ಕಮರ್ಶಿಯಲ್ ದೇವರ ಸಿನಿಮಾ
Rating :
Hero :
ದುನಿಯಾ ವಿಜಿ
Heroine :
ಡಾ.ಭಾರತಿ
Other Cast :
ಕಲ್ಯಾಣಿ, ರಂಗಾಯಣ ರಘು, ಹೊನ್ನವಳ್ಳಿ ಕೃಷ್ಣ, ರಾಘವ
Director :
ವಿಕಾಸ್
Music Director :
ಅರ್ಜುನ್ ಜನ್ಯ
Producer :
ನಾರಾಯಣಮ್ಮ ರುದ್ರಪ್ಪ, ಮಂಜುಳ ರಮೇಶ್
Release Date :
15-08-2013
ಹಿಂದೆಲ್ಲಾ ದುರ್ಗಾಶಕ್ತಿ, ಅಮ್ಮ ನಾಗಮ್ಮ, ನವದುರ್ಗಿ ಹೀಗೆಲ್ಲಾ ಹೆಸರುಗಳನ್ನಿಟ್ಟು ದೈವೀ ಪ್ರಿಯರನ್ನು, ಫ್ಯಾಮಿಲಿಯನ್ನು ಚಿತ್ರಮಂದಿರಕ್ಕೆ ತರುತ್ತಿದ್ದರು. ಆದರೆ ಇಂದು ಕಮರ್ಶಿಯಲ್ ಟೈಟಲ್ಲನಿಟ್ಟು, ಮಾಸ್ ಹೀರೋ ಬಳಸಿಕೊಂಡು ದೇವರ ಸಿನಿಮಾ ತೋರಿಸುವ ಕಾಲ ಬಂದಿದೆ. ಹಾಗೆಂದ ಮಾತ್ರಕ್ಕೆ ದುನಿಯಾ ವಿಜಿ ಸಂಪೂರ್ಣವಾಗಿ ಇಲ್ಲಿ ದೈವೀ ಭಕ್ತನಲ್ಲ. ಫೈಟ್ಗಳಿಲ್ಲ, ಹಾಡುಗಳಿಲ್ಲ ಎಂದು ಅವರ ಅಭಿಮಾನಿಗಳು ನಿರಾಶೆಗೊಳ್ಳುವಂತಿಲ್ಲ. ಇಲ್ಲಿ ವಿಕಾಸ್ ಸ್ವಲ್ಪ ತಲೆ ಓಡಿಸಿದ್ದಾರೆ. ಹೀಗೆಲ್ಲಾ ಸುಮ್ಮನೆ ದೇವರ ಸಿನಿಮಾ ಮಾಡಿದರೆ ಡಿಮ್ಯಾಂಡ್ ಇಲ್ಲ ಎಂದು ತಿಳಿದು, ಅದಕ್ಕೆ ಒಂದು ನಾಯಕಿ ಆಕೆಗೊಂದು ಹಾಡು, ಅವಳಿಗಾಗಿ ಹೊಡಿದಾಡುವ ನಾಯಕ, ಲೋಕಲ್ ಹುಡುಗನ ಪ್ರೀತಿ, ಜೊತೆಗೆ ಆಗಾಗ ನಗಿಸಲು ರಂಗಾಯಣ ರಘು... ಹೀಗೆ ಎಲ್ಲಾ ಕಮರ್ಶಿಯಲ್ ಎಲಿಮೆಂಟ್ಗಳನ್ನು ಸೇರಿಸಿ ಜಯಮ್ಮನ ಮಗ ಎಂದು ಹೆಸರಿಟ್ಟು ಸಿನಿಮಾ ರಿಲೀಸ್ ಮಾಡಿದ್ದಾರೆ.
