ನೈಜ ಕಥೆಗಳನ್ನು ಹೇಳ ಹೊರಡುವ ನಿರ್ದೇಶಕರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಅದರಲ್ಲೂ ಈ ಲವ್ ಎನ್ನುವ ವಿಷಯವಾಗಿ ಹೆಕ್ಕಿ ತೆಗೆದಿರುವ ಕಥೆಗಳಿಗೆ ಇಲ್ಲಿ ಹೆಚ್ಚು ಮರ್ಯಾದೆ. ಎಲ್ಲಿಯವರೆಗೂ ಪ್ರೇಮಕಥೆಗಳಿಗೆ ಮಣೆಹಾಕುವ ನಿರ್ಮಾಪಕರಿರುವರೋ, ನೋಡುವ (ಭಗ್ನ)ಪ್ರೇಮಿಗಳಿರುವರೋ, ಅಲ್ಲಿಯವರೆಗೂ ಈ ಪ್ರೇಮಕಥೆಗಳನ್ನು ಬಿಟ್ಟು ಸಿನಿಮಾ ಮಾಡುವುದಿಲ್ಲ. ಎಕ್ಸ್ಪೆರಿಮೆಂಟಲ್, ಡಿಫರೆಂಟ್ ನರೇಶನ್ ಹೊಂದಿರುವ ಚಿತ್ರಗಳು ಯಾವತ್ತಿಗೂ ಗೆಲ್ಲುತ್ತದೆ, ಕ್ರಿಟಿಕಲಿ ಅಕ್ಲೈಮ್ಡ್ ಆಗುತ್ತದೆ. ಆದರೆ ನೈಜ ಕಥೆ ಎಂದು ಇದ್ದ ಹಾಗೆ ಹೇಳಿದರೆ, ಎಲ್ಲೋ ಒಂದು ಕಡೆ ನೋಡುಗ ತನ್ನನ್ನು ಅಲ್ಲಿ ಕಂಡರೂ, ಮನರಂಜನೆಗೆಂದು ಬಂದವನಿಗೆ ಬೋರಿಂಗ್ ಎನ್ನಿಸುತ್ತದೆ.
ನಿರ್ದೇಶಕ ಆರ್. ಚಂದ್ರು ತಮ್ಮದೇ ಬ್ಯಾನರ್ನಲ್ಲಿ ನಿರ್ಮಿಸಿರುವ ಈ ಚಿತ್ರ ಜನರಿಗೆ ನೀಡಿರುವ ಪರಿ ಹಾಗೆ ಅನ್ನಿಸುತ್ತದೆ. ತಮಿಳಿನ ಚೇರನ್ ಇಂತಹ ಹಲವಾರು ಸಿನಿಮಾವನ್ನು ಮಾಡಿದ್ದಾರೆ. ಅದರಲ್ಲಿ ಕನ್ನಡದಲ್ಲೂ ಒಂದು ಸಿನಿಮಾ ’ಮೈ ಆಟೋಗ್ರಾಫ್’ ಎಂದು ರೀಮೇಕ್ ಮಾಡಲಾಗಿದೆ. ಹಾಗೆ ಬಂದ ಕಥೆಗಳು ಬರಬಾರದು ಎಂದು ಹೇಳುತ್ತಿಲ್ಲ. ಅದೇ ರೀತಿ ಮಾಡುವುದು ಬೇಡ ಎನ್ನುತ್ತಿದ್ದೇವೆ.
