ಬಂಗಾರಿ ಚಿತ್ರದಲ್ಲಿ ಯೋಗಿಶ್ ಮತ್ತು ರಾಗಿಣಿ
Rating :
Hero :
ಯೋಗಿಶ್
Heroine :
ರಾಗಿಣಿ ದ್ವಿವೇದಿ
Other Cast :
ರಮೇಶ್ ಭಟ್, ಶರತ್ ಲೋಹಿತಾಶ್ವಾ, ಸಾಧುಕೋಕಿಲ, ದಿನೇಶ್ ಮಂಗ್ಳೂರು, ಇತರರು
Director :
ಮಾ. ಚಂದ್ರು
Music Director :
ಎ,ಎಂ. ನೀಲ್
Producer :
ಎಲ್ಲಪ್ಪ
Release Date :
01-02-2013
'ಏಳಿ ಎದ್ದೇಳಿ.. ನಿರ್ಮಾಪಕರೆ.. ಒಳ್ಳೆ ನಿರ್ದೇಶಕ ಸಿಗುವವರಗೂ ನಿಲ್ಲದಿರಿ', ಹಾಗೆಂದು ಎಷ್ಟು ಸಿನಿಮಾ ಮಾಡಿ ಕೈ ಸುಟ್ಟಿಕೊಳ್ಳಲಾಗುತ್ತದೆ. ಈ ಗಾಂಧೀ ನಗರದಲ್ಲಿ ಅದೇಕೆ ಇಂತಾ ಸಿನಿಮಾಗಳನ್ನು ಮಾಡಲು ನಿರ್ಮಾಪಕರು ಕೈಹಾಕುತ್ತಾರೋ ಗೊತ್ತಿಲ್ಲ. ಹಣದ ಹುಚ್ಚು, ಹೆಸರಿನ ಹುಚ್ಚು, ಸಿನಿಮಾ ಶೋಕಿ ಇರಬೇಕು. ಯಾವುದೇ ಸದಭಿರುಚಿ ನಿರ್ಮಾಪಕರು ಇಂಥಹಾ ಚಿತ್ರ ಮಾಡಲು ಮುಂದಾಗುವುದಿಲ್ಲ. ಅದಲ್ಲದೆ, ಒಬ್ಬ ನಿರ್ದೇಶಕನನ್ನು ನಂಬಿ ಹಣ ಹಾಕಿರುವಾಗ, ಜವಾಬ್ದಾರಿಯುತ ವ್ಯಕ್ತಿ ಅದನ್ನು ಸಮರ್ಥವಾಗಿ ನಿರ್ವಹಿಸಿ ಹಾಕಿದ ಹಣಕ್ಕೆ ಮೋಸವಾದಂತೆ ನಿರ್ಮಾಪಕನನ್ನು ಕಾಪಾಡುವುದಾಗಿರುತ್ತದೆ. ಆದರೆ ನಿರ್ದೇಶಕ ಅಂತಹ ಕೆಲಸ ಮಾಡದೆ ತನ್ನ ಪಾಡಿಗೆ ಏನು ತೋಚುತ್ತದೆಯೋ ಅದನ್ನು ಮಾಡಿದ್ದಾನೆ.
ಕಥೆಯ ವಿಷಯವಾಗಿ, ಪಾತ್ರ ಪೋಷಣೆಯ ವಿಷಯವಾಗಿ, ಸ್ಥಳದ ವಿಷಯವಾಗಿ, ಕಥೆಯ ನಿರೂಪಣೆಯ ವಿಷಯವಾಗಿ ಯಾವುದೇ ರೀತಿಯಿಂದಲೂ ತಲೆ ಕೆಡಿಸಿಕೊಳ್ಳದೆ, ಆರಾಮಾಗಿ ತಮಗೆ ತೋಚಿದಂತೆ, ಹಳೆಯ ವಿಷಯವನ್ನೆ, ಹಳೆಯ ರೀತಿಯಿಂದಲೆ ಹೇಳುತ್ತಾರೆ. ಯಾವುದೇ ರೀತಿಯ ಹೊಸತನವಿಲ್ಲದೆ ಹಳಹಳಿಕೆಯಿಂದ ಪೇಲವವಾಗಿದೆ.
