ಒಬ್ಬ ನಟನ ಚಿತ್ರ, ಒಂದೇ ಶೈಲಿಯಲ್ಲಿ ಮೂಡಿ ಬರುವುದು ಸಾಮಾನ್ಯ. ಆದರೆ ಪ್ರತೀ ಚಿತ್ರವೂ ಒಂದೊಂದು ಶೈಲಿ ಎಂದರೆ ಅಸಮಾನ್ಯ. ಆದರೆ ಅದುವೇ ರಿಯಲ್ ಸ್ಟಾರ್ನ ರಿಯಾಲಿಟಿ. ಈ ವಾರ ಉಪ್ಪಿಯ ಕಲ್ಪನಾ ಚಿತ್ರ ತೆರೆಗೆ ಅಪ್ಪಳಿಸಿದೆ. ಯಾವ ಪ್ರಚಾರವಿಲ್ಲದೇ 10 ವಾರದ ಬಳಿಕ ಉಪ್ಪಿಯ ದರ್ಶನ, ಅಭಿಮಾನಿಗಳಲ್ಲಿ ಮಂದಹಾಸವನ್ನು ಮೂಡಿಸಿದೆ.
ಶ್ರೀ ತೆನಾಂಡಾಳ್ ಫಿಲಂಸ್ ಅರ್ಪಿಸುವ ಈ ಚಿತ್ರ, ತಮಿಳಿನ ಕಾಂಛನ ಚಿತ್ರದ ರಿಮೇಕ್. ಕನ್ನಡದ ಸಾರಥಿ ಚಿತ್ರದಲ್ಲಿ ನಾಯಕನ ತಂದೆಯ ಪಾತ್ರಧಾರಿ, ಪಾಳೆಗಾರನ ಪಾತ್ರದಲ್ಲಿ ಮಿಂಚಿದ್ದ ಶರತ್ ಕುಮಾರ್, ಅಲ್ಲಿ ಕಾಂಛನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆದರೆ ಇಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಈ ಪಾತ್ರವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿರುವುದು ಅಚ್ಚರಿ. ಏಕೆಂದರೆ ಕೈಯಲ್ಲೋಂದು ಲಾಠಿ, ಮೈ ತುಂಬುವಂತೆ ಖಾಕಿ, ಬಾಯಿ ತುಂಬಾ ಡೈಲಾಗ್ಗಳ ಸರಮಾಲೆ. ಇದು ಡೈಲಾಗ್ ಕಿಂಗ್ನ ವೈಖರಿ. ಇನ್ನು ಮುಖ್ಯವಾಗಿ ಚಿತ್ರದ ನಾಯಕ ನಟ ರಾಘವ ಲಾರೆನ್ಸ್ ಪಾತ್ರಕ್ಕೆ ರಿಯಲ್ಸ್ಟಾರ್ ರಿಯಲ್ ಆಗಿ ಕಾಣಿಸಿಕೊಂಡಿದ್ದರಿಂದ ಪ್ರೇಕ್ಷಕರು ಫುಲ್ ಖುಷ್.
ದಕ್ಷಿಣ ಭಾರತದ ಹೆಸರಾಂತ ನಿರ್ದೇಶಕ, ರಾಮ್ನಾರಾಯಣ್ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಅಲ್ಲದೇ ಇದು ಇವರ 125 ನೇ ಚಿತ್ರ. ಇವರಿಗೆ 9 ಭಾಷೆಗಳಲ್ಲಿ ನಿರ್ದೇಶಿಸಿದ ಪರಿಣಿತಿಯೂ ಇದೆ. 1979 ರಲ್ಲಿ ಹುಣ್ಣಿಮೆಯ ರಾತ್ರಿಯಲ್ಲಿ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಆದ ರಾಮ್ನಾರಾಯಣ್. ಭೈರವಿ, ಶಾಂಭವಿ, ದಾಕ್ಷಾಯಿಣಿ, ಜಗದೀಶ್ವರಿ, ಭುವನೇಶ್ವರಿ, ಶ್ರೀ ಕಾಳಿಕಾಂಭ, ಜಯಸೂರ್ಯ, ಬೊಂಬಾಟ್ಕಾರ್ ನಂತಹ ಅರೆ ಸಾಮಾಜಿಕ, ಪೌರಾಣಿಕ, ಮಕ್ಕಳ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಈಗ ಕಲ್ಪನಾಳ ಸರದಿ.