ಒಟ್ಟಾರೆ ಸಿನಿಮಾ ಓಕೆ. ಮೊದಲಾರ್ಧ ಆರಾಮಾಗಿ ಹೋಗುತ್ತದೆ. ಮಿಕ್ಕಿದ್ದು ನಾವೇ ಯೋಚಿಸಿ ಬರಬಹುದು. ಆದರೆ ದುನಿಯಾ ವಿಜಿಯ ಹೊಸ ಅವತಾರ ನೋಡಲು ಕಾದು ಕೂರಲೇ ಬೇಕು. ಸಿನಿಮಾದ ಕತೆಗೆ ಬಂದರೆ ಒಂದು ಶಕ್ತಿ ದೇವಸ್ಥಾನದಲ್ಲಿ ಜನರ ಮೌಢ್ಯತೆಯನ್ನು ಅರಿತು ಅಲ್ಲಿ ಬಿಸಿನೆಸ್ಸ್ ಮಾಡುವ ಹುಡುಗ(ನಾಗ-ವಿಜಿ) ಅಮ್ಮ(ಜಯಮ್ಮ) ದೇವರ ಸೇವೆ ಮಾಡಿಕೊಂಡು ಇರುವಾಕೆ. ಅದೊಂದು ಭೂತ ಪ್ರೇತ ಬಿಡಿಸುವ ಜಾಗ. ಅಲ್ಲಿ ಫೋಟೋ ತೆಗೆಯುವ ರಘು. ಅಲ್ಲಿಗೆ ಬರುವ ನಾಯಕಿ ಅವಳೊಂದಿಗೆ ಪ್ರೇಮ. ಪ್ರೇತಾತ್ಮಗಳನ್ನು ವಶಪಡಿಸಿಕೊಂಡು ತಾಂತ್ರಿಕ ವಿದ್ಯೆಯಲ್ಲಿ ಯಶಸ್ಸನ್ನುಗಳಿಸಲು ಹೊರಟಿರುವ ಅಘೋರಿಗಳ ಗುಂಪು. ಶಕ್ತಿ ಪೀಠ ಮತ್ತು ಬಲಿ ಪೀಠದ ನಡುವಿನ ಗಲಾಟೆ, ಅದರಿಂದ ತೊಂದರೆಗೆ ಒಳಗಾಗುವ ನಾಯಕ. ಅವನಿಂದ ಇಡೀ ಹಳೆಯ ರೋಚಕ ವಿಷಯ ಬಯಲಾಗುತ್ತದೆ. ಅದು ಏನು..? ಅಘೋರಿಗೂ ನಾಯಕನಿಗೂ ಏನು ಸಂಭಂದ..? ನಾಯಕಿ ಏನಾಗುತ್ತಾಳೆ? ಜಯಮ್ಮನ ಮಗ ಏನಾಗುತ್ತಾನೆ ಸಿನಿಮದಲ್ಲಿ ನೋಡಿ.
ವಿಜಿ, ಸಿನಿಮಾ ಫುಲ್ ತುಂಬಾ ಚೆನ್ನಾಗಿ ಪಾತ್ರವನ್ನು ಕ್ಯಾರಿಮಾಡಿದ್ದಾರೆ. ರಂಗಾಯಣ ರಘು, ವಿಜಿ ಕಾಮಿಡಿ ಚೆನ್ನಾಗಿ ಗಿಟ್ಟಿದೆ. ಆಗಾಗೆ ಬಂದುಹೋಗುವ ನಾಟಕದ ದೃಶ್ಯಗಳು ಬೋರಿಂಗ್ ಎನ್ನಿಸಿದರೂ ಸಹಿಸಿಕೊಳ್ಳಬಹುದು. ನಾಯಕಿ ಅಷ್ಟಕಷ್ಟೆ. ಇನ್ನೂ ಪಳಗ ಬೇಕು.
ಸುಜ್ಞಾನ್ ಛಾಯಾಗ್ರಹಣ ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಹುದು. ಚಿಂತನ್ ಸಂಭಾಷಣೆಯಲ್ಲಿ ಅಲ್ಲಲ್ಲಿ ಉಪೇಂದ್ರರವರು ಬಂದು ಹೋಗುತ್ತಾರೆ. ಸಂಕಲನ ಪರವಾಗಿಲ್ಲ.
ನೀವೇನಾದರೂ ಇದು ಯಾವುದೋ ಲಾಂಗು ಮಚ್ಚು ಸಿನಿಮಾ, ಒಳ್ಳೆ ಲವ್ ಸ್ಟೋರಿ ಇದೆ ಎಂದು ಹೋಗಿ ನಿರಾಶರಾದರೆ ಅದಕ್ಕೆ ನಾವು ಜವಾಬ್ದಾರರಲ್ಲ. ಅಲ್ಲಿ ಮಾಸ್ ವಿಜಿ ಕಂಡರೂ, ಕಡೆಯಲ್ಲಿ ಕೈಮುಗಿದು ಹೊರಬರಬೇಕು. ಮುಂದಿನದು ನಿಮಗೆ ಬಿಟ್ಟಿದ್ದು.
ವರದಿ: ನಟರಾಜ್ ಎಸ್. ಭಟ್