’ ರೆಕ್ಕೆ ಕಟ್ಟಿದ ಮೈನಾ...’
Rating :
Hero :
ಚೇತನ್
Heroine :
ನಿತ್ಯ ಮೆನನ್
Other Cast :
ಶರತ್ ಬಾಬು, ಸುಮನ್ ರಂಗನಾಥ್, ಸುಹಾಸಿನಿ,ಅನಂತನಾಗ್, ಅರುಣ್ ಸಾಗರ್, ತಬಲ ನಾಣಿ,ಮತ್ತಿತರರು.
Director :
ನಾಗಶೇಖರ್
Music Director :
ಜಸ್ಸಿಗಿಪ್ಟ್
Producer :
ರಾಜ್ ಕುಮಾರ್
Release Date :
22-02-2013
'ಕಲರ್ ಫುಲ್' ಇದು ಈ ಚಿತ್ರದ ಕೋಡ್ ವರ್ಡ್. ನಿರ್ದೇಶಕ ನಾಗಶೇಕರ್ ತಮ್ಮ ಹಿಂದಿನ ಚಿತ್ರ 'ಸಂಜು ವೆಡ್ಸ್ ಗೀತಾ'ದಲ್ಲಿ 'ಬ್ಯೂಟಿ' ಎಂಬ ಕೋಡ್ ವರ್ಡ್ ಕೊಟ್ಟಿದ್ದರು. ಸಿನಿಮಾದಿಂದ ಹೊರಗೆ ಬರುತ್ತಿದ್ದಂತೆ ಪ್ರೇಕ್ಷಕರ ಬಾಯಲ್ಲಿ ಆ ಪದಗಳು ಬರಬೇಕೆಂಬುದು ಅವರ ಉದ್ದೇಶ. ಒಂದು ರೀತಿಯ ಟ್ರೆಂಡ್ ಕ್ರಿಯೇಟ್ ಮಾಡಿ ಕಾಲೇಜ್ ಹುಡುಗರನ್ನು ಚಿತ್ರಮಂದಿರದತ್ತ ಸೆಳೆಯುವ ತಂತ್ರ. ಆದರೆ ಈ ಚಿತ್ರದಕ್ಕೆ ನೀಡಿರುವ 'ಕಲರ್ ಫುಲ್ ' ಕೋಡ್ ವರ್ಡ್ ಅಷ್ಟೇನೂ ಸೂಟ್ ಆಗಿಲ್ಲ ಅನ್ನೋದು ಹಲವು ಪ್ರೇಕ್ಷಕರ ಅಭಿಪ್ರಾಯ. ಆದರೆ ಚಿತ್ರದಲ್ಲಿ ಎಲ್ಲಾ ಫ್ರೇಮ್ಗಳು ಕಲರ್ ಫುಲ್ ಆಗಿವೆ ಅನ್ನೋದನ್ನು ಮಾತ್ರ ಎಲ್ಲರೂ ಒಪ್ಪಿಕೊಂಡಿದ್ದಾರೆ.
ಚಿತ್ರದಲ್ಲಿ ಮಿನಿಸ್ಟರ್ ತಮ್ಮನ ಕೊಲೆಯಿಂದ ಇನ್ವೆಸ್ಟಿಗೇಶನ್ ಪ್ರಾರಂಭವಾಗುತ್ತದೆ. ಆರೋಪಿಯಾಗಿ ನಾಯಕ ಸತ್ಯನ(ಚೇತನ್) ಬಂಧನವಾಗುತ್ತದೆ. ಅಲ್ಲಿಂದ ಅವನ ಮುದ್ದು ಮುಖ ನೋಡಿ ಎ.ಸಿ.ಪಿ ಅಶೋಕ್ಕುಮಾರ್ ಅವನ ಕಥೆ ಕೇಳುತ್ತಾರೆ. ಅಲ್ಲಿಂದ ಸುಂದರವಾದ ಲೊಕೇಶನ್ನಲ್ಲಿ ಫ್ಲ್ಯಾಶ್ಬ್ಯಾಕ್ ಕಥೆ ಆರಂಭವಾಗುತ್ತದೆ. ಮೈನಾಳೊಂದಿಗಿನ ಪ್ರೇಮ ಕಥೆ ಅದು.
