ಈ ಬಾರಿ ಮುಂಗಾರು ಮಳೆ ಕುಸಿತವಾಗಿದೆ. ಮಳೆಗಾಲದ ಮೂರು ವಾರದಲ್ಲೇ ದೇಶದಲ್ಲಿ ಬರಗಾಲದ ಛಾಯೆ ಆವರಿಸಿದೆ. ಮುಂಗಾರು ಮಾರುತಗಳ ಮೇಲೆ ಎಲ್ ನಿನೋ ಪ್ರಭಾವ ಬೀರಿದ ಹಿನ್ನಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ.
ಇದರ ಪರಿಣಾಮವಾಗಿ ಜೂನ್ ಆರಂಭದಿಂದ ಜೂನ್ 18ರವರೆಗೆ ದೇಶಾದ್ಯಂತ ಕೇವಲ ಶೇ 45ರಷ್ಟು ಮಾತ್ರವೇ ದೀರ್ಘಕಾಲಿನ ಸರಾಸರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಧ್ಯಪ್ರದೇಶ, ಗುಜರಾತ್, ಛತ್ತೀಸ್ ಗಢ, ಮಹಾರಾಷ್ಟ್ರ, ಗೋವಾ ಹಾಗೂ ಒಡಿಶಾ ಸೇರಿದಂತೆ ಮಧ್ಯಭಾರತದಲ್ಲಿ ಇಲ್ಲಿಯವರೆಗೆ ಕೇವಲ 31.7 ಮಿ.ಮೀ.ನಷ್ಟು ಮಳೆಯಾಗಿದೆ. ಇದು ದೀರ್ಘಾವಧಿ ಸರಾಸರಿ ಮಳೆಯ ಪ್ರಮಾಣಕ್ಕಿಂತ ಶೇ.52ರಷ್ಟು ಕಡಿಮೆ.
ಈ ಭಾಗದಲ್ಲಿ ಇಷ್ಟೊತ್ತಿಗಾಗಲೇ 66.2 ಮಿ.ಮೀ.ಮಳೆಯಾಗಬೇಕಿತ್ತು. ಒಟ್ಟಾರೆ ಭಾರತದಲ್ಲಿ ಇದುವರೆಗೆ 43ಮಿ.ಮೀ ನಷ್ಟು ಮಳೆಯಾಗಿದೆ. ಸರಾಸರಿ ಮಳೆಗಿಂತ ಇದು ಶೇ.45ರಷ್ಟು ಕಡಿಮೆಯಾಗಿದೆ. ಇಷ್ಟೊತ್ತಿಗಾಗಲೇ ದೇಶಾದ್ಯಂತ 78 ಮಿ.ಮೀ ಮಳೆ ಸುರಿಯಬೇಕಿತ್ತು.
ದಕ್ಷಿಣ ಒಳನಾಡಿನಲ್ಲಿ ಮಾತ್ರ ಮುಂಗಾರು, ರೈತರಲ್ಲಿ ತುಸು ನಿರೀಕ್ಷೆಯನ್ನು ಮೂಡಿಸಿದೆ. ಇಲ್ಲಿ ವಾಡಿಕೆ ಮಳೆ ಶೇ.95 ಮಿ.ಮೀ ಇದ್ದರೆ, ಬಿದ್ದ ಮಳೆ 97.6 ಮಿ.ಮೀ ಆದರೆ ಇದೇ ವ್ಯಾಪ್ತಿಗೆ ಬರುವ ಚಿಕ್ಕಮಗಳೂರು ಭಾಗದಲ್ಲಿ ಶೇ.31ರಷ್ಟು ಮಳೆ ಕಡಿಮೆಯಾಗಿದೆ.
ಸಮುದ್ರದ ವಾತಾವರಣ ಬಿಸಿಯಾಗುವುದರಿಂದ ಉಂಟಾಗುವ ಎಲ್ ನಿನೋ ಪರಿಣಾಮದಿಂದ ಮುಂಗಾರು ದುರ್ಬಲವಾಗಿದೆ. ಈ ವರ್ಷ ಮುಂಗಾರು ದುರ್ಬಲವಾಗಿದೆ ಸಾಮಾನ್ಯಕ್ಕಿಂತ ಕಡಿಮೆಯಿರಲಿದೆ ಎಂದು ಹವಾಮಾನ ಇಲಾಖೆ ಹಿಂದೆಯೇ ತಿಳಿಸಿತ್ತು.