ಅಂಜಿದ.... ಈ.. ಗಂಡು...!
Rating :
Hero :
ಸತೀಶ್ ನೀನಾಸಂ
Heroine :
ಸುಭೀಕ್ಷಾ
Other Cast :
ನಾಗಾಭರಣ, ಸುಮನ್, ರಾಜು ತಾಳಿಕೋಟೆ, ಚಿಕ್ಕಣ್ಣ, ಹೊನ್ನವಳ್ಳಿ ಕೃಷ್ಣ, ಪ್ರಭು, ಮುಂತಾದವರು..
Director :
ಪ್ರವೀಣ್ ರಾಜ್
Music Director :
ಡಿ. ಇಮಾನ್
Producer :
ಶರತ್ ಕುಮಾರ.
Release Date :
30-01-2014
ಹಿಂದೆ ಹಿಟ್ ಆದ ಸಿನಿಮಾಗಳ ಹೆಸರು ಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವ ಮೂಡನಂಬಿಕೆ ಕನ್ನಡದಲ್ಲಿ ಇಂದಿಗೂ ಇದೆ ಎನ್ನುವುದಕ್ಕೆ ಈ ಅಂಜದ ಗಂಡೇ ಸಾಕ್ಷಿ. ಹಿಟ್
ಆದ ಸಿನಿಮಾದ ಹೆಸರು ಜನರನ್ನು ಚಿತ್ರಮಂದಿರಗಳಿಗೆ ಕರೆತಂದು ಸಿನಿಮಾವನ್ನು ಯಶಸ್ವಿಯಾಗಿಸುತ್ತದೆ ಎನ್ನುವ ಭ್ರಮೆಯಲ್ಲಿ ಟೈಟಲ್ ಇಡುತ್ತಿದ್ದಾರೆ. ಆದರೆ ಅವೆಲ್ಲಾ ಕೆಲವು ಸಿನಿಮಾಗಳಿಗೆ ಮಾತ್ರ ಗಿಟ್ಟುತ್ತದೆ. ಈ ಹಿಂದೆ ನಾಗರಹಾವು, ಮಿಂಚಿನ ಓಟ, ಆಕ್ಸಿಡೆಂಟ್, ಎಂದೆಲ್ಲಾ ಹೆಸರಿಟ್ಟು ಬೊಕ್ಕ ಬೋರಲು ಬಿದ್ದ ಘಟನೆಗಳು ಕಣ್ಣೆದುರಿಗಿದೆ.
ಆದರೂ ಅಂಜದ ಗಂಡು ಹೇಗೆ ಸದ್ದು ಮಾಡುತ್ತದೆ ನೋಡಬೇಕು. ಹಿಂದಿನ ಅಂಜದ ಗಂಡಿಗೂ ಈ ಅಂಜದ ಗಂಡಿಗೂ ಏನೂ ಸಂಬಂಧ ಇಲ್ಲ. ಇವನು ಹಳ್ಳಿಯಲ್ಲಿ ಕೆಲಸಕ್ಕೆ ಬಾರದ, ಓದನ್ನು ಅರ್ಧಕ್ಕೆ ಬಿಟ್ಟ ಒಬ್ಬ ಬೇಜವಾಬ್ದಾರಿ, ಪುಕ್ಕಲು ಹುಡುಗ. ಹೆಸರು ಸಂತೋಷ(ಸತೀಶ್). ತಂದೆ ಕಂಟ್ರ್ಯಾಕ್ಟರ್. ಊರಿನ ಎಲ್ಲಾ ಮನೆಗಳ ಕೆಲಸಗಳನ್ನು ಮಾಡಿಸುತ್ತಿರುವ ವ್ಯಕ್ತಿ. ಎದುರು ಮನೆಯ ಹುಡುಗಿ ಗೀತ(ಸುಭೀಕ್ಷ). ಶಿಸ್ತಿನ ಓದಿದ ಹುಡುಗಿ. ಆಕೆಯ ತಂದೆ ಊರಿನ ಯಜಮಾನ. ಮಾತೆತ್ತಿದರೆ ಹೊಡಿ ಬಡಿ ಸಂಪ್ರದಾಯದವನು. ಅವರ ಮನೆಯ ಕೆಲಸವನ್ನು ನಾಯಕ ಮತ್ತು ಅವರ ತಂದೆ ಮಾಡುತ್ತಿರುತ್ತಾರೆ. ನಾಯಕ ಮತ್ತು ನಾಯಕಿ ಚಿಕ್ಕಂದಿನಿಂದ ಒಟ್ಟಿಗೆ ಓದಿ ಬೆಳೆದವರು. ಆಕೆಯೊಂದಿ ಈತನ ಪ್ರೀತಿಯ ಎಪಿಸೋಡ್ ಮುಂದುವರೆಯುತ್ತದೆ. ಆಕೆಯ ಮೇಲೆ ಮೊದಲಿಂದಲೂ ಪ್ರೀತಿಯನ್ನು ಬೆಳೆಸಿಕೊಂಡ ನಾಯಕ ಸ್ನೇಹಿತರ ಹತ್ತಿರ ಸುಮ್ಮನೆ ಇಲ್ಲದನ್ನೆಲ್ಲಾ ಸೇರಿಸಿ ಹೇಳುತ್ತಿರುತ್ತಾನೆ. ಅದನ್ನೇ ನಂಬಿಕೊಂಡು ಅವರು ಇವರಿಬ್ಬರನ್ನು ಒಂದುಮಾಡುವ ಸಲುವಾಗಿ ಓಡಾಡುತ್ತಾರೆ. ಇದರ ನಡುವೆ ಆಕೆಗೆ ನಿಶ್ಚಿತಾರ್ಥವಾಗುತ್ತದೆ. ಆಕೆ ಯಾವತ್ತಿಗೂ ಇವನ ಪ್ರೀತಿಯನ್ನು ಒಪ್ಪಿಕೊಂಡಿರುವುದಿಲ್ಲ. ಹೀಗಿರುವಾಗ ನಾಯಕ ಆಕೆಯ ಮದುವೆ ವಿಷಯವಾಗಿ ಅಪ್ಸೆಟ್ ಆಗುತ್ತಾನೆ. ಆಗ ಸ್ನೇಹಿತರಿಂದ ನಡೆಯುವ ಘಟನೆಯೇ ಸಿನಿಮಾದ ಮುಂದುವರೆಕೆ. ಇಬ್ಬರು ಮದುವೆಯಾಗುತ್ತಾರಾ..? ನಾಯಕನಿಗೆ ಏನಾಗುತ್ತದೆ..? ಸ್ನೇಹಿತರು ಏನು ಮಾಡುತ್ತಾರೆ..? ಎನ್ನವುದೆಲ್ಲಾ ಸಿನಿಮಾದಲ್ಲಿ ನೋಡಿ.
ಕತೆಯಲ್ಲಿ ಧಂ ಇಲ್ಲ. ಮಾಮೂಲಿ ಕತೆ . ನಿರೂಪಣಾ ಶೈಲಿಯಲ್ಲೂ ಹೊಸತು ಕಾಣಿಸುತ್ತಿಲ್ಲ. ಟೆಕ್ನಿಕಲ್ ಆಗಿ ನೋಡಿದರೂ ಯಾವುದೇ ಅಂಶ ಕಾಣುವುದಿಲ್ಲ. ಒಟ್ಟಾರೆ ಸಿನಿಮಾ ಧಾರಾವಾಹಿಯಂತೆ ಎಳೆದುಕೊಂಡು ಹೋಗುತ್ತದೆ. ಯಾವುದೇ ವ್ಯಕ್ತಿ ಕೂಡ ಕ್ಲೈಮ್ಯಾಕ್ಸ್ ಪ್ರಿಡಿಕ್ಟ್ ಮಾಡಬಹುದು. ಇಡೀ ಸಿನಿಮಾದ ಪ್ಲೆಸ್ ಪಾಯಿಂಟ್ ಕಾಮಿಡಿ. ಚಿಕ್ಕಣ್ಣ ಮತ್ತು ರಾಜು ತಾಳಿಕೋಟೆ ಕಾಂಬಿನೇಷನ್ ಸೂಪರ್ ಆಗಿ ವರ್ಕ್ ಆಗಿದೆ. ನೋಡ ನೊಡುತ್ತಾ ಸಿನಿಮಾದ ಆಯಾಮ ನಾಯಕ ನಾಯಕಿಯ ಬದಲಾಗಿ ಕಾಮಿಡಿ ಆಕ್ಟರ್ಗಳ ಕಡೆಗೆ ತಿರುಗುತ್ತದೆ. ಅದು ಒಂದು ಒಳ್ಳೆಯ ತಂತ್ರ. ಯಾವಾಗ ಸಿನಿಮಾದಲ್ಲಿ ಓಘವಿರುವುದಿಲ್ಲ ಆಗ ಸಿನಿಮಾವನ್ನು ಕಾಮಿಡಿಗೆ ತಿರುಗಿಸಲಾಗಿದೆ. ಅದು ಇಲ್ಲಿ ಗಿಟ್ಟುತ್ತದೆ. ಪ್ರೇಮ ಕತೆಯು ಬೇರೆಯದೇ ರೀತಿ ನಡೆಯುತ್ತದೆ. ತಾಂತ್ರಿಕವಾಗಿ ಸುಮಾರಾಗಿದೆ.. ಸಂಗೀತದಲ್ಲಿ ಡಿ.ಇಮಾನ್ ಇನ್ನೂ ಸಾಕಷ್ಟು ಕೆಲಸ ಮಾಡಬೇಕು. ಯಾವುದೇ ಹಾಡು ಉಳಿಯುವುದಿಲ್ಲ. ಕೋರಿಯೋಗ್ರಫಿಯಲ್ಲೂ ಯಾವುದೇ ಹಾಡು ಗಿಟ್ಟುವುದಿಲ್ಲ. ಸುಮ್ಮನೆ ಕಲಾವಿದರನ್ನು ತುಂಬಲಾಗಿದೆ. ಯಾರನ್ನೂ ಸಮರ್ಪಕವಾಗಿ ಬಳಸಲಾಗಿಲ್ಲ.
ಅಭಿನಯ ಚತುರ ಸತೀಶ್ ನಿನಾಸಂ ಸುಮಾರಾಗಿ ಮಾಡಿದ್ದಾರೆ. ಮಂಡ್ಯ ಶೈಲಿಯೊಂದು ಪ್ಲೆಸ್ ಪಾಯಿಂಟ್. ಕೆಲವಾರು ಫ್ರೇಮ್ಗಳಲ್ಲಿ ದ್ಯಾವ್ರೆಯ ಸತೀಶ್ ಕಾಣಿಸುವುದುಂಟು. ಇನ್ನೂ ಒಂದಷ್ಟು ಅಭಿನಯವನ್ನು ತೆಗೆಸಬಹುದಾಗಿತ್ತು. ಹೊಸ ಹುಡುಗಿ ಸುಭಿಕ್ಷಾ ಪರವಾಗಿಲ್ಲ. ಟಿ.ಎಸ್ ನಾಗಾಭರಣ ಮತ್ತು ಸುಮನ್ ತಮ್ಮ ಪಾತ್ರಕ್ಕೆ ಮೋಸಮಾಡಿಲ್ಲ. ನಿರ್ದೇಶಕ ಪ್ರದೀಪ್ ರಾಜ್ ಇನ್ನೂ ಒಂದಷ್ಟು ಕೆಲಸ ಮಾಡಿ ಫುಲ್ ಕಾಮಿಡಿಯಂತೆ ಮಾಡಿದ್ದರೆ ಚೆನ್ನಾಗಿ ಗಿಟ್ಟುತ್ತಿತ್ತು. ಈಗ ನಾಯಕ ಪ್ರಧಾನ ಮಾಡಿ, ಆಕಡೆಯು ಇಲ್ಲ, ಈಕಡೆಯು ಇಲ್ಲ ಎನ್ನುವಂತೆ ನಡುವಲ್ಲಿ ನಿಂತ ಸಿನಿಮಾವಾಗಿದೆ.
ವರದಿಃ ನಟರಾಜ್ ಭಟ್