ಅಬ್ಬರಿಸುವ ಕೃಷ್ಣಾವಾತಾರದಲ್ಲಿ ಗೌಣವಾದ ಬೃಂದಾವನ
Rating :
Hero :
ದರ್ಶನ್ ತೂಗುದೀಪ್
Heroine :
ಕಾರ್ತಿಕಾ, ಮಿಲನ
Other Cast :
ದೊಡ್ಡಣ್ಣ, ಶರತ್, ಸಾಧು ಕೋಕಿಲ, ಕುರಿ ಪ್ರತಾಪ್, ಜೈ ಜಗದೀಶ್, ಸಾಯಿಕುಮಾರ್.ಮುಂತಾದವರು
Director :
ಕೆ. ಮಾದೇಶ್
Music Director :
ವಿ.ಹರಿಕೃಷ್ಣ
Producer :
ಸುರೇಶ್ ಗೌಡ, ಶ್ರೀನಿವಾಸ
Release Date :
26-09-2013
ಒಂದೇ ಹೊಡೆತಕ್ಕೆ ನೂರಾರು ಅಡಿಗಳವರೆಗೆ ಹಾರಿ ಬೀಳುವ ಶತೃಪಡೆಯವರು, ಹೊಡೆತ ಬಿದ್ದೊಡನೆ ನೆಲದಿಂದ ಪುಟಿದೇಳಿ ಮತ್ತೇಲ್ಲೋ ದೂರದ ವಸ್ತುವಿಗೆ ಹೊಡೆದು ತಿರುಗಿ ಬೀಳುವವರು, ಕೇವಲ ಕೈ ಎತ್ತಿ ಏ... ಎಂದು ಕೈ ಬೆರಳು ಮುಂದು ಮಾಡಿದೆಡೆಗೆ ಎದುರಾಳಿಯ ಮುಖವೆಲ್ಲಾ ಗಾಳಿಯಿಂದ ವಿಕಾರವಾಗುವುದು ಹೀಗೆ ಇತ್ಯಾದಿ..
ಇತ್ಯಾದಿ... ಏನಿದೆಲ್ಲಾ ಎಂದು ಕೇಳುವಿರಾ..? ಬೃಂದಾವನದ ಫೈಟ್ ಕಂಪೋಜಿಷನ್. ನೋಡುಗರಿಗೆ ಬುದ್ದಿ ಇಲ್ಲ ಎಂದು, ಯೋಚಿಸುವ ಶಕ್ತಿಯಿಲ್ಲ ಎಂದು ಸುಮ್ಮನೆ ಏನು ತೋರಿಸಿದರು ನೋಡುತ್ತಾರೆ ಎಂದು ಚಿತ್ರ ತಂಡ ನಂಬಿದ್ದರೆ ಅದು ಖಂಡಿತಾ ಸುಳ್ಳು. ಒಬ್ಬ ಹೀರೋಗೂ ಸೂಪರ್ ಹೀರೋಗೂ ಇರುವ ಸಾಮಾನ್ಯ ವ್ಯತಾಸವನ್ನು ಅರಿತು ಪಳನಿರಾಜ್ ರವರು ಕಂಪೋಸ್ ಮಾಡಬೇಕಾಗಿತ್ತು. ಅತಿರೇಕದ ಫೈಟ್ಗಳು ಸಿನಿಮಾವನ್ನು, ನಾಯಕನನ್ನು ನಗೆಗೀಡುಮಾಡುವಂತೆ ಆಗಬಾರದು. ಅದು ಬೃಂದಾವನದಲ್ಲಿ ಆಗಿದೆ.
