ಸ್ಪೆಷಲ್ ಇಲ್ಲದ ಡೈರೆಕ್ಟರ್ ಸ್ಪೆಷಲ್
Rating :
Hero :
ಧನಂಜಯ್
Heroine :
.
Other Cast :
ರಂಗಾಯಣ ರಘು, ರಾಮ್, ವತ್ಸಲಾ ಮೋಹನ್, ಸುಮಿತ್ರ, ಗುರುಪ್ರಸಾದ್, ಅನುಪ್ ಸೀಳಿನ್
Director :
ಗುರುಪ್ರಸಾದ್
Music Director :
ಅನುಪ್ ಸೀಳಿನ್
Producer :
ಗೋವಿಂದ ಎಮ್, ಗುರುಪ್ರಸಾದ್ ಇಂಕ್
Release Date :
31-05-2013
ಮಠ, ಎದ್ದೇಳು ಮಂಜುನಾಥ ಚಿತ್ರಗಳ ನಂತರ ಗುರುಪ್ರಸಾದ್ ಮೂರು ವರ್ಷಗಳು ತಡೆದು ಸಿನಿಮಾ ಬಿಡುಗಡೆ ಮಾಡಿದ್ದಾರೆ. ಆದರೆ ಈ ಚಿತ್ರವನ್ನು ಏಕೆ ತಡವಾಗಿ ಬಿಡುಗಡೆ ಮಾಡಲಾಯಿತು..? ಎಂದು ಚಿತ್ರ ನೋಡಿದವರಿಗೆ ಗೊತ್ತಾಗುತ್ತದೆ. ಅಂದರೆ ಅಷ್ಟೋಂದು ಅಚ್ಚುಕಟ್ಟಾಗಿ ಚಿತ್ರ ಮಾಡಿದ್ದಾರೆ ಎಂದು ಅಂದುಕೊಳ್ಳಬೇಡಿ. ಆ ಚಿತ್ರದಲ್ಲಿ ಏನೂ ಇಲ್ಲವಲ್ಲಾ ಎಂಬ ಭಯ ಅವರಲ್ಲಿ ತುಂಬಾ ಕಾಡಿರಬಹುದು. ಅದಕ್ಕೆ ಸರಿಯಾಗಿ ಕನ್ನಡದಲ್ಲಿ ಹಿಂದಿನ ವರ್ಷಗಳಲ್ಲಿ ದೊಡ್ಡ ಬಜೆಟ್ ಹಾಗು ಹೊಸಬರ ಸಿನಿಮಾಗಳು ದಾಳಿ ಇಟ್ಟಿದ್ದವು. ಈ ಎಲ್ಲದರ ಮಧ್ಯೆ ತಮ್ಮ ಸಿನಿಮಾ ಹೇಗೆ ಗೆಲ್ಲಿಸುವುದು ಎಂದು ಯೋಚಿಸುತ್ತಿದ್ದರೂ ಎನ್ನಿಸುತ್ತದೆ. ಸಿನಿಮಾ ರಂಗದವರ ಮೇಲೆಲ್ಲಾ ಹರಿಹಾಯುವ ಇವರು ತಮ್ಮ ಸಿನಿಮಾಗೆ ಏನು ಸಮರ್ಥನೆ ಕೊಡುತ್ತಾರೋ..?
ಒಟ್ಟಾರೆ ಸಿನಿಮಾದ ಆಶಯ ತುಂಬಾ ಚೆನ್ನಾಗಿದೆ. ಒಬ್ಬ ಅನಾಥ ತನ್ನಂತೆಯೇ ಆನಾಥರಾದವರನ್ನ ಕರೆದುಕೊಂಡು ಬಂದು ತಂದೆ, ತಾಯಿ, ತಂಗಿ, ಅಣ್ಣ ಹೀಗೆ ಸಂಬಂಧದ ಹೆಸರುಗಳನ್ನು ಕೊಟ್ಟು ಬಾಳ್ವೆ ಪ್ರಾರಂಭಿಸುತ್ತಾನೆ. ಅವರಿಗೆ ಹಣದ ಒಲವನ್ನು ತೋರಿಸುತ್ತಾನೆ. ಎಲ್ಲರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ತನ್ನ ತಂದೆ ತಾಯಿಯ ಹಾಗೆ ಕಾಣುತ್ತಾನೆ. ಐಭೋಗ ತಂದಿಡುತ್ತಾನೆ. ತಂಗಿಗೆ ಮದುವೆ ಮಾಡಲು ಗಂಡನ್ನು ನೋಡುತ್ತಾನೆ. ಈ ಹಣ ಮತ್ತು ಬಾಂಧವ್ಯಗಳ ನಡುವಿನ ತಿಕ್ಕಾಟವೇ ಸಿನಿಮಾ. ಅವರು ನಿಯತ್ತಾಗಿರುತ್ತಾರೋ..? ಇಲ್ಲವೋ..? ಎನ್ನುವುದೇ ಚಿತ್ರದ ಮೂಲ ಎಳೆ.
