೈಸೂರು : ವಿಶ್ವ ವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ವೈಭವದ ಚಾಲನೆ ದೊರೆತಿದ್ದು, ಅರಮನೆ ನಗರಿಯಲ್ಲಿ ರಾಜ ಗಾಂಭೀರ್ಯದಿಂದ ಸಾಗುತ್ತಿರುವ ಗಜೆಪಡೆಗಳು, ಸಾಂಸ್ಕೃತಿಕ ಕಲಾತಂಡಗಳು, ಚಿತ್ತಾಕರ್ಷಕ ಸ್ತಬ್ದಚಿತ್ರಗಳು ಕಣ್ಮನಸೆಳೆಯುತ್ತಿವೆ.
ಪೋಲಿಸ್ ಬ್ಯಾಂಡ್ಗಳ ಸುಶ್ರಾವ್ಯ ಸಂಗೀತ, ಅರಮನೆಯ ವಾದ್ಯವೃಂದ, ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಪೂಜಾಕುಣಿತ, ಕರಡಿ ಮಜಲು, ನಂದಿಕೋಲು, ಮರಗಾಲು, ಹುಲಿವೇಷಧಾರಿಗಳೂ ಸೇರಿದಂತೆ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿವೆ.
ರಾಜ್ಯದ ಕಲಾ ತಂಡಗಳಲ್ಲದೆ, ಉತ್ತರ ಪ್ರದೇಶ, ಪಂಜಾಬ್, ತೆಲಂಗಾಣ, ಒಡಿಸ್ಸಾ, ಡಾರ್ಜಲಿಂಗ್, ಹರಿಯಾಣ ರಾಜ್ಯಗಳ ಒಟ್ಟು 60 ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದು, 2000 ಕಲಾವಿದರು ಅತ್ಯಾಕರ್ಷಕ ನೃತ್ಯ ಪ್ರದರ್ಶನದ ಮೂಲಕ ಜನಮನಸೂರೆಗೊಳಿಸುತ್ತಿದ್ದಾರೆ.ನಾಡಿನ ಕಲೆ, ಸಾಹಿತ್ಯ, ವಾಸ್ತುಶಿಲ್ಪ, ಪಾರಂಪರೆ, ಪರಿಸರ, ಐತಿಹಾಸಿಕ ತಾಣಗಳು, ಪುರಾಣ ಪ್ರಸಿದ್ಧ ತಾಣಗಳು, ದೇವಾಲಯಗಳು ಮುಂತಾದ ಸ್ತಬ್ಧ ಚಿತ್ರಗಳ ಮೆರವಣಿಗೆ ಸಾಲುಗಟ್ಟಿ ಸಾಗುತ್ತಿದೆ.
ಮೆರವಣಿಗೆಯಲ್ಲಿ ಕೆಎಸ್ಆರ್ಪಿ, ಅಗ್ನಿಶಾಮಕ ಸೇವೆ, ಮೌಂಟ್ ಬಿಟಾಲಿಯನ್, ಕರ್ನಾಟಕ ಪೊಲೀಸ್ ಬ್ಯಾಂಡ್, ಸ್ಕೌಟ್ಸ್ ಅಂಡ್ ಗೈಡ್ಸ್, ಸೇವಾ ದಳ, ಮಹಿಳಾ ಪೊಲೀಸ್, ರಿಸರ್ವ್ ಪೊಲೀಸ್ ಸೇರಿದಂತೆ ವಿವಿಧ ತಂಡಗಳು ಪಾಲ್ಗೊಂಡಿವೆ.
ಅರಮನೆ ಆವರಣದಿಂದ ಬನ್ನಿಮಂಟಪದವರೆಗೂ ಮೆರವಣಿಗೆ ನಡೆಯಲಿದ್ದು, ದೇಶ-ವಿದೇಶಗಳ ಪ್ರವಾಸಿಗರು ಮೆರವಣಿಗೆಯ ವೈಭವವನ್ನು ಕಣ್ತುಂಬಿಕೊಳ್ಳತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮೆರವಣಿಗೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊೞಲಾಗಿದೆ.