ಕಮರ್ಶಿಯಲ್ ಮ್ಯಾಜಿಕಲ್ ಭಜರಂಗಿ..
Rating :
Hero :
ಶಿವರಾಜ್ ಕುಮಾರ್
Heroine :
ಐಂದ್ರಿತ ರೈ
Other Cast :
ಸಾಧು, ಬುಲೇಟ್, ತಬಲ ನಾಣಿ
Director :
ಹರ್ಷ
Music Director :
ಅರ್ಜುನ್ ಜನ್ಯ
Producer :
ಮಂಜುನಾಥ ಗೌಡ, ನಟರಾಜ್ ಗೌಡ
Release Date :
12-12-2013
ಮ್ಯಾಜಿಕಲ್ ಸಿನಿಮಾಗಳು ತೆಲುಗುಗಳಲ್ಲಿ ಕಾಣುತಿತ್ತು. ಆದರೆ ಇತ್ತೀಚೆಗೆ ಕನ್ನಡದಲ್ಲಿ ಕೆಲವು ಸಿನಿಮಾಗಳು ಹಾಗೆ ಕಾಣುತ್ತಿದೆ. ಮತ್ತೆ ಒಂದಷ್ಟು ಸಿನಿಮಾಗಳು ಆಸಿನಿಮಾ ದಿಂದ ಈ ಸಿನಿಮಾದಿಂದ ತೆಗೆದುಕೊಂಡು ಸ್ವಂತ ಚಿತ್ರವೆಂದು ಹೇಳಿಕೊಳ್ಳುವ ಪರಿಪಾಠ ಬೆಳೆದು ಬಂದಿದೆ. ಮತ್ತೊಂದಷ್ಟು ಜನ ಯಥಾತ್ತಾಗಿ ಇಳಿಸಿ ಇಸ್ಪಿರೇಷನ್ ಎಂದು ಹೇಳಿ ಜಾರಿಕೊಳ್ಳುತ್ತಾರೆ. ಅದೇರೀತಿ ಮೂಡಿ ಬಂದಿರುವ ಚಿತ್ರವೇ ಭಜರಂಗಿ. ಇತ್ತೀಚೆಗೆ ಬರುತ್ತಿರುವ ಪ್ರಯೋಗ ಶೀಲ ಚಿತ್ರಗಳ ಮುಂದೆ ಭಜರಂಗಿ ಸುಮಾರು ಎನ್ನಿಸುತ್ತದೆ. ಟೆಕ್ನಿಕಲ್ಲಾಗಿ ಚೆನ್ನಾಗಿ ಮಾಡಿದರೆ ಸಿನಿಮಾ ಎನ್ನಿಸಿಕೊಳ್ಳುತ್ತದೆ ಎನ್ನುವುದು ಮಾತ್ರ ಮೂರ್ಖತನ.
ಕಥೆಯ ವಿಚಾರಕ್ಕೆ ಬಂದರೆ ಯಾವುದೇ ವಿಶೇಷವಿಲ್ಲ. ಉತ್ತರ ಕರ್ನಾಟಕದ ಒಂದು ಹಳ್ಳಿ ರಾಮದುರ್ಗ. ಅಲ್ಲಿಂದ ಕತೆ ಪ್ರಾರಂಭವಾಗುತ್ತದೆ. ಊರಿನ ಹೆಣ್ಣುಮಕ್ಕಳನ್ನು ಹಿಡಿದುಕೊಂಡು ಹೋಗಿ ತಾಂತ್ರಿಕ ವಿದ್ಯೆಗೆ ಬಳಸಿ ಬಳಿಕ ಊರಿಗೆ ತಂದು ಬಿಡುತ್ತಿರುತ್ತಾರೆ. ಊರಿನವರೆಲ್ಲಾ ಆ ಮಂತ್ರವಾದಿಗಳಿಗೆ ಶಾಪ ಹಾಕುತ್ತಿರುತ್ತಾರೆ. ಅಲ್ಲಿಂದ ಸಿಟಿಗೆ ಬಂದರೆ ಒಂದು ಮಿಡಲ್ ಕ್ಲಾಸ್ ಫಾಮಿಲಿಯ ಕೆಲಸವಿಲ್ಲದ ಹುಡುಗ ಜೀವ(ಶಿವರಾಜ್ ಕುಮಾರ್) . ಮನೆಯಲ್ಲಿ ಮತ್ತು ಸುತ್ತ ಮುತ್ತಲಲ್ಲಿ ಎಲ್ಲಾ ಕಡೆಯಲ್ಲೂ ಲತ್ತೆ ಹುಡುಗ ಎನ್ನಿಸಿ ಕೊಂಡಿರುತ್ತಾನೆ. ಅವನಿಗೆ ಅಚಾನಕ್ಕಾಗಿ ಸಿಗುವ ನಾಯಕಿ(ಐಂದ್ರಿತ ರೈ) ಇಬ್ಬರ ನಡುವೆ ವಿರಸದಿಂದಲೇ ಪ್ರೇಮ ಪ್ರಾಂಭವಾಗುತ್ತದೆ. ಅದೇ ಕಂಟೀನ್ಯೂ ಆಗುತ್ತದೆ.
ಜೀವನಿಗೆ ತಾಯಿ, ತಾತ, ತಂಗಿ ಇರುತ್ತಾರೆ. ಅವನದೇ ಆದ ಪ್ರಪಂಚ. ತಾಯಿಯಿಂದ ಜಾತಕ ತೊರಿಸುವ ನೆಪದಲ್ಲಿ ದೇವಸ್ಥಾನಕ್ಕೆ ಹೋಗುತ್ತಾರೆ. ಅಲ್ಲಿ ಪ್ರಾಂಭವಾಗುತ್ತದೆ ಕಥೆ. ಆತನ ಜನ್ಮ ರಹಸ್ಯ ವೇನು ..? ಎನ್ನುವುದು ಕ್ಲೀಷಾತ್ಮಕವಾಗುತ್ತಾ ಹೋಗುತ್ತದೆ. ಜೀವ ರಾಮದುರ್ಗಕ್ಕೆ ಹೋಗುತ್ತಾನೆ. ಅಲ್ಲಿ ಕಾಕತಾಳೀಯವೆಂದರೆ ನಾಯಕಿಯು ಬರುತ್ತಾಳೆ. ಇಬ್ಬರ ನಡುವೆ ವೈಮನಸ್ಯ ಇರುತ್ತದೆ. ರಾಮದುರ್ಗದಿಂದ ಸುಮಾರು ವರ್ಷಗಳ ಹಿಂದಿನ ಕತೆಗೆ ಜಾರುತ್ತೇವೆ. ಜನ್ಮ ರಹಸ್ಯ ತಿಳಿಯಲು ಹೋದವನಿಗೆ ರಹಸ್ಯ ತಿಳಿಯುತ್ತದಾ..? ಇಲ್ಲವಾ..? ಪ್ರಸೆಂಟ್ ಗೂ ಪಾಸ್ಟಿಗೂ ಏನು ಸಂಬಂಧ..? ಮಾಂತ್ರಿಕರು ಯಾರು..? ಎಲ್ಲವನ್ನು ಚಿತ್ರದಲ್ಲಿ ನೋಡಿ.
ಮೊದಲಾರ್ದ ಏನೂ ಇಲ್ಲಾ. ದ್ವಿತೀಯಾರ್ಧದಿಂದ ಕತೆ ಪ್ರಾರಂಭವಾಗುತ್ತದೆ. ನಿಮಗೆ ಒಂದು ಮಟ್ಟಿಗೆ ತೆಲುಗಿನ ಖಲೇಜ ನೋಡಿದ ನೆನಪಾಗುತ್ತದೆ. ಸಿನಿಮಾದಲ್ಲಿ ತಾಕತ್ತಿನ ಅಂಶ ಏನೂ ಇಲ್ಲ. ಸಂಭಾಷಣೆಯಂತು ತುಂಬಾ ಬಾಲಿಷವಾಗಿದೆ. ಇನ್ನೂ ನಮ್ಮ ಸಂಭಾಷಣೆ ಕಾರರು ಪಾತ್ರಕ್ಕೆ ಸಂಭಾಷಣೆ ಬರೆಯುವುದನ್ನು ಯಾವಾಗ ಕಲಿಯುತ್ತಾರೋ..? ಕಲಾವಿದರ ಈಗಿನ ವೈಯಕ್ತಿಕವಾದ ವಿಷಯವನ್ನು ಕೇಂದ್ರೀಕರಿಸಿ ಸಂಭಾಷಣೆ ಬರೆದು ಸೀಟಿ ಗಿಟ್ಟಿಸಿಕೊಂಡರೆ, ಕಥೆಯ ಮೂಲ ಪಾತ್ರಕ್ಕೆ ತೂಕ ಎಲ್ಲಿಂದ ಬಂದೀತು..? ಈ ಚಿತ್ರದಲ್ಲಿ ಬರುವಂತಹ ಎಲ್ಲಾ ಪಾತ್ರಗಳು ಸುಮ್ಮನೆ ಮಾತಾಡುತ್ತಾ ಹೋಗುತ್ತದೆ. ಯಾವುದೇ ಪಾತ್ರಗಳಿಗೆ ತನ್ನದೇ ಆದ ಚೌಕಟ್ಟಿಲ್ಲ. ಮಿತಿ ಮೀರಿದ ಮಾತಾಡುತ್ತದೆ. ಉತ್ತರ ಕರ್ನಾಟಕಕ್ಕೆ ಕತೆ ಹೋದರು ಅಲ್ಲೂ ಸಾಮಾನ್ಯವಾಗಿ, ಇತ್ತೀಚಿನ ಬೆಂಗಳೂರು ಕನ್ನಡ ಮಾತಾಡುತ್ತಾರೆ. ಕತೆಗೆ, ಪಾತ್ರಗಳಿಗೆ, ಮಾತುಗಳಿಗೆ ಡೀಟೇಲಿಂಗ್ ಮಾಡುವುದು ಅವಶ್ಯಕ. ಅದನ್ನು ಬಿಟ್ಟು ಸುಮ್ಮನೆ ಹಣವನ್ನು ಸುರಿದು ಸಿನಿಮಾ ಮಾಡುವುದರಲ್ಲಿ ಅರ್ಥವಿಲ್ಲ.
ಬರುವಂತಹ ಕಾಮಿಡಿ ಟ್ರ್ಯಾಕ್ ಸಾಮಾನ್ಯವಾಗಿ ನಗೆಯನ್ನು ಉಂಟುಮಾಡಿದರೂ ಹಳತು ಎನಿಸುತ್ತದೆ. 3 ಸಿನಿಮಾ ಮಾಡಿರುವ ಯುವಕರಾದ ಹರ್ಷರಂತವರೇ ಹೀಗೆ ಕತೆಯನ್ನು ಮಾಡುವಾಗ, ಸಂಭಾಷಣೆಯನ್ನು ಮಾಡುವಾಗ ಎಡವಿದರೆ ಬೇರೆಯವರ ಪಾಡೇನು?॒ ಸಂಗೀತದ ವಿಷಯವಾಗಿ ಯಾವುದೇ ಹಾಡುಗಳು ಮನದಲ್ಲಿ ನಿಲ್ಲುವುದಿಲ್ಲ. ಎಡಿಟಿಂಗ್ ಪರವಾಗಿಲ್ಲ. ಕ್ಯಾಮರ ಚೆನ್ನಾಗಿದೆ. ಕೆಲವಾರು ಬೇಡವಾದ ವಿಷಯಗಳಿಗೆ ಅಧಿಕ ಮೂಮೆಂಟ್ ಇಟ್ಟು ಬೇರೆಕಡೆ ಡೈವರ್ಟ್ ಮಾಡುತ್ತದೆ.
ಕಲಾವಿದರ ಮಟ್ಟಿಗೆ ಎಲ್ಲರೂ ಓವರ್ ಆಕ್ಟಿಂಗ್ ಮಾಡಿದ ಹಾಗೆ ಎನ್ನಿಸುತ್ತದೆ. ಶಿವಣ್ಣ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಿಕ್ಸ್ ಪ್ಯಾಕ್ ಎಲ್ಲಾ ಇಲ್ಲಿ ಎಷ್ಟರ ಮಟ್ಟಿಗೆ ವರ್ಕ್ ಆಗುತ್ತದೆ ಕಾದು ನೋಡಬೇಕು. ಐಂದ್ರಿತ ಪರವಾಗಿಲ್ಲ. ಸಾಧು, ಬುಲೇಟ್, ತಬಲ ನಾಣಿ ಯಾರ ಕಾಮಿಡಿಯು ಅಷ್ಟಾಗಿ ವರ್ಕ್ ಆಗಿಲ್ಲ. ಹರ್ಷ ಇನ್ನೂ ಒಂದಷ್ಟು ಕೆಲಸಮಾಡಿದ್ದರೆ ಚೆನ್ನಾಗಿ ಮಾಡಬಹುದಾಗಿತ್ತು. ಸುಮ್ಮನೆ ಶಿವಣ್ಣ ಅಭಿಮಾನಿಯಾಗಿ ನೋಡಿ ಬರುತ್ತೇನೆ ಎಂದರೆ ಅಡ್ಡಿ ಇಲ್ಲ. ನೊಡಿ.
ವರದಿ ಃ ನಟರಾಜ್ ಭಟ್