ದೇಶದ 10 ಪಕ್ಷಿಧಾಮಗಳು ಅಪಾಯದ ಅಂಚಿನಲ್ಲಿದ್ದು, ತಕ್ಷಣ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳದಿದ್ದರೆ ಶಾಶ್ವತವಾಗಿ ನಾಶವಾಗಲಿವೆ ಎಂದು ವರದಿಯೊಂದು ಸ್ಪಷ್ಟಪಡಿಸಿದೆ.
ವೈವಿಧ್ಯಮಯ ಪಕ್ಷಿ ಜಾತಿಗಳ ತಾಣವಾಗಿರುವ ಪಕ್ಷಿಧಾಮಗಳನ್ನು ಅಭಿವೃದ್ಧಿಪಡಿಸಲು ಸರ್ಕಾರಗಳು ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಅವುಗಳ ಪರಿಸ್ಥಿತಿ ಹದಗೆಟ್ಟಿದೆ ಎಂದು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ವರದಿ ಹೇಳಿದೆ.
ಮುಂಬೈನ ಸೆವ್ರಿ- ಮಾಹುಲ್ ಕ್ರೀಕ್, ಸೊಲ್ಲಾಪುರದ ಗ್ರೇಟ್ ಇಂಡಿ ಯನ್ ಬಸ್ಟರ್ಡ್ ಪಕ್ಷಿಧಾಮ (ಮಹಾರಾಷ್ಟ್ರ), ಕಚ್ನ ಫ್ಲಾಮಿಂಗೋ ಸಿಟಿ (ಗುಜರಾತ್), ಗುಡ್ಗಾಂವ್ನ ಬಸೈ (ಹರ್ಯಾಣ), ತಿಲ್ಲಾಂಗ್ಚಾಂಗ್ (ಅಂಡಮಾನ್-ನಿಕೋಬಾರ್ ದ್ವೀಪ), ರತ್ಲಂಬಲ್ಲಿರುವ ಸೈಲಾನಾ ಖಾರ್ಮರ್ ಪಕ್ಷಿಧಾಮವೂ ಸೇರಿದಂತೆ ಮಧ್ಯ ಪ್ರದೇಶದ ನಾಲ್ಕು ಪಕ್ಷಿಧಾಮಗಳು ತೀವ್ರ ಸಮಸ್ಯೆ ಯಲ್ಲಿವೆ ಎಂದು ಬಿಎನ್ಎಚ್ಎಸ್ ವರದಿ ಹೇಳಿದೆ. ವರದಿಯಲ್ಲಿಲ್ಲದಿದ್ದರೂ ಇನ್ನೂ ಹಲವು ಧಾಮಗಳು ಕಠಿಣ ಪರಿಸ್ಥಿತಿ ಹೊಂದಿವೆ.
ಭಾರತದಲ್ಲಿರುವ ಪಕ್ಷಿಧಾಮಗಳ ಪೈಕಿ 10 ಧಾಮಗಳು ಕೆಟ್ಟ ಪರಿಸ್ಥಿತಿಯಲ್ಲಿವೆ. ಅವುಗಳಲ್ಲಿ ಕೆಲವು ಕರಾವಳಿ ಭಾಗದಲ್ಲಿವೆ, ಕೆಲವು ಒಳನಾಡಿನಲ್ಲಿವೆ, ಕೆಲವು ಹುಲ್ಲುಗಾವಲು ಪ್ರದೇಶಗಳಲ್ಲಿವೆ, ಕೆಲವು ದಟ್ಟ ಕಾಡಿನಲ್ಲಿವೆ. ಅವುಗಳಲ್ಲಿ ವೈವಿಧ್ಯಮಯ ತಳಿಯ ಪಕ್ಷಿಗಳಿವೆ.
ಜಗತ್ತಿನ 122 ದೇಶಗಳಲ್ಲಿರುವ 12,000 ಪಕ್ಷಿಧಾಮಗಳ ಪೈಕಿ 356 ಪಕ್ಷಿಧಾಮಗಳು ಭಾರತದಲ್ಲಿರುವ 10 ಪಕ್ಷಿಧಾಮಗಳ ಪರಿಸ್ಥಿತಿಯನ್ನೇ ಎದುರಿಸುತ್ತಿವೆ ಎಂದು ಬರ್ಡ್ಲೈಫ್ ಇಂಟರ್ನ್ಯಾಷನಲ್ ಸಂಸ್ಥೆ ಹೇಳಿದೆ.
ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಬಂಕಾಪುರದಲ್ಲಿರುವ ನವಿಲುಧಾಮ, ನವಿಲುಗಳ ರಕ್ಷಣೆಗಾಗಿ ನಿರ್ಮಿಸಲಾದ ರಕ್ಷಿತ ಪ್ರದೇಶವಾಗಿದೆ. 1963ರಲ್ಲಿ ಕೇಂದ್ರ ಸರ್ಕಾರ ನವಿಲನ್ನು ರಾಷ್ಟ್ರೀಯ ಪಕ್ಷಿ ಎಂದು ಘೋಷಿಸಿದ ಬಳಿಕ, 1972ರ ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಈ ನವಿಲುಧಾಮ ಅಸ್ತಿತ್ವಕ್ಕೆ ಬಂದಿದೆ. 2001ರಲ್ಲಿ ಕೇಂದ್ರ ಸರ್ಕಾರ ಇದನ್ನು ಅಧಿಕೃತವಾಗಿ ನವಿಲುಧಾಮ ಎಂಬುದಾಗಿ ಘೋಷಣೆ ಮಾಡಿತು. ದೇಶದಲ್ಲಿರುವ ಎರಡು ನವಿಲುಧಾಮಗಳ ಪೈಕಿ ಇದು ಒಂದು. ಇನ್ನೊಂದು ನವಿಲುಧಾಮ ಹರಿಯಾಣದಲ್ಲಿದೆ.
139 ಎಕ್ರೆ ಪ್ರದೇಶವ್ಯಾಪ್ತಿಯಲ್ಲಿ ಹರಡಿರುವ ಈ ಧಾಮ, ನವಿಲುಗಳ ರಕ್ಷಿತ ಪ್ರದೇಶ. 2009ರಲ್ಲಿ ಮೊದಲ ಬಾರಿಗೆ ನವಿಲು ತಜ್ಞ, ಬೆಂಗಳೂರಿನ ಹರೀಶ್ ಭಟ್ ಇಲ್ಲಿನ ನವಿಲುಗಳ ಗಣತಿ ಮಾಡಿದ್ದರು. ಆಗ ಇಲ್ಲಿ 400 ನವಿಲುಗಳಿದ್ದವು. ನಂತರ ಇವುಗಳ ಗಣತಿ ಮಾಡಲಾಗಿಲ್ಲ. ಆದರೆ, ನಂತರದ ದಿನಗಳಲ್ಲಿ ಇಲ್ಲಿರುವ ನವಿಲುಗಳ ಸಂತತಿ ಕ್ಷೀಣಿಸಿದೆ ಎಂಬುದು ಪಕ್ಷಿತಜ್ಞರ ಅಳಲು.