.
‘ಮಿನಿಮಮ್ ಗವರ್ನಮೆಂಟ್ ಮ್ಯಾಕ್ಸಿಮಮ್ ಗವರ್ನೆನ್ಸ್’ ಎಂಬ ಧ್ಯೇಯದಡಿ ಮೋದಿ ಸರ್ಕಾರ್ ಕೆಲಸ ಆರಂಭಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಎಲ್ಲ ಗ್ರೂಪ್ ಆಫ್ ಮಿನಿಸ್ಟರ್ಸ್ (GoMs) ಹಾಗೂ ಎಂಪರ್ಡ್ ಗ್ರೂಪ್ ಆಫ್ ಮಿನಿಸ್ಟರ್ಸ್ (EGoMs) ಗಳನ್ನು ವಿಸರ್ಜಿಸಿದ್ದರು. ಇದೀಗ, ಯುನೀಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಅರ್ಥಾತ್ ಆಧಾರ ಕಾರ್ಡ್ ಗೆ ಸಂಬಂಧಿಸಿದ ಕ್ಯಾಬಿನೆಟ್ ಕಮಿಟಿ ಸೇರಿದಂತೆ ನಾಲ್ಕು ಕ್ಯಾಬಿನೆಟ್ ಕಮಿಟಿಗಳನ್ನು ವಿಸರ್ಜಿಸಿದ್ದಾರೆ.
ನುಡಿದಂತೆ ನಡೆಯುತ್ತಿರುವ ಮೋದಿ, ಆಧಾರ್ ಕ್ಯಾಬಿನೆಟ್ ಸಮಿತಿ ಜತೆಗೆ ದರಗಳ ಮೇಲಿನ ಕ್ಯಾಬಿನೆಟ್ ಸಮಿತಿ, ಪ್ರಕೃತಿ ವಿಕೋಪ, ಡಬ್ಲ್ಯುಟಿಒ ವ್ಯವಹಾರಗಳ ಕುರಿತ ಕ್ಯಾಬಿನೆಟ್ ಸಮಿತಿಗಳನ್ನು ಅನೂರ್ಜಿತಗೊಳಿಸಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಒಟ್ಟು 9 EGoMs ಗಳು ಹಾಗೂ 21 GoMs ಗಳು ಇದ್ದವು.
ಇದಕ್ಕೆ ಸಂಬಂಧಿಸಿದ ಅಧಿಕೃತ ಪ್ರಕಟಣೆಯನ್ನೂ ಕೇಂದ್ರ ಸರ್ಕಾರ ಹೊರಡಿಸಿದೆ. ಅದರಂತೆ, ಆಧಾರ್ ಮತ್ತು ದರಗಳಿಗೆ ಸಂಬಂಧಿಸಿದ ಹಾಗೂ ಡಬ್ಲ್ಯು ಟಿಓಗೆ ಸಂಬಂಧಿಸಿದ ಎಲ್ಲ ತೀರ್ಮಾನಗಳನ್ನು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಕ್ಯಾಬಿನೆಟ್ ಕಮಿಟಿ ತೆಗೆದುಕೊಳ್ಳಲಿದೆ. ಅದೇ ರೀತಿ, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ಕ್ಯಾಬಿನೆಟ್ ಕಾರ್ಯದರ್ಶಿ ಅಧೀನದಲ್ಲಿರುವ ಸಮಿತಿ ತೆಗೆದುಕೊಳ್ಳಲಿದೆ.
ಮೂಲಗಳ ಪ್ರಕಾರ, ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಕಮಿಟಿ, ರಾಜಕೀಯ ವ್ಯವಹಾರಗಳ ಕ್ಯಾಬಿನೆಟ್ ಕಮಿಟಿ, ರಕ್ಷಣಾ ಕ್ಯಾಬಿನೆಟ್ ಕಮಿಟಿಗಳ ಪುನಾರಚನೆ ಬಗ್ಗೆ ಪ್ರಧಾನಿ ಚಿಂತನೆ ನಡೆಸಿದ್ದಾರೆ.
ಹೀಗೆ ಆಡಳಿತ ವ್ಯವಸ್ಥೆಯಲ್ಲಿ ಮೋದಿ ನಿಧಾನವಾಗಿ ಒಂದೊಂದೇ ಬದಲಾವಣೆ ತರುತ್ತಿದ್ದು, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸರಳೀಕರಿಸತೊಡಗಿದ್ದಾರೆ. ಇದು ಅಧಿಕಾರಿಗಳ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.