ತೆಲುಗಿನ ನೇಟಿವಿಟಿಯನ್ನು ಕನ್ನಡಕ್ಕೆ ಅಳವಡಿಸುವಲ್ಲಿ ಕೆ.ಮಾದೇಶ್ ಪ್ರಯತ್ನಿಸಿದ್ದಾರೆ. ನಮ್ಮ ತನಕ್ಕೆ ಕತೆಯನ್ನು ಅಳವಡಿಸಿಕೊಂಡು ತೋರಿಸಬಹುದಾಗಿತ್ತು. ಯಾವ ಪ್ರಾಂತ್ಯಕ್ಕೆ ಇದು ಸೇರುತ್ತದೆ ಎನ್ನುವುದೇ ಇಲ್ಲಿ ಪ್ರಶ್ನಾತ್ರಕವಾಗಿ ಉಳಿಯುತ್ತದೆ. ಮನೆ, ವಾತಾವರಣ ಎಲ್ಲವೂ ಉತ್ತರಕರ್ನಾಟಕ ಶೈಲಿಯಲ್ಲಿದ್ದರೆ, ಪ್ರಾದೇಶಿಕತೆ ಮಂಡ್ಯ ಸುತ್ತಮುತ್ತಲಿನದು ಎಂದು ಹೇಳಲಾಗಿದೆ. ಬೃಹದಾಕಾರದ ಸೆಟ್ ಹಾಕಿ ಅಲ್ಲಿ ನೈಜತೆಯನ್ನು ತಂದುಕೊಡುವ ಪ್ರಯತ್ನ ಮಾಡಿದ್ದಾರೆ.
ಇನ್ನು ಕತೆಯ ವಿಷಯವಾಗಿ ಹೇಳುವುದಾದರೆ.. ಹಳೆಯ ಕತೆಗೆ ಇಬ್ಬರು ನಾಯಕಿಯರನ್ನು ಸೇರಿಸಲಾಗಿದೆ. ಅಂದರೆ ಒಡೆದು ಹೋದ ಕುಟುಂಬವನ್ನು ಸೇರಿಸುವ ಕತೆ. ಹೊಸ ಅಂಶವೆಂದರೆ ಕೃಷ್(ದರ್ಶನ್) ಮತ್ತು ಮಧು(ಮಿಲನ) ನಡುವೆ ಪ್ರೇಮಾಂಕುವಾಗಿರುತ್ತದೆ. ಆಕೆ ಅವಳ ಗೆಳತಿಯ(ಭೂಮಿ-ಕಾರ್ತಿಕ) ಕಷ್ಟವನ್ನು ಪರಿಹರಿಸಲು ಕೃಷ್ಣನನ್ನು ಅವಳ ಬಾಯ್ ಫ್ರೆಂಡ್ ಎಂದು ನಾಟಕ ಮಾಡಲು ಕಳುಹಿಸುತ್ತಾಳೆ. ಅವನು ಒಡೆದು ಹೋದ ಭೂಮಿಯ ಮನೆಯನ್ನು ಒಂದು ಮಾಡುತ್ತಾ ಕೂರುತ್ತಾನೆ.
ಇದರ ನಡುವೆ ಕೃಷ್ಣನ ನಿಜವಾದ ಪ್ರೇಯಸಿ ಮಧು ಅಲ್ಲಿಗೆ ಬರುತ್ತಾಳೆ. ಈ ಇಬ್ಬದಿಯ ತರಲೆಯಲ್ಲಿ ತಗುಲಿಕೊಂಡು ಹೊಯ್ದಾಡುವ ನಾಯಕ ಇಡೀ ಕುಟುಂಬವನ್ನು ಒಂದುಮಾಡುತ್ತಾನಾ..? ಇಬ್ಬರಲ್ಲಿ ಯಾರನ್ನು ಮದುವೆಯಾಗುತ್ತಾನೆ, ನಾಯಕಿಯ ಸಮಸ್ಯೆಗಳೇನು..? ಅದನ್ನು ಹೇಗೆ ಬಗೆಹರಿಸುತ್ತಾನೆ..? ಎಂಬುದನ್ನು ಚಿತ್ರಮಂದಿರದಲ್ಲಿ ಸ್ನೇಹಿತರೊಂದಿಗೆ ಹೋಗಿ ನೋಡಿ. ಸಂಸಾರಕ್ಕೆ ಇಷ್ಟವಾಗುತ್ತದೆ ಎನ್ನುವುದು ಕಷ್ಟ. ದರ್ಶನ್ ಅಭಿಮಾನಿಗಳಿಗೆ ಲಾಂಗ್ ಮಚ್ಚ್ ಹಿಡಿಯದ ನಾಯಕ ನಿರಾಸೆ ಹುಟ್ಟಿಸಬಹುದು.