ಚಿತ್ರದ ಬಗ್ಗೆ ನಿರ್ದೇಶಕ ರಾಮ್ನಾರಾಯಣ್, ’ಪ್ರಸ್ತುತ ತಂತ್ರಜ್ಞಾನ ತುಂಬಾ ಬೆಳೆದಿದೆ. ಆದರೆ ಇದರಿಂದ ಕೆಲಸಗಳು ತುಂಬಾ ಡಿಲೇ ಆಗುತ್ತಿದೆ. ಹಿಂದೆ ದಿನಕ್ಕೆ ಮೂರ್ನಾಲ್ಕು ಹಾಡುಗಳನ್ನು ರೆಕಾರ್ಡ್ ಮಾಡಲಾಗುತ್ತಿತ್ತು. ಆದರೆ ಈಗ ಒಂದು ಹಾಡಿಗಾಗಿ ಮೂರ್ನಾಲ್ಕು ದಿನ ವ್ಯಯಿಸಬೇಕು’ ಎಂದು ಪ್ರಸ್ತುತತೆಯ ಬಗ್ಗೆ ಹಂಚಿಕೊಂಡರು. ಇದರೊಂದಿಗೆ ’ಕಲ್ಪನಾವನ್ನು ಆರಂಭಿಸಿ 10 ತಿಂಗಳುಗಳಾಯಿತು. ಶೂಟಿಂಗ್ 40 ದಿನಗಳಲ್ಲಿ ಆದರೂ ಇಂದಿನ ತಂತ್ರಜ್ಞಾನದಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸ ತುಂಬಾ ನಿಧಾನವಾಯಿತು. ಎಂದು ಚಿತ್ರದ ಬಗೆಗೆ ವಿವರಿಸಿದರು.
ಕಾಂಛನದಲ್ಲಿ ನಾಯಕನ ಹೃದಯದರಸಿ ಲಕ್ಷ್ಮಿ ರೈ. ಅಲ್ಲಿ ತನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ ಈಕೆ ಕಲ್ಪನದಲ್ಲಿಯೂ ಉಪ್ಪಿಯ ಹೃದಯವನ್ನು ತಟ್ಟಿದ್ದಾಳೆ. ಈ ಹಿಂದೆ ದರ್ಶನ್-ಆದಿತ್ಯ ಅಭಿನಯಿಸಿದ ಸ್ನೇಹಾನಾ, ಪ್ರೀತಿನಾ ಚಿತ್ರದಲ್ಲಿಯೂ ಅಭಿನಯಿಸಿದ್ದಳು. ಧೀರ್ಘ ಸಮಯದ ಬಳಿಕ ಕನ್ನಡಕ್ಕೆ ಪುನಃ ಮರಳಿರುವುದು ಪ್ರೇಕ್ಷಕರಲ್ಲಿ ಆಶಾ ದಾಯಕವಾಗಿದೆ. ಉಮಾಶ್ರೀ-ಶೃತಿ ಈ ಚಿತ್ರದಲ್ಲಿ ಅತ್ತೆ-ಸೊಸೆಯಾಗಿ ನಟಿಸಿದ್ದಾರೆ. ಅಂತೆಯೇ ಶೋಭ್ರಾಜ್, ಓಂ ಪ್ರಕಾಶ್ ರಾವ್, ಬುಲ್ಲೇಟ್ ಪ್ರಕಾಶ್ ಮತ್ತಿತರರು ಅಭಿನಯಿಸಿದ್ದಾರೆ.
ಸದ್ದು, ಸುದ್ದಿ ಮಾಡದೇ ಚಿತ್ರ ಮುಗಿಸಿದ ಕಲ್ಪನದಲ್ಲಿ ಒಟ್ಟು 4 ಹಾಡುಗಳಿವೆ. ಇದರಲ್ಲಿ ಉಪೇಂದ್ರ ಅವರ ಸ್ಟೆಪ್ ಅದ್ಬುತವಾಗಿಯೇ ಮೂಡಿಬಂದಿದೆ. ಇದಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಇದಕ್ಕೆ ಸೆನ್ಸಾರ್ ಮಂಡಳಿ ’ಎ’ ಸರ್ಟಿಪಿಕೇಟ್ ನೀಡಿದೆ. ಆದರೂ ಚಿತ್ರಮಂದಿರದಲ್ಲಿ ಹೌಸ್ಫುಲ್ ಪ್ರದರ್ಶನ. ಭಯ ತುಂಬಿದ ಈ ಚಿತ್ರದಲ್ಲಿ ಕೇವಲ ಭಯಾನಕ ತುಂಬದೆ, ಕೆಲವು ದೃಶ್ಯಗಳು ಭಯದೊಂದಿದೆ ಕೊಂಚ, ಹಾಸ್ಯದ ಝಲಕ್ ಇದೆ. ಇನ್ನೂ ವಿಶೇಷವಾಗಿ ಗ್ರಾಫಿಕ್ಸ್ನಿಂದ ಚಿತ್ರ ನೈಜತೆಯನ್ನು ತಾಳಿದೆ. ಮೊದಲ ವಾರ ಭರ್ಜರಿಯಾಗಿ ನರ್ತಿಸುತ್ತಿರುವ ಕಲ್ಪನಾ, ಮುಂದಿನ ದಿನಗಳಲ್ಲಿ ಪ್ರೇಕ್ಷಕರಿಗೆ ಹೇಗೆ ಮುದ ನೀಡುತ್ತಾಳೆ.? ಎಂಬುದನ್ನು ಕಾದು ನೋಡಬೇಕಾಗಿದೆ.