ಉತ್ತಮ ಕಥಾ ಹಂದರ ಹೊಂದಿರುವ 'ಚಾರ್ ಮಿನಾರ್' ನಿರೂಪಣೆಯಲ್ಲಿ ಸ್ವಲ್ಪ ಲ್ಯಾಗ್ ಎನಿಸಿದರೂ ಅಂತಿಮತೆಯಲ್ಲಿ ನೋಡುಗನ ಎದೆ ಕರಗುವಂತೆ ಮಾಡುತ್ತದೆ. ಅದರಲ್ಲೂ ಪ್ರೇಕ್ಷಕನೇನಾದರೂ ಪ್ರೇಮಿಯಾಗಿದ್ದರೆ, ಭಗ್ನ ಪ್ರೇಮಿಯಾಗಿದ್ದರೆ ಕೆಲವು ಕಡೆ ಕಣ್ಣೀರಿಡುವಂತೆ ಚಿತ್ರ ಮೂಡಿಬಂದಿದೆ. ಚಿತ್ರ ಮೂಲ ಉದ್ದೇಶದಂತೆ ತಂದೆ ತಾಯಿ ಪ್ರೇಮ, ಉತ್ತಮ ಶಿಕ್ಷಕನ ಮಾರ್ಗದರ್ಶನ, ಕೆಟ್ಟದ್ದೂ ಒಳ್ಳೆಯದು ಎರಡನ್ನೂ ಕಲಿಸುವ ಸ್ನೇಹಿತರು, ಹಾಗು ಸ್ಪೂರ್ತಿಯಾಗಿ ನಿಲ್ಲುವ ಹುಡುಗಿ ಈ ನಾಲ್ಕೂ ಅಂಶಗಳು ಚಾರ್ಮಿನಾರ್ನ ಹಾಗೆ ನಾಲ್ಕು ಕಂಬಗಳು ಎಂಬುದನ್ನು ನಿರ್ದೇಶಕ ತುಂಬಾ ಚೆನ್ನಾಗಿ ತೋರಿಸಿದ್ದಾರೆ.
ಒಂದೇ ಶಾಲೆಯಲ್ಲಿ ಓದಿದ ಸ್ನೇಹಿತರು, ಮತ್ತೆ ಎಲ್ಲರನ್ನು ಸೇರಿಸುವ ಪ್ರಯತ್ನ ಮಾಡುತ್ತಾರೆ. ಅದರಲ್ಲಿ ಉತ್ತಮ ಮಟ್ಟವನ್ನು ತಲುಪಿರುವವರಿಗೆ ಸನ್ಮಾನ ಮಾಡುವ ಯೋಜನೆಯನ್ನು ಅದೇ ಊರಿನಲ್ಲಿರುವ ಗೆಳೆಯರು ಮಾಡುತ್ತಾರೆ, ಅಮೇರಿಕಾದಲ್ಲಿ ಉತ್ತಮ ಹುದ್ದೆಯಲ್ಲಿರುವ ನಾಯಕನಿಗೂ(ಮೋಹನ್-ಪ್ರೇಮ್) ಆಹ್ವಾನ ಹೋಗುತ್ತದೆ. ಅವನು ಬರುವಾಗ ಹಳೆಯ ನೆನಪನ್ನು ಮರುಕಳಿಸುತ್ತಾ ತನ್ನ ಮತ್ತು ರಾಧಾಳ(ಮೇಘನಾ ಗಾವ್ಕರ್) ಪ್ರೇಮ ಕಥೆಯನ್ನು ನಿರೂಪಿಸುತ್ತಾ ಹೋಗುತ್ತಾನೆ. ಹಳೆಯ ಸ್ಕೂಲ್ ನೆನಪು, ಅಲ್ಲಿಂದ ಹೈ ಸ್ಕೂಲ್, ಅಲ್ಲಿ ಸಿಗುವ ರಾಧಾ, ಏಕ ಮುಖ ಪ್ರೇಮ, ಅಲ್ಲಿಂದ ಕಾಲೇಜ್. ಅವಳೊಂದಿಗಿನ ಸಲಿಗೆ, ಓಡಾಟ, ಗಿಫ್ಟ್, ಲವ್ ಹೇಳಲು ಒದ್ದಾಡುತ್ತಿರುವ ಮೋಹನ, ಹೀಗೆ ಅದೆಲ್ಲವೂ ಪ್ರಿಸ್ಸಿಪಾಲರಿಗೆ ಗೊತ್ತಾಗಿ ಅವರಿಂದ ನೀತಿಬೋಧನೆಯಾಗಿ ಕೆಲಸದ ಕಡೆ, ಗುರಿಯ ಕಡೆ ಗಮನ ಕೊಡುವ ಮೋಹನ. ಸಿ.