ಯೋಗಿಶ್, ರಾಗಿಣಿ, ಲೋಹಿತಾಶ್ವ, ರಮೇಶ್ ಭಟ್, ಸಾಧುಕೋಕಿಲ ಎಲ್ಲರೂ ಈ ಚಿತ್ರದಲ್ಲಿ ಇದ್ದರೂ ನಿದ್ದೆ ಬರಿಸುತ್ತದೆ. ರಾಗಿಣಿಯ ಅರೆ ಬಟ್ಟೆ, ಆಗಾಗ ಮೈಚಳಿ ಹುಟ್ಟಿಸುತ್ತದೆ.
ಕಥೆ ವಿಷಯಕ್ಕೆ ಬಂದರೆ ಒಬ್ಬ ಹಳ್ಳಿಯ ಬಡ ಹುಡುಗ(ಯೋಗಿ)ಮತ್ತು ಅಲ್ಲಿಯ ಸ್ಥಳಿಯ ರಾಜಕಾರಣಿ ಮಗಳ(ರಾಗಿಣಿ) ಜೊತೆ ಲವ್ ಆಗುತ್ತದೆ. ರಾಜಕಾರಣಿ ಅದಕ್ಕೆ ವಿರೋಧ ವ್ಯಕ್ತ ಪಡಿಸುತ್ತಾನೆ. ಮನೆಯಿಂದ ಓಡಿ ಹೋಗುತ್ತಾರೆ. ಲೋಹಿತಾಶ್ವರ ರಾಜಕೀಯದ ವಿರೋಧಿ ಬಣ. ಇದರ ಮಧ್ಯೆ ರಮೇಶ್ ಭಟ್ರ ವೈಯಕ್ತಿಕ ದ್ವೇಷ. ಈ ಎಲ್ಲವೂ ಪ್ರೇಮಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ಒಟ್ಟಾರೆ ಎಲ್ಲವನ್ನು ಎದುರಿಸಿ ಅವನು ಹೇಗೆ ನಾಯಕಿಯನ್ನು ಕೂಡುತ್ತಾನೆ ಎನ್ನುವುದು ಕಥಾಹಂದರ. ಮುಂದಿನದು ನಿಮಗೇ ಗೊತ್ತಿರಬಹುದು. ಇಷ್ಟಾದರೂ.. ನೋಡಬೇಕೆಂದಿದ್ದರೆ ಹಣ ಕೊಟ್ಟು ನೋಡಿ.
ಎ.ಎಂ ನೀಲ್ರವರ ಆರು ಹಾಡುಗಳಿದ್ದು ಕೆಲವು ಕೇಳಬಹುದು, ಏಕಲವ್ಯ ಸಂಭಾಷಣೆ ಪರವಾಗಿಲ್ಲ. ನಿರಂಜನ್ ಬಾಬು ಛಾಯಾಗ್ರಹಣ ಚೆನ್ನಾಗಿ ಮೂಡಿಬಂದಿದೆ. ಒಟ್ಟಾರೆ ಚಿತ್ರ ಸೀರಿಯಲ್ನಂತೆ ಎಳೆದು, ಉತ್ತಮ ಕಥೆಯ ಕೊರತೆ ಎದ್ದು ಕಾಣುತ್ತದೆ. ನಿರ್ದೇಶಕ ಮಾ.ಚಂದ್ರು ಮುಂದಿನ ಚಿತ್ರಗಳಲ್ಲಿ ಎಲ್ಲವನ್ನು ತಿದ್ದುಕೊಂಡು ಒಳ್ಳೆಯ ಚಿತ್ರ ಕೊಡಲು ಪ್ರಯತ್ನಿಸಲಿ.
ವರದಿ: ನಟರಾಜ್ ಎಸ್. ಭಟ್