ಮೂಲ ಎಳೆ ತುಂಬಾ ಚೆನ್ನಾಗಿದೆ. ಕೊರಿಯನ್ ಮೂವಿಯ ಪ್ಲೇವರ್ ಇಟ್ಟುಕೊಂಡು ಸಿನಿಮಾ ಓಡುತ್ತದೆ. ಕನ್ನಡದಲ್ಲಿ ಇದೊಂದು ಹೊಸ ಪ್ರಯೋಗ. ಆದರೆ ಅದನ್ನು ಸಮರ್ಥವಾಗಿ ಕಟ್ಟಿಕೊಡುವಲ್ಲಿ ಗುರುಪ್ರಸಾದ್ ಸೋತಿದ್ದಾರೆ. ಅವರಲ್ಲಿದ್ದ ಸೃಜನಶೀಲತೆ, ಕ್ರಿಯಾಶೀಲತೆ ಎಲ್ಲವೂ ಕಾಲಿಯಾದಂತೆ ಕಾಣುತ್ತದೆ. ಇಂದು ಡಬ್ಬಲ್ ಮೀನಿಂಗ್ ಡೈಲಾಗ್ಗಳಿಗೇನು ಕಮ್ಮಿ ಇಲ್ಲ. ಯಾವುದೇ ಸಿನಿಮಾವನ್ನು ನೋಡಿದರು ಅದರಲ್ಲಿ ಕೆಲವು ಸಮಯ ನಗಿಸುವ ಪಂಚಿಂಗ್ ಡೈಲಾಗ್ ಸಿಗುತ್ತದೆ. ಅದನ್ನು ಹೊಸತಾಗಿ ಕಟ್ಟಿಕೊಡುವಲ್ಲಿ ಗುರುಪ್ರಸಾದ್ ಹಿಂದಿನ ಎರಡೂ ಸಿನಿಮಾಗಳಲ್ಲಿ ಯಶಸ್ವಿಯಾಗಿದ್ದರೂ, ಇಲ್ಲಿ ಅವೆಲ್ಲವೂ ಗಿಟ್ಟಿಲ್ಲ.
ಗುರುಪ್ರಸಾದ್ ಸಿನಿಮಾ ಎಂದು ಹೋಗುವ ನೋಡುಗನಿಗೆ ಕಂಡಿತಾ ಇದು ನಿರಾಸೆ ಮೂಡಿಸುತ್ತದೆ. ಒಂದು ಫಿಲಾಸಫಿಕಲ್, ಸೀರಿಯಸ್, ಸಸ್ಪೆನ್ಸ್, ಕ್ಯೂರಿಯಾಸಿಟಿ ಕಾದುಕೊಂಡು ಹೋಗುವ ಕಥಾಹಂದರದಲಿ, ತಿಳಿಹಾಸ್ಯ ರೂಪಿಸುವಲ್ಲಿ ಸಮರ್ಥರಾದ ಗುರುಪ್ರಸಾದ್ ಇಲ್ಲಿ ಎಡವಿದ್ದಾರೆ.
ನಾಯಕನಾಗಿ ಧನಂಜಯ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಅವರ ಪಾತ್ರ ಪೋಷಣೆ ಚೆನ್ನಾಗಿದೆ. ನ್ಯಾಚುರಲಾಗಿ ಫೈಟ್ಗಳು ಬಂದಿವೆ. ಕನ್ನಡಕ್ಕೆ ಒಬ್ಬ ಸಮರ್ಥ ನಾಯಕನಾಗುವ ಲಕ್ಷಣಗಳು ಕಂಡುಬರುತ್ತದೆ. ಮುಂದಿನ ಕಮರ್ಶಿಯಲ್ ಚಿತ್ರಗಳಲ್ಲಿ ತಮ್ಮನು ತಾವು ’ಪ್ರೂ’ ಮಾಡಲೇಬೇಕಾದ ಅನಿವಾರ್ಯತೆ ಅವರಿಗಿದೆ. ರಂಗಾಯಣ ರಘು ಸೂಪರ್. ವತ್ಸಲಾ ಮೋಹನ್ ಗುಡ್. ರಾಮ್ ಮತ್ತು ತಂಗಿ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಕ್ಯಾಮರಾ ಮಹೇಂದ್ರ ಸಿಂಹ ತಮ್ಮ ಕೆಲಸ ಮಾಡಿದ್ದಾರೆ. ಅನುಪ್ಸೀಳಿನ್ ಸಂಗೀತದ ಹಾಡನ್ನು ಕೇಳಬಹುದು.
ಚಿತ್ರದ ಕಡೆಯಲ್ಲಿ ಬರುವ ಗುರುಪ್ರಸಾದ್ ಗೆಟಪ್ ತುಂಬಾ ಚೆನ್ನಾಗಿದೆ. ಸ್ಪಲ್ಪ ಕಥೆಯ ವೇಗಕ್ಕೆ ತಕ್ಕಂತೆ ದೃಶ್ಯವನ್ನು ಕಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಪಾತ್ರಗಳು ತಮ್ಮ ತನವನ್ನು ಉಳಿಸಿಕೊಂಡು ಹೋಗುವಂತೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಕತೆಗಾರನ ವಿರುದ್ಧವೆ ಪಾತ್ರ ತಿರುಗಿ ಬೀಳುವುದು ಸೂಪರ್. ಒಟ್ಟಾರೆ ಚಿತ್ರ ಸುಮಾರಾಗಿದೆ.