ತೇವಾಂಶದ ಕೊರತೆ ಇರುವಂತಹ ಪ್ರದೇಶಗಳಲ್ಲಿ ರಾಸಾಯನಿಕಗೊಬ್ಬರಗಳನ್ನು ಬಿತ್ತನೆ ಬೀಜದ ಜತೆಗೆ ಮಾಡಬಾರದು. ಹೆಚ್ಚು ಸಾವಯವ ಗೊಬ್ಬರ, ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರಗಳನ್ನು ಬಳಸುವುದರಿಂದ ತೇವಾಂಶ ಹಿಡಿದಿಡುವ ಸಾಮರ್ಥ್ಯ ಹೆಚ್ಚಾಗುತ್ತದೆ. ಜತೆಗೆ ಬೀಜಗಳನ್ನು ಸ್ವಲ್ಪ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಬಿತ್ತುವುದರಿಂದ ಬೀಜಗಳಲ್ಲಿ ತಾತ್ಕಾಲಿಕ ಬರನೀರೋದಕತೆ ಉಂಟಾಗುತ್ತದೆ. ರೈತರು ಹೆಚ್ಚು ಪ್ರಮಾಣದಲ್ಲಿ ಅಂತರಬೆಳೆ, ಅಕ್ಕಡಿಕಾಳು ಬೆಳೆ, ಬೆಳೆವೈವಿಧ್ಯತೆಗಳನ್ನು, ಸಜ್ಜೆ, ನವಣೆ, ಸಿರಿಧಾನ್ಯಗಳಾದ ಸಾವೆ, ಬರಗು ಇತ್ಯಾದಿ, ಅಲ್ಪಾವಧಿಯ ಅಲಸಂದೆ, ಹೆಸರು, ಇತರೆ ಬೆಳೆಗಳನ್ನು ಸೂಕ್ತವೆನಿಸುವ ಅಂತರ ಪ್ರಮಾಣದಲ್ಲಿ ಬಿತ್ತುವುದರಿಂದ ಅನುಕೂಲವಾಗುತ್ತದೆ. ಹರಗುವುದರಿಂದ ಕಳೆಗಳನ್ನು ನಿಯಂತ್ರಣಗೊಳಿಸಬಹುದಾಗಿದೆ ಹಾಗೂ ಮಣ್ಣಿನಲ್ಲಿಯ ತೇವಾಂಸ ಆವಿಯಾಗದಂತೆ ತಡೆಯಬಹುದು.
ರೈತರು ಅಲ್ಲಲ್ಲಿ ಹರಿದು ಹೋಗುವ ನೀರನ್ನು ಶೇಖರಿಸಿ ಸಂರಕ್ಷಣಾ ನೀರನ್ನು ಹಾಯಿಸಬಹುದಾಗಿದೆ. ಅಲ್ಪ ಪ್ರಮಾಣದ ನೀರು ಇರುವ ಕೊಲವೆ ಬಾವಿಗಳಿಂದ ಸ್ಪ್ರಿಂಕ್ಲರ್ಸ್ ಬಳಸುವುದರಿಂದ ಹೆಚ್ಚು ಪ್ರದೇಶದಲ್ಲಿ ನೀರಾವರಿ ಕೈಗೊಳ್ಳಬಹುದಾಗಿದೆ. ಅಧಿಕೃತ ಕೃಷಿ ಪರಿಕರ ಮಾರಾಟಗಾರರಲ್ಲಿ ಮಾತ್ರ ಪರಿಕರಗಳನ್ನು ಖರೀದಿಸಬೇಕು. ಅನಧಿಕೃತ ಮೂಲಗಳಿಂದ ಅಥವಾ ಸಂಚಾರಿ ಮಾರಾಟಗಾರರಿಂದ ಕೃಷಿ ಪರಿಕರ ಖರೀದಿಸಬಾರದು.
ಭೂಚೇತನ ತಾಂತ್ರಿಕತೆಗಳಾದ ಮಣ್ಣು, ನೀರಿನ ಸಂರಕ್ಷಣೆ ಕ್ರಮಗಳನ್ನು ಅನುಸರಿಸಿ, ಲಘು ಪೋಷಕಾಂಶಗಳಾದ ಜಿಂಕ್, ಜಿಪ್ಸಂ, ಬೋರಾನ್, ಎರೆಹುಳು ಗೊಬ್ಬರ, ಸಾವಯವ ಸಸ್ಯ ಸಂರಕ್ಷಣಾ ಕ್ರಮಗಳನ್ನು ಬಳಸುವುದು. ಬೀಜೋಪಚಾರವನ್ನು ತಪ್ಪದೇ ಕೈಗೊಳ್ಳಿರಿ. ಗುಣಮಟ್ಟದ ಕೃಷಿ ಆಹಾರ ಉತ್ಪಾದನೆ ಮಾಡಲು ರಾಸಾಯನಿಕಗಳನ್ನು ಅವಶ್ಯವಿದ್ದಾಗ ಸೂಕ್ತ ಪ್ರಮಾಣದಲ್ಲಿ ಮಾತ್ರ ಬಳಸಿರಿ. ಮುಂಗಾರು ಪೂರ್ವ ಮಳೆಗಳು ಅಲ್ಲಲ್ಲಿ ಆಗುತ್ತಿರುವುದು ಹಾಗೂ ಇನ್ನು ಎರಡು ಮೂರು ದಿನ ಅಲ್ಲಲ್ಲಿ ಮಳೆ ಬರುವ ಸೂಚನೆಗಳು ಇರುವುದರಿಂದ ರೈತರು ಬಿದ್ದಂತಹ ಮಳೆಯನ್ನು ಸ್ಥಳದಲ್ಲಿಯೇ ಇಂಗುವಂತೆ ಕೈಗೊಳ್ಳಲು ತಿಳಿಸಿದೆ. ಇಳುಕಲಿಗೆ ಅಡ್ಡಲಾಗಿ ಉಳುಮೆ ಮಾಡುವುದರಿಂದ ಮಣ್ಣಿನ ಸವಕಳಿಯನ್ನು ನಿಯಂತ್ರಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿ ಅಥವಾ ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿಯಲ್ಲಿ ಲಭ್ಯವಿರುವ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳಬಹುದೆಂದು ರಾಣೇಬೆನ್ನೂರು ಸಹಾಯಕ ಕೃಷಿ ನಿರ್ದೇಶಕ ಡಾ.ನಾಗನಗೌಡ ರೆಡ್ಡಿ ಅವರು ತಿಳಿಸಿದ್ದಾರೆ.