ನಾಯಕ ನಾಯಕಿಯರ ನಡುವೆ ಮೂಡಿರುವ ಪ್ರೀತಿಯನ್ನು ಮನೆಯಲ್ಲಿ ನಿರಾಕರಿಸುತ್ತಾರೆ. ಕುಟುಂಬದ ವಿರೋಧದ ನಡುವೆಯೇ ಮದುವೆಯಾಗಿ ಬೆಂಗಳೂರಿಗೆ ಬರುತ್ತಾರೆ. ಅಲ್ಲಿ ಪುಟ್ಟದೊಂದು ಮನೆಮಾಡಿ ಕಷ್ಟಪಟ್ಟು ಪ್ರೀತಿಯ ಬದುಕು ಮಾಡುತ್ತಿರುತ್ತಾರೆ. ಅಲ್ಲೇ ಒಂದು ವಿಘ್ನ ಕಾದಿರುತ್ತದೆ. ಆ ವಿಘ್ನದಿಂದಲೇ ನಾಯಕನ ಜೀವನದ ಹಾದಿ ಬದಲಾಗುತ್ತದೆ.
ಕೊಲೆ ಆರೋಪದ ಮೇಲೆ ಬಂಧಿತನಾಗಿರುವ ನಾಯಕ. ಗಂಡನಿಂದ ಬೇರೆಯಾಗಿರುವ ನಾಯಕಿ. ಹೀಗೆ ಸಾಗುವ ಕತೆಯಲ್ಲಿ ಇಬ್ಬರೂ ಒಂದಾಗುತ್ತಾರಾ..? ನಾಯಕ ಸತ್ಯ ನಿಜವಾಗಿಯೂ ಕೊಲೆ ಮಾಡಿದ್ದನಾ..? ಎಂಬುದೇ ಚಿತ್ರದ ಕಥೆ.
ಚಿತ್ರದಲ್ಲಿ ಒಂದು ಎಳೆಯನ್ನು ಇಟ್ಟುಕೊಂಡು ಅದನ್ನೇ ಹೇಳಿದ್ದಾರೆ. ಅದರಿಂದ ಏನೂ ಇಂಪ್ರೂ ಮಾಡುವುದಕ್ಕೆ ಹೋಗುವುದಿಲ್ಲ. ಪಾತ್ರ ಪೋಷಣೆ ಮಾಡುವುದನ್ನು ನಮ್ಮ ನಿರ್ದೇಶಕರು ಯಾವಾಗ ಕಲಿಯುತ್ತಾರೋ..? ಅದೇ ಹಳೇ ಪ್ರೇಮ ಕಥೆಯೇ ಮತ್ತೆ ಪ್ರೇಕ್ಷಕನ ಮುಂದೆ ಬಂದಿದೆ ಅಷ್ಟೆ. ಸಿನಿಮಾದಲ್ಲಿ ನಾಯಕ ಒಬ್ಬ ಜಿಮ್ ಕೋಚರ್ ಆಗಿರುತ್ತಾನೆ. ಅವನ ಮೂಲ ಉದ್ದೇಶ, ತಂದೆ ತಾಯಿ ಹೆಸರಿನಲ್ಲಿ ಜಿಮ್ ಓಪನ್ ಮಾಡುವುದು. ಆದರೆ ಮದುವೆ ಮಾಡಿಕೊಂಡು ಬೆಂಗಳೂರಿಗೆ ಬರುವ ಅವನು ಕಾರ್ ಓಡಿಸಿಕೊಂಡು ತಿರುಗಾಡುತ್ತಿರುತ್ತಾನೆ.
