ದುಡ್ಡು ಅಂದರ್ ಜನ ಬಾಹರ್
Rating :
Hero :
ಶಿವರಾಜ್ ಕುಮಾರ್
Heroine :
ಪಾರ್ವತಿ ಮೆನನ್
Other Cast :
ಶಿವರಾಜ್ ಕುಮಾರ್, ಪಾರ್ವತಿ ಮೆನನ್, ಜಸ್ವಾ, ಶ್ರೀನಾಥ್, ಅರುಂಧತಿನಾಗ್, ಶ್ರೀಧರ್, ಸ್ರುಜನ್ ಲೋಕೇಶ್, ರಘು, ಶಶಿಕುಮಾರ್, ಮತ್ತಿತರರು.
Director :
ಫಣೀಶ್ ರಾಮನಾಥಪುರ
Music Director :
ವಿಜಯ ಪ್ರಕಾಶ್
Producer :
ರಜನೀಶ್, ಪ್ರಸಾದ್.
Release Date :
05-04-2013
ಒಂದು ಚಿತ್ರವೆಂದರೆ 3 ಫೈಟ್, 4ರಿಂದ 5 ಸಾಂಗ್, ಒಂದಷ್ಟು ಮಜಾಕೊಡುವ ಡೈಲಾಗ್, ಸ್ವಲ್ಪ ಕಾಮಿಡಿ, ಉತ್ತಮ ನಾಯಕಿ, ಹೆಸರು ಮಾಡಿರುವ ನಾಯಕನಿದ್ದರೆ ಸಾಕೆನ್ನುವ ಪ್ರೇಕ್ಷಕ, ಕನ್ನಡದಲ್ಲಿ ಇನ್ನು ಉಳಿದುಕೊಂಡಿಲ್ಲ. ಅವನಿಗೆ ಹಲವಾರು ಆಯ್ಕೆಗಳು ಸುತ್ತಮುತ್ತಲು ಕೈ ಬೀಸಿ ಕರೆಯುತ್ತಿವೆ. ಈಗಲೂ ಅದೇ ಹಳೆಯ ಥಿಯರಿಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತೇವೆಂದರೆ ಅದು ಅವರ ಮೂರ್ಖತನ.
ಮತ್ತೊಂದು ಫಾರ್ಮಲಾ ಇದೆ. ಅದು ಒಂದು ಸಾಂಗ್ ಚೆನ್ನಾಗಿ ಮಾಡಿಕೊಂಡು, ಅದನ್ನು ವೈರಲ್ ಮಾಡಿ ಪ್ರೇಕ್ಷಕನನ್ನು ಚಿತ್ರಮಂದಿರದತ್ತ ಸೆಳೆಯುವುದು. ಇವುಗಳಿಂದ ಹೊರಬಂದು ಸಿನಿಮಾ ಮಾಡಲು ಸಾಧ್ಯವಿಲ್ಲವೆ..?
ಈ ಅಂದರ್ ಬಾಹರ್ ಚಿತ್ರದಲ್ಲೂ ಅದೇ ಹಣೆಬರಹ. ನಾಯಕನಿಗೆ ಡಾನ್ ಹಿನ್ನೆಲೆ (ಶಿವಣ್ಣ-ಸೂರ್ಯ). ಅವನಿಗೊಂದು ವಿರೋಧಿ ಗುಂಪು(ಚಸ್ವಾ). ಇಬ್ಬರ ನಡುವೆ ಹೊಡೆದಾಟ. ಅಲ್ಲಿಂದ ಹೊರಡುವ ಸೂರ್ಯ ಕಾರವಾರಕ್ಕೆ ಬರುತ್ತಾನೆ. ಪೋಲಿಸ್ ಅಟ್ಯಾಕ್. ಆಕ್ಸಿಡೆಂಟ್. ಗಾಯವಾದ ಸ್ನೇಹಿತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಸಿಗುವ ನಾಯಕಿ (ಪಾರ್ವತಿ ಮೆನನ್). ಈ ಎರಡು ಗುಂಪುಗಳ ನಡುವಿನ ಹೊಡೆದಾಟದ ಅಂತರಾಳ ಭೇದಿಸುವ ಒಬ್ಬ ಪೋಲಿಸ್ (ಶಶಿಕುಮಾರ್). ಹೀಗೆ ಕಥೆ ಸಾಗುತ್ತದೆ. ಹುಡುಗಿಯನ್ನು ನಂಬಿಸಲು ಅವನು ಏನೇನೋ ಆಟ ಕಟ್ಟುತ್ತಾನೆ. ಶ್ರೀನಾಥ್-ಅರುಂಧತಿನಾಗ್ ಎಲ್ಲರೂ ಬರುತ್ತಾರೆ. ಮಿಕ್ಕಿದೆಲ್ಲಾ ನೋಡಬೇಕೆನಿಸಿದರೆ ನೋಡಿ.
