ಬುಸುಗುಟ್ಟುವ ಬಚ್ಚನ್
Rating :
Hero :
ಸುದೀಪ್
Heroine :
ಭಾವನ, ಪೆರೋಲ್
Other Cast :
ಜಗಪತಿಬಾಬು,ಶ್ರುತಿ,ಜೈ ಜಗದೀಶ್, ಸುಧಾ ಬೆಳವಾಡಿ, ಪದ್ಮಜಾರಾವ್, ರಾಮಕ್ರಿಷ್ಣ,ರವಿಶಂಕರ್,ಆಶಿಷ್, ಅರಣ್ ಸಾಗರ್, ಅಚ್ಯುತ್ ಕುಮಾರ್ ಮತ್ತಿತರರು.
Director :
ಶಶಾಂಕ್
Music Director :
ವಿ,ಹರಿಕ್ರಿಷ್ಣ
Producer :
ಉದಯ್ ಕೆ. ಮೆಹೆತ
Release Date :
11-04-2013
'ಬಚ್ಚನ್' ಕೇಳುವಾಗಲೇ ಒಂದು ಸೌಂಡಿಂಗ್ ಉಂಟುಮಾಡುತ್ತದೆ. ಒಳಹೊಕ್ಕು ನೋಡಿದರೆ ನಿಜಕ್ಕೂ ಅಚ್ಚರಿಯಾಗುವುದು. ಕೆಲವು ಕಡೆ ಪ್ರೇಕ್ಷಕನ ತಾಳ್ಮೆಯನ್ನು ಕೆಣಕಿದರೂ, ಮುಂದೆ ಏನಿರಬಹುದು..? ಎಂಬ ಕುತೂಹಲ ಕೂರಿಸುತ್ತದೆ. ಕನ್ನಡದಲ್ಲಿ ಆಕ್ಷನ್ ಪ್ಯಾಕ್ಗಳಿಗೇನು ಕಮ್ಮಿ ಇಲ್ಲ. ಆದರೆ ಬಚ್ಚನ್ ಆಕ್ಷನ್ ಪ್ಯಾಕ್ ಜೊತೆಗೆ ಒಂದು ಕ್ಯೂರಿಯಾಸಿಟಿ ತಂದುಕೊಂಡು ಜನರಿಂದ ಸೈ ಎನ್ನಿಸಿಕೊಳ್ಳುತ್ತದೆ.
ನಿರ್ದೇಶಕ ಶಶಾಂಕ್ ಸಾಮಾನ್ಯವಾದ ಥ್ರಿಲರ್ ಕತೆಯನ್ನು ಹಿಡಿದುಕೊಂಡು, ಅದನ್ನು ಚಿತ್ರ ಕತೆಗೆ ತರುವ ಹೊತ್ತಿಗೆ ಒಂದಷ್ಟು ಕೆಲಸ ಮಾಡಿದ್ದಾರೆ. ನೇರವಾಗಿ ಕತೆ ಹೇಳುವ ಶಶಾಂಕ್, ಇಲ್ಲಿ ನಿರೂಪಣೆಯನ್ನು ಬದಲಿಸಿಕೊಂಡು ಉತ್ತಮ ಪ್ರಯತ್ನ ಮಾಡಿದ್ದಾರೆ. ಆದರೆ ಸೀನ್ ಕಟ್ಟುವುದರಲ್ಲಿ ಸೋತಿದ್ದಾರೆ.
ಈ ಚಿತ್ರದ ಕತೆಯ ವಿಷಯಕ್ಕೆ ಬಂದರೆ ಹೇಳುವುದು ಚೆನ್ನಾಗಿರುವುದಿಲ್ಲ. ನೋಡಬಹುದು. ಯಾವುದೇ ಒಂದು ಕತೆಯನ್ನು ಹೇಳಿದರೂ ಎಲ್ಲಾ ಕತೆಗಳು ಬಿಚ್ಚಿಕೊಳ್ಳುತ್ತವೆ. ಆದ್ದರಿಂದ ಕತೆಯನ್ನು ಹೇಳದಿರುವುದೇ ಒಳ್ಳೆಯದು. ಆದರೂ ಒಂದು ಸಾಲಿನಲ್ಲಿ ಹೇಳಬೇಕೆಂದರೆ ಒಬ್ಬ ನಾಯಕ ತನ್ನ ಪ್ರಿಯತಮೆಯ ಸಾವಿಗಾಗಿ ಸೇಡನ್ನು ತೀರಿಸಿಕೊಳ್ಳವುದು. ಇಷ್ಟು ಸಾಕು ಎನ್ನಿಸುತ್ತದೆ. ಚಿತ್ರದಲ್ಲಿ ಒಂದು ಕತೆ ಇರುವುದಿಲ್ಲ. ಹಲವಾರು ಕತೆಯನ್ನು ಹಲವರು ಹೇಳುವುದರಿಂದ ಕತೆಯು ಜನರ ಮನಸ್ಸಿನಲ್ಲಿ ಉಳಿಯುವುದು ಕಷ್ಟ.