ಅವನು ಯಾವ ಕೆಲಸಮಾಡುತ್ತಿದ್ದಾನೆ ಎಂಬುದರ ಅರಿವಿಲ್ಲದೆ ಅವನಿಗೆ ಚೆನೈಗೆ ಟ್ರಾನ್ಸಫರ್ ಮಾಡಿಸುವ ನಿರ್ದೇಶಕ, ಅದನ್ನು ನಂಬುವ ಐ.ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನಾಯಕಿ ಮೈನಾ. ಪಾತ್ರ ಏನೂ..? ಅದರ ಹಾವ-ಭಾವ, ಆ ಪಾತ್ರ ಏನು ಕೆಲಸ ಮಾಡುತ್ತದೆ.? ಅದರ ವೀಕ್ನೆಸ್-ಸ್ಟ್ರೆಂತ್ ಹೀಗೆಲ್ಲ.... ಡೀಟೇಲಿಂಗ್ ಮಾಡಿದ್ದರೆ, ಅದರ ಮುಖೇನ ಸೀನ್ಗಳನ್ನು ಕಟ್ಟಬಹುದಾಗಿತ್ತು.
ಮೊದಲಾರ್ಧದಲ್ಲಿ ಸಿ. ಅಶ್ವತ್ ಹಾಡಿರುವ ಕಾಣದ ಕಡಲಿಗೆ... ಹಾಡು ಸೀಟಿ ಗಿಟ್ಟಿಸಿಕೊಳ್ಳುತ್ತದೆ. ನಂತರ ಬರುವ ಮೊದಲ ಮಳೆಯಂತೆ..ಹಾಡಿಗೂ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಮೈನಾ.. ಮೈನಾ.. ಕೇಳಲು ಇಂಪಾಗಿದ್ದು ಉತ್ತಮ ಕೋರಿಯೋಗ್ರಫಿ ಇದೆ. ಇಡೀ ಸಿನಿಮಾದ ಹೈಲೆಟ್ 'ಸತ್ಯ ಹೆಗಡೆರವರ ಕ್ಯಾಮರ'. ತುಂಬಾ ಮುದ್ದಾಗಿ ಚಿತ್ರಿಸಿ ಕೊಟ್ಟಿದ್ದಾರೆ. ಜೋನಿಹರ್ಷ ಎಡಿಟಿಂಗ್ ಸಿನಿಮಾಗೆ ಹೊಂದಿಕೊಂಡಿದೆ. ಸಿನಿಮಾದಲ್ಲಿ ಕೊಲೆಗಾರನ ಬಗೆಗಿನ ಕ್ಯೂರಿಯಾಸಿಟಿ, ಟೆಕ್ನಿಕಲ್ ಆಸ್ಪೆಕ್ಟ್, ಹಾಗೂ ಲೊಕೇಶನ್ ಬಿಟ್ಟರೆ ಬೇರೇನು ಚೆನ್ನಾಗಿಲ್ಲ. ಅದೇ ರಿಪಿಟೆಡ್ ಸೀನ್ಗಳು, ರಿಪಿಟ್ ಮಾಂಟೇಜ್ ಬೇಸರ ತರಿಸುತ್ತವೆ.
ಚೇತನ್ ಚಳಿ ಬಿಟ್ಟು ಅಭಿನಯಿಸಿದ್ದಾರೆ. ನಿತ್ಯ ಮೆನನ್ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಮೈನಾ.. ಮೈನಾ ಹಾಡಿನಲ್ಲಿ ಕ್ಯೂಟಾಗಿ ಕಾಣುತ್ತಾರೆ. ತಮಿಳಿನ ಶರತ್ ಕುಮಾರ್, ಸುಹಾಸಿನಿ, ಸುಮನ್ ರಂಗನಾಥ್, ಅರುಣ್ ಸಾಗರ್, ತಬಲಾ ನಾಣಿ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ವರದಿ: ನಟರಾಜ್.ಎಸ್ ಭಟ್