ಎ ಮಾಡಬೇಕೆಂದಿರುವ ನಾಯಕಿ ಬೇರೆಡೆ ಹೋಗುತ್ತಾಳೆ. ನಾಯಕ ಉತ್ತಮ ಅಂಕ ಪಡೆದು ಇಂಜಿನಿಯರಿಂಗ್ ಸೇರುತ್ತಾನೆ. ಅಲ್ಲಿ ಅವಳು ಸಿಗುತ್ತಾಳಾ..? ಅವನು ತನ್ನ ಪ್ರೀತಿಯನ್ನು ಗಿಟ್ಟಿಸುತ್ತಾನಾ..? ಹಳೇ ವಿದ್ಯಾರ್ಥಿಗಳ ಸಮಾರಂಭಕ್ಕೆ ಆಕೆ ಬರುತ್ತಾಳಾ.. ಅವಳನ್ನು ಮದುವೆಯಾಗುತ್ತಾನಾ...? ಎಂಬೆಲ್ಲ ವಿಷಯವನ್ನು ತುಂಬಾ ನಾಜೂಕಾಗಿ ಮನಕಲಕುವಂತೆ ನಿರ್ದೇಶಕ ಮಾಡಿರುತ್ತಾರೆ. ಅದೆಲ್ಲವನ್ನು ಚಿತ್ರ ಮಂದಿರದಲ್ಲಿ ನೋಡಬಹುದು. ಪ್ರೇಮಿಯಾಗಿದ್ದರೆ ಕೊಟ್ಟ ಹಣಕ್ಕೆ ಮೋಸವಿಲ್ಲ. ಹಳೆಯ ನೆನಪುಗಳು ಮರುಕಳಿಸಬಹುದು.
ಚಿತ್ರದಲ್ಲಿ ನಾಯಕ ಒಟ್ಟು 5 ವಯೋಮಾನದಲ್ಲಿ ನೋಡಲು ಕಾಣ ಸಿಗುತ್ತಾನೆ. ನಾಯಕಿಯ ಉತ್ತಮ ಅಭಿನಯ, ಹರಿ ಸಂಗೀತದ 5 ಹಾಡುಗಳು, ೩ ಬಿಟ್ಟ್ ಹಾಗು ಕೆ.ಎಸ್. ಚಂದ್ರಶೇಕರ್ರವರ ಛಾಯಾಗ್ರಹಣ ಚೆನ್ನಾಗಿ ಮೂಡಿಬಂದಿದೆ. ಗುರುಕಿರಣ್ರ ಹಿನ್ನೆಲೆ ಸಂಗೀತ ಅಷ್ಟೇನು ಗಮನ ಸೆಳೆಯದಿದ್ದರೂ, ಸಂಕಲನಕಾರ ಪ್ರಕಾಶ್ ತಮ್ಮ ಕೆಲಸ ಮಾಡಿದ್ದಾರೆ. ಕಾಸ್ಟೂಮ್ ವಿಷಯವಾಗಿ ಅಷ್ಟೇನೂ ತಲೆ ಕೆಡಿಸಿಕೊಳ್ಳದ ಸಿನಿಮಾಗಳು ಬರುತ್ತಿರುವಾಗ, ಈ ಚಿತ್ರ ಅಂಥಾ ಅಪವಾದದಿಂದ ದೂರ ನಿಲ್ಲುತ್ತದೆ.
ಚಿತ್ರದ ನಿರ್ದೇಶಕ ಆರ್.ಚಂದ್ರುರವರು ತಮ್ಮ ಕನಸಿನ ಚಾರ್ಮಿನಾರ್ ಅನ್ನು ಚಾರ್ಮಿಟ್ಟುಕೊಂಡು ಮಾಡಿದ್ದಾರೆ. ರಂಗಾಯಣ ರಘು, ಕುಮುದ, ತುಷ, ರಾಜು ತಾಳಿಕೋಟೆ, ಮತ್ತಿತ್ತರು ಪಾತ್ರಗಳಿಗೆ ತಕ್ಕಂತೆ ಜೀವ ತುಂಬಿದ್ದಾರೆ.
ವರದಿ:ನಟರಾಜ್ ಎಸ್ ಭಟ್