ನೀವು ಕೊಡುವ ಹಣಕ್ಕೆ ೨೦% ಮನರಂಜನೆ ಸಿಗಬಹುದು. ಅದು ಪಾರ್ವತಿ ಮೆನನ್ ಅಭಿನಯ. ಮತ್ತೊಂದು ಅಂದರ್ ಬಾಹರ್ ಟೈಟಲ್ ಸಾಂಗ್. ಅದೊಂದು ಹಾಡಿಗೆ ಅಷ್ಟೊಂದು ಹಣ ಕರ್ಚುಮಾಡಿ ಮಾಡುವ ಬದಲು, ಸಿನಿಮಾದ ಸ್ಕ್ರಿಪ್ಟ್ ಬಗ್ಗೆ ತಲೆ ಕೆಡಿಸಿಕೊಂಡಿದ್ದರೆ ಚಿತ್ರ ಚೆನ್ನಾಗಿ ಮೂಡಿ ಬರುತ್ತಿತ್ತೋ ಏನೋ..? ಇತ್ತ ಪೂರ್ತಿ ಡಾನ್ ಕಥೆಯನ್ನು ಹೇಳದೆ, ಉತ್ತಮ ಲವ್ ಸ್ಟೋರಿಯನ್ನು ಹೇಳದೆ ನಡು ಕತ್ತರಿಯಲ್ಲಿ ನಿರ್ದೇಶಕ ಫಣೀಶ್ ಸಿಕ್ಕಿಹಾಕಿಕೊಂಡು ಒದ್ದಾಡಿದ್ದಾರೆ.
ಸೀನ್ಗಳನ್ನು ಕಟ್ಟುವುದರಲ್ಲಿ ಜಾಳು ಜಾಳಾಗಿದ್ದು ನೋಡುಗನಿಗೆ ಸೀರಿಯಲ್ ಎನಿಸುತ್ತದೆ. ಮೊದಲ ಸಿನಿಮಾ ಎಂದು ಇಲ್ಲಿ ಎಕ್ಸ್ಕ್ಯೂಸ್ ಕೊಡಲಾಗುವುದಿಲ್ಲ. ಏಕೆಂದರೆ ಅವರು ಮಾಡಿರುವುದು ದೊಡ್ಡ ಬಜೆಟ್ನ, ದೊಡ್ಡ ನಾಯಕನ ಸಿನಿಮಾ. ಇಲ್ಲಿ ದುಡ್ಡು ಕೊಟ್ಟು ಸಿನಿಮಾ ನೋಡಲು ಹೋದ ಪ್ರೇಕ್ಷಕ ಕೆಲವೇ ನಿಮಿಷಗಳಲ್ಲಿ ಬಾಹರ್ ಆಗುತ್ತಾನೆ.ಶೇಖರ್ ಚಂದ್ರು ಕ್ಯಾಮರಾ, ಜೋನಿಹರ್ಷ ಸಂಕಲನ, ಎಮ್.ಎಸ್ ರಮೇಶ್ ಸಂಭಾಷಣೆ ಎಲ್ಲವೂ ಪೇಲವವಾಗಿದೆ. ತಾಂತ್ರಿಕವಾಗಿಯಾದರೂ ಚೆನ್ನಾಗಿ ಮಾಡಬಹುದಾಗಿತ್ತು.
ಸಿನಿಮಾ ರಂಗದ ಹಿರಿಯ ನಾಯಕ ಶಿವಣ್ಣನವರು ಇಂತಹ ಕಥೆಗಳನ್ನು ಒಪ್ಪಿಕೊಳ್ಳುವುದರ ಬದಲು ಛೂಸಿಯಾದರೆ ಒಳ್ಳೆಯದು. ಹೊಸಬರಿಗೆ ಅವಕಾಶ ಕೊಡುವುದು ಅವರ ಒಳ್ಳೆಯ ಗುಣವಾದರೂ, ಅದು ನಿರ್ದೇಶಕನಿಗೂ, ನಿರ್ಮಾಪಕನಿಗೂ ಮಾರಕವಾಗಬಾರದು. ಒಮ್ಮೆ ಸಿನಿಮಾ ಮಾಡಿದ ನಿರ್ಮಾಪಕ, ಮತ್ತೊಂದು ಸಿನಿಮಾ ಮಾಡಲು ಮುಂದೆ ಬರಬೇಕು. ನಿರ್ದೇಶಕನಿಗೆ ಮತ್ತೊಂದು ಸಿನಿಮಾ ಸಿಗುವಂತಾಗಬೇಕು. ಇಲ್ಲವಾದರೆ ಶಿವಣ್ಣನವರ ಪ್ರಯತ್ನ ವ್ಯರ್ಥವಾಗುತ್ತದೆ. ಆದ್ದರಿಂದ ಇನ್ನುಮುಂದೆ ಗುಡ್ಡೆಯಾಗಿ ಬಂದತಂಹ ಕತೆಯನ್ನು ಗುಡ್ಡೆಯಾಗಿ ಒಪ್ಪಿಕೊಳ್ಳುವುದರ ಬದಲು, ಗಟ್ಟಿಕಾಳನ್ನು ತೂಗಿ ಆಯ್ದುಕೊಂಡರೆ ಅಭಿಮಾನಿಗಳಿಗೆ ಒಳ್ಳೆಯ ಸಿನಿಮಾ ನೋಡಲುಸಿಗುತ್ತದೆ.
ಹತ್ತು ಕಟ್ಟುವುದರ ಬದಲು, ಒಂದು ಮುತ್ತು ಕಟ್ಟುವುದು ಲೇಸಲ್ಲವೇ..?