ಕೆ.ವಿ ರಾಜು ಸಂಭಾಷಣೆ ಅತಿರೇಕ. ಇಡೀ ಸಿನಿಮಾದಲ್ಲಿ ದರ್ಶನ್ ಕಾಣುವಹಾಗೆ ಡೈಲಾಗ್ ಇಳಿಸಿದ್ದಾರೆ ಹೊರತು ಪಾತ್ರವಾದ ಕೃಷ್ಣನಿಗಲ್ಲ. ಕೆಲವು ಕಾಮಿಡಿ ಸೀನ್ ಬಿಟ್ಟರೆ ಮಿಕ್ಕೆಲ್ಲಾ ಸುಮಾರು. ಸಂಗೀತ ಹರಿಕೃಷ್ಣ ತಮ್ಮ ಹಳೆಯ ವರಸೆಯನ್ನೇ ಇಲ್ಲಿಯೂ ತೋರಿಸಿದ್ದಾರೆ. ಯಾವುದು ಫ್ರೇಶ್ ಎನ್ನಿಸುವುದಿಲ್ಲ. ಭಟ್ಟರ ಸಾಹಿತ್ಯಕ್ಕೆ ಉಪೇಂದ್ರ ಹಾಡಿರುವುದು ದರ್ಶನ್ಗೆ ಒಪ್ಪುವುದಿಲ್ಲ. ಹಾಡುಗಳಂತು ಸುಮ್ಮನೆ ಬಂದುಹೋಗುತ್ತದೆ.
ಚಿತ್ರಕ್ಕೂ ಹಾಡಿಗೂ ಸಂಬಂಧವೇ ಇಲ್ಲ. ಕ್ಯಾಮರ ಸುಮಾರಾಗಿದೆ. ಸಂಕಲನ ಮೊನಚಾಗಬಹುದಾಗಿತ್ತು. ಒಟ್ಟಾರೆ ನಿರ್ದೇಶಕ ಕೆ. ಮಾದೇಶ್ ತಮ್ಮ ಚಿತ್ರದಲ್ಲಿ ಎಲ್ಲರನ್ನು ಉತ್ತಮವಾಗಿ ದುಡಿಸಿಕೊಳ್ಳಬಹುದಾಗಿತ್ತು.
ಮಿಕ್ಕಂತೆ ದರ್ಶನ್ ಬಗ್ಗೆ ಹೇಳಬೇಕಾಗಿದ್ದೇನು ಇಲ್ಲ. ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿಮಾನಿಗಳು ನೋಡುವ ರೀತಿಯಲ್ಲಿ ಉತ್ತಮವಾಗಿ ಅಭಿನಯಿಸಿದ್ದಾರೆ. ಇಬ್ಬರು ನಾಯಕಿಯರು ಪಳಗಬೇಕು. ಮಿಕ್ಕಂತೆ ಸಾಧು, ಕುರಿ ಪ್ರತಾಪ್ ಕಾಮಿಡಿ ವರ್ಕೌಟ್ ಆಗಿದೆ. ದೊಡ್ಡಣ್ಣ ಪಾತ್ರಕ್ಕೆ ಮೋಸ ಮಾಡಿಲ್ಲ.
ಒಟ್ಟಾರೆ ಹೇಳುವುದಾದದರೆ ಚಿತ್ರದ ಮೂಲ ವಸ್ತುವಾದ ಎಮೊಷನ್ ಅನ್ನು ಹಿಡಿಯುವ ಬದಲು ಹ್ಯೂಮರ್ ಮತ್ತು ಸಾಹಸಕ್ಕೆ ಹೆಚ್ಚಿನ ಪ್ರಾಶಸ್ತ್ಯಾ ನೀಡಿ ಚಿತ್ರ ಮುಗಿಸಿದ್ದಾರೆ.
ವರದಿ: ನಟರಾಜ್ ಎಸ್. ಭಟ್