ಚಾಕೊಲೇಟ್ ಹೀರೋ ದಿಗಂತ್ ಈಗ ’ಬರ್ಫಿ’ ಸವಿಯುತ್ತಿದ್ದಾರೆ. ಹೌದು ಶೇಖರ್ ನಿರ್ದೇಶನದ ’ಬರ್ಫಿ’ ಸವಿಸವಿಯಾಗಿ ಚಿತ್ರೀಕರಣ ಮುಗಿಸಿದ್ದು, ಕಿವಿಗಿಂಪಾದ ಸವಿಯಾದ ಹಾಡುಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕಿದೆ. ಕಳೆದ ವಾರ ಈ ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು. ನಾಯಕ ದಿಗಂತ್, ನಿರ್ದೇಶಕ ಶೇಖರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಆನಂದ್ ಆಡಿಯೋ ಮಾಲೀಕರಾದ ಮೋಹನ್ ಹಾಜರಿದ್ದು ಮಾತನಾಡಿದರು. ಈ ಹಿಂದೆ ’ಪೆರೋಲ್’ ನಂಥ ವಿಭಿನ್ನ ಶೈಲಿಯ ಚಿತ್ರವನ್ನು ಮಾಡಿದ್ದ ಶೇಖರ್ ನಿರ್ದೇಶನದ ೩ನೇ ಚಿತ್ರವಿದು.
ಮೊದಲು ಮಾತನಾಡಿದ ನಿರ್ದೇಶಕ ಶೇಖರ್ ಯಾವಾಗಲೂ ನಮ್ಮ ಹಾಡುಗಳು ಹಾಗಿವೆ, ಹೀಗಿವೆ ಎಂದು ಹೇಳಿಕೊಂಡು ಧ್ವನಿಸುರುಳಿ ಬಿಡುಗಡೆ ಮಾಡುತ್ತೇವೆ. ಅದು ಬೇಡ ಅಂತ ಸಿಡಿಯನ್ನು ಕೇಳುಗರ ಹಾಗೂ ಮಾಧ್ಯಮದವರ ಕೈಗೆ ಮೊದಲು ನೀಡಿ ಹೇಗಿವೆಯೆಂದು ಅವರಿಂದಲೇ ತಿಳಿದುಕೊಳ್ಳು ಕಾತರರಾಗಿದ್ದೇವೆ. ಚಿತ್ರ ಇನ್ನೇನು ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಫಸ್ಟ್ ಕಾಪಿ ಬರುವ ಹಂತದಲ್ಲಿದೆ. ಬರುವ ತಿಂಗಳು ರಾಜ್ಯಾದ್ಯಂತ ಬಿಡುಗಡೆ ಮಡಲು ಪ್ಲಾನ್ ಹಾಕಿಕೊಂಡಿದ್ದೇವೆ ಎಂದು ಹೇಳಿದರು.
ಇನ್ನು ಆನಂದ್ ಆಡಿಯೋ ಮೋಹನ್ ಮಾತನಾಡಿ ಇತ್ತೀಚೆಗೆ ಹಾಡುಗಳು ಚೆನ್ನಾಗಿದ್ದರೂ ಪ್ರೇಕ್ಷಕರನ್ನು ತಲುಪುತ್ತಿಲ್ಲ. ಎಫ್ ಎಂ ಗೆ ಹೋದರೆ ಹಣ ಕೊಡಿ ಅಂತಾರೆ. ಟಿ.ವಿ.ಗಳಲ್ಲೂ ಅದೇ ಪ್ರಾಬ್ಲಂ. ಪತ್ರಿಕೆಗಳಲ್ಲಿ ಈ ಥರದ ಸಿಡಿ ಬಂದಿದೆ ಎಂದು ಬಂದರೆ ಜನ ಸಿಡಿ ಕೊಳ್ಳಲು ಮುಂದೆ ಬರುತ್ತಾರೆ. ದಯವಿಟ್ಟು ಪ್ರೋತ್ಸಾಹ ನೀಡಿ ಎಂದು ಹೇಳಿಕೊಂಡರು.
ಹಾಡುಗಳು ಚೆನ್ನಾಗಿವೆ ಎಂದು ಎಲ್ಲಾ ಕಡೆಯಿಂದ ಅಭಿಪ್ರಾಯ ಬಂದಿದೆ. ಒಂದು ವಿಭಿನ್ನ ಪ್ರಯತ್ನ ಮಾಡಿದ್ದೇವೆ. ಚಿತ್ರದ ಮೊದಲರ್ಧದಲ್ಲಿ ದಿಗಂತ್ ಸಾಫ್ಟ್ವೇರ್ ಕಂಪನಿ ಹುಡುಕಾಟ ಹೀಗೇ ಸಾಗಿದರೆ, ದ್ವಿತೀಯಾರ್ಧದಲ್ಲಿ ಚಿತ್ರ ಪಂಜಾಬ್ಗೆ ಷಿಫ್ಟ್ ಆಗುತ್ತದೆ. ಅಲ್ಲಿನ ಜನರ ನಡೆ, ನುಡಿ, ಸಂಪ್ರದಾಯ, ಪಂಜಾಬಿ ಹುಡುಗಿಯ ಮನೆಯಲ್ಲಿ ನಾಯಕ ಹೇಗೆ ಎಲ್ಲೂ ಬೋರ್ ಹೊಡಿಸದಂತೆ ಮನರಂಜಿಸುತ್ತಾ ಸಾಗುತ್ತದೆ. ದಿಲೀಪ್ರಾಜ್, ಪವಿತ್ರಾ ಲೋಕೇಶ್, ಭಾಮಾ ಎಲ್ಲರೂ ಲವಲವಿಕೆಯಿಂದ ಆಕ್ಟ್ ಮಾಡಿದ್ದಾರೆ. ಪಂಜಾಬಿನ ಸುಂದರ ಪರಿಸರದಲ್ಲಿಯೂ ಹಾಡುಗಳನ್ನು ಶೂಟ್ ಮಾಡಿದ್ದೇವೆ. ಬಾಂಗ್ಡಾ ಶೈಲಿಯ ’ಓ ಮಾಹಿಯಾವೇ’ ಹಾಡು ಎಲ್ಲರಿಗೂ ಇಷ್ಟವಾಗಿದೆ ಎಂದು ನಿರ್ಮಾಪಕ ನಿರ್ದೇಶಕ ಶೇಖರ್ ಮತ್ತೊಮ್ಮೆ ಹೇಳಿದರು.
ನಾಯಕ ದಿಗಂತ್ ಚಿತ್ರದ ವಿಶೇಷತೆಗಳು ಹಾಗೂ ತನ್ನ ಪಾತ್ರದ ಬಗ್ಗೆ ಹೇಳಿಕೊಂಡರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ ಹಾಡುಗಳನ್ನು ಕಂಪೋಜ್ ಮಾಡುವಾಗ ಶೇಖರ್ ಅವರು ತೋರಿದ ಆಸಕ್ತಿಯ ಬಗ್ಗೆ ಹಾಗೂ ಹಾಡುಗಳಲ್ಲಿರುವ ವಿಶೇಷತೆಗಳ ಬಗ್ಗೆ ಮಾತನಾಡಿದರು.