ಚಿತ್ರ ಬಹುವಾಗಿ ನಿಂತಿರುವುದು ರವಿವರ್ಮ ಅವರ ಸಾಹಸದಿಂದ. ತುಂಬಾ ಚೆಂದದ ಸಾಹಸ ಇದರಲ್ಲಿ ಮೂಡಿಬಂದಿದ್ದು, ಶೇಕರ್ ಚಂದ್ರ ಕ್ಯಾಮರಾ ಚೆನ್ನಾಗಿದೆ. ಜನರಿಂದ ಸೀಟಿ ಗಿಟ್ಟಿಸಿಕೊಳ್ಳವ ಎಮ್.ಎಲ್ ಪ್ರಸನ್ನ ಅವರ ಸಂಭಾಷಣೆ, ಹಲೋ ಹಲೋ... ಮತ್ತು ಸದಾ ನಿನ್ನ ಕಣ್ಣಲೇ.. ಎರಡು ಹಾಡುಗಳು ಹರಿಕೃಷ್ಣ ಕೇಳುವಂತೆ ಮಾಡಿದ್ದಾರೆ.
ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ, ಕೆಲವರು ಅನವಶ್ಯಕ ಎನಿಸಿದರೂ ತಮ್ಮ ತಮ್ಮ ಪಾತ್ರಗಳನ್ನು ಎಲ್ಲರೂ ಸಮರ್ಥವಾಗಿ ನಿರ್ವಹಿಸಿದ್ದಾರೆ. ಸುದೀಪ್, ಭಾವನ ಇಬ್ಬರೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ತೆಲುಗು ನಟ ಜಗಪತಿಬಾಬು ಗಮನ ಸೆಳೆಯುತ್ತಾರೆ. ಜೈ ಜಗದೀಶ್, ಸುದಾ ಬೆಳವಾಡಿ, ಪದ್ಮಜಾರಾವ್, ರಾಮಕೃಷ್ಣ, ಪೆರೋಲ್ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ರವಿಶಂಕರ್, ಆಶಿಷ್ ವಿದ್ಯಾರ್ಥಿ, ಅರುಣ್ ಸಾಗರ್, ಅಚ್ಯುತ್ಕುಮಾರ್, ಶೃತಿ ಉತ್ತಮವಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಒಟ್ಟಾರೆ ಈ ಚಿತ್ರದಲ್ಲಿ 'ಏಕೆ'..? ಮತ್ತು 'ಹೇಗೆ'..? ಎನ್ನುವ ಪ್ರಶ್ನೆಯನ್ನು ನೋಡುಗ ಹುಟ್ಟಿಸಿಕೊಳ್ಳದಿದ್ದರೆ ಅವನು ಕೇವ 20 ರಿಂದ 30 ನಿಮಿಷಗಳಲ್ಲಿ ಚಿತ್ರಮಂದಿರದಿಂದ ವಾಪಾಸ್. ಆದರೆ ಅಂತಹ ಪ್ರಶ್ನೆಯನ್ನು ಹುಟ್ಟಿಹಾಕುವ ಸಣ್ಣ ಪ್ರಯತ್ನವನ್ನು ಶಶಾಂಕ್ ಮಾಡಿದ್ದಾರೆ. ಇನ್ನೂ ಸ್ವಲ್ಪ ತಲೆ ಓಡಿಸಿ ಕತೆಯನ್ನು ಹೇಳಿದ್ದರೆ ಚೆನ್ನಾಗಿರುತ್ತಿತ್ತು. ಸಮಗ್ರವಾಗಿ ಹೇಳುವುದಾದರೆ ಇದೊಂದು ಗಾಂಧೀನಗರದವರು ಹೇಳುವಂತೆ ಮಾಸ್ ಮೂವಿ.
ವರದಿ: ನಟರಾಜ್ ಎಸ